ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ವಿದೇಶಗಳಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ದುಡಿದ ಖಾನ್​ಖೋಜೆ

ಅವು 20ನೇ ಶತಮಾನದ ಮೊದಲ ದಶಕದ ಆರಂಭದ ವರ್ಷಗಳು. ಲೋಕಮಾನ್ಯ ತಿಲಕರು ತಮ್ಮ ‘ಕೇಸರಿ’ ಪತ್ರಿಕಾ ಕಚೇರಿಯಲ್ಲಿ, ಬಾಯಲ್ಲಿ ಅಡಿಕೆಚೂರು ಹಾಕಿಕೊಂಡು ಮೆಲ್ಲುತ್ತ ಲೇಖನ ಬರೆಯುತ್ತಿದ್ದಾರೆ. 14ರ ವಯಸ್ಸಿನ ಒಬ್ಬ ಕಿಶೋರ ದಿಢೀರನೆ ಅವರ ಕಚೇರಿ ಪ್ರವೇಶಿಸುತ್ತಾನೆ. ತಿಲಕರು ತಲೆಯೆತ್ತಿ ನೋಡಿ ಮುಗುಳ್ನಗೆ ಬೀರುತ್ತ ಕೇಳುತ್ತಾರೆ- ‘ಯಾರು ಮಗು ನೀನು? ಎಲ್ಲಿಂದ ಬಂದೆ?’.
‘ನಾನು ವಾರ್ಧಾ ನಿವಾಸಿ. ಹೆಸರು ಪಾಂಡುರಂಗ ಸದಾಶಿವ ಖಾನ್​ಖೋಜೆ. ತಮ್ಮ ದರ್ಶನಕ್ಕೆಂದೇ ಬಂದೆ’.
‘ಹೇಳು ನಿನಗೇನು ಬೇಕು ನನ್ನಿಂದ? ಉದ್ಯೋಗವೇ?’.
‘ಉದ್ಯೋಗ ಬೇಡ. ಕೇಸರಿಯಲ್ಲಿ ಬರುವ ನಿಮ್ಮೆಲ್ಲ ಲೇಖನಗಳನ್ನು ಓದುತ್ತೀನಿ. ದೇಶಸೇವೆ ಮಾಡಬೇಕೆಂಬ ಹುಚ್ಚು ಹಿಡಿದಿದೆ ನನಗೆ. ಚಾಪೇಕರ್ ಸೋದರರ ಬಲಿದಾನದಿಂದ ನನ್ನ ಹೃದಯ ದೇಶಸೇವೆ ಮಾಡಬೇಕೆಂದು ತಳಮಳಿಸುತ್ತಿದೆ’.
ಸ್ವಲ್ಪ ಸಮಯ ಕಣ್ಣುಮುಚ್ಚಿ ಆಲೋಚಿಸಿದ ತಿಲಕರು, ‘ನೀನು ಈ ಕಿರಿವಯಸ್ಸಿನಲ್ಲೇ ಒಳ್ಳೆಯ ನಿರ್ಧಾರವನ್ನೇ ತಳೆದಿರುವೆ. ನಮ್ಮ ಸ್ವಾತಂತ್ರ್ಯ ಹೋರಾಟದ ಕೆಲಸವನ್ನು ವಿದೇಶಗಳಲ್ಲೂ ಮಾಡಬಹುದು. ಅದಕ್ಕೆ ಹಲವಾರು ದಾರಿಗಳಿವೆ. ನೀನು ವಿದೇಶಗಳಿಗೆ ಹೋಗು. ಅಲ್ಲಿಂದಲೇ ತಾಯಿನಾಡಿನ ಸೇವೆಮಾಡು’ ಎಂದರು. ಆ ಯುವಕನಿಗೆ ಮುಂದಿನ ದಾರಿ ಕಂಡಿತು. ಅಂದಿನಿಂದ ಅವನ ಮನಸ್ಸಿನಲ್ಲಿ ಅದೇ ಗೀಳಾಯಿತು.
ಪಾಂಡುರಂಗನ ಮನೆತನದ ಹೆಸರು ಖಾನ್​ಖೋಜೆ. ತಂದೆ ಸದಾಶಿವರಾವ್​ಗೆ ವಾರ್ಧಾದ ಕೋರ್ಟ್​ನಲ್ಲಿ ಅರ್ಜಿಗಳನ್ನು ಬರೆಯುವ ಕೆಲಸ. ತಾತ 1857ರ ಸಂಗ್ರಾಮದಲ್ಲಿ ಕ್ರಾಂತಿಕಾರಿ ಸೈನ್ಯದಲ್ಲಿದ್ದ ಯೋಧ. ವಾರ್ಧಾದಲ್ಲಿಯೇ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿಸಿದ ಪಾಂಡುರಂಗ ಮುಂದಿನ ಶಿಕ್ಷಣಕ್ಕಾಗಿ ನಾಗಪುರವನ್ನು ಸೇರಿದ.
ನಾಗಪುರ ತಿಲಕರ ಪ್ರಭಾವದಲ್ಲಿದ್ದ ಒಂದು ಊರು. ಅಲ್ಲಿ ಅವರ ಅನುಯಾಯಿಗಳಾದ ರಾಷ್ಟ್ರವಾದಿ ಕಾಂಗ್ರೆಸ್ಸಿಗರದೇ ಪ್ರಾಬಲ್ಯ. ಅದರಲ್ಲೂ ಹಿಂದೂವಾದಿ ಕಾಂಗ್ರೆಸ್ಸಿಗ ಡಾ. ಮೂಂಜೆಯವರು ಅನಭಿಷಿಕ್ತ ದೊರೆಯಿದ್ದಂತೆ. ಅವರಿಗೆ ಜತೆಯಾಗಿ ನಿಂತು ಅಹರ್ನಿಶಿ ದುಡಿಯುತ್ತಿದ್ದವರು, ಮುಂದೆ ಆರೆಸ್ಸೆಸ್ ಸಂಘಟನೆಯನ್ನು ಆರಂಭಿಸಿದ ಡಾ. ಹೆಡ್ಗೆವಾರ್. ಅವರಿಬ್ಬರ ಸ್ನೇಹ, ಸಾಮೀಪ್ಯ ಪಾಂಡುರಂಗನಿಗೆ ದೊರೆಯಿತು.
ಅಷ್ಟು ಸಾಲದೆಂಬಂತೆ ಆರ್ಯಸಮಾಜದ ಸಂಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿಗಳ ‘ಸತ್ಯಾರ್ಥ ಪ್ರಕಾಶ’ದ ಅಧ್ಯಯನ ಅವನಲ್ಲಿ ದೇಶದ ಪ್ರಾಚೀನ ವೇದಸಾಹಿತ್ಯದ ಕುರಿತು ಶ್ರದ್ಧೆ ಬೆಳೆಸಿತು. ವೇದರೀತ್ಯಾ ಆಲೋಚಿಸುವ ಅಭ್ಯಾಸ ಉಂಟಾಯಿತು. ನಾಗಪುರದ ಸ್ವಾತಂತ್ರೊ್ಯೕದ್ಯಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ‘ರಾಜದ್ರೋಹಿ’ ಎಂಬ ಹಣೆಪಟ್ಟಿಗೆ ಪಾತ್ರನಾಗಿ ತಂದತಾಯಿಯವರೆಗೆ ಪೊಲೀಸರು ದೂರು ತೆಗೆದುಕೊಂಡು ಹೋದಾಗ ಅವನ ವಯಸ್ಸು ಇನ್ನೂ ಹದಿನೇಳು!
‘ವಿದೇಶಗಳಿಗೆ ಹೋಗು’ ಎಂದು ತಿಲಕರು ಪಾಂಡುರಂಗನಿಗೆ ಹೇಳಿದಾಗ 1904ರ ಅರ್ಥರ್ ಯುದ್ಧದಲ್ಲಿ ಜಪಾನ್ ಚಕ್ರಾಧಿಪತಿಗಳ ಸೈನ್ಯ ರಷ್ಯಾ ಸಾಮ್ರಾಜ್ಯವಾದಿ ಸೈನ್ಯದ ಮೇಲೆ ವಿಜಯಶಾಲಿಯಾಗಿತ್ತು. ಏಷ್ಯಾದ ರಾಷ್ಟ್ರವೊಂದು ಪಾಶ್ಚಿಮಾತ್ಯ ರಾಷ್ಟ್ರದ ಮೇಲೆ ಮೇಲುಗೈ ಸಾಧಿಸಿತ್ತು. ಆ ಸುಮಾರಿನಲ್ಲಿ ಪಾಂಡುರಂಗ ಜಪಾನ್​ಗೆ ಹೋದ. ಆಗ ‘ಇಂಡೋ-ಜಪಾನೀಸ್ ಫೌಂಡೇಷನ್’ ಎಂಬ ಸಂಸ್ಥೆ ಅಲ್ಲಿ ರೂಪುಗೊಂಡು ಅದಕ್ಕೆ ಜಪಾನ್ ಮಾಜಿ ಪ್ರಧಾನಮಂತ್ರಿ ಓ-ಕುಮಾ ಶಿಗೆನೋಬು ಅಧ್ಯಕ್ಷನಾಗಿದ್ದ. ಅವನು ಪಾಂಡುರಂಗನ ಬಳಿ ಭಾರತದ ಬಗ್ಗೆ ಸಹಾನುಭೂತಿಯ ಮಾತುಗಳನ್ನಾಡಿದನೇ ಹೊರತು ಯಾವ ಬಗೆಯ ಸಹಾಯವನ್ನೂ ನೀಡಲಿಲ್ಲ.
ಹತಾಶನಾದ ಯುವಕ ಪಾಂಡುರಂಗ, ಅಲ್ಲಿಂದ ದೇಶಭ್ರಷ್ಟನಾಗಿದ್ದ ಚೀನಿ ಕ್ರಾಂತಿಕಾರಿ ನಾಯಕ ಸನ್-ಯಾಟ್-ಸೆನ್​ನನ್ನು ಭೇಟಿಯಾದ. ಅವರಿಬ್ಬರ ಭೇಟಿ ಹೆಚ್ಚು ಫಲಪ್ರದವಾಗಿತ್ತು. ತನಗೆ ಇಂಗ್ಲಿಷ್ ಕಲಿಸಿದರೆ ತಾನು ಆರ್ಥಿಕ ಹಾಗೂ ಮಿಲಿಟರಿ ಕಲೆಯಲ್ಲಿ ತರಬೇತು ನೀಡುವುದಾಗಿ ಸನ್-ಯಾಟ್-ಸೆನ್ ಒಪ್ಪಿಕೊಂಡ. ಜತೆಗೆ, ಭಾರತ ಪ್ರಗತಿ ಸಾಧಿಸಬೇಕಾದರೆ ಅಲ್ಲಿನ ಕೃಷಿ ಪದ್ಧತಿಯನ್ನು ಅಭಿವೃದ್ಧಿಪಡಿಸಬೇಕೆಂದೂ ತಿಳಿಸಿದ. ಈ ಮಾತು ಪಾಂಡುರಂಗನ ಮನದಾಳದಲ್ಲಿ ಭದ್ರವಾಗಿ ಕಚ್ಚಿಕೊಂಡಿತು.
ಸುಮಾರು ಒಂದು ವರ್ಷ ಕಾಲ ಜಪಾನಿನಲ್ಲಿದ್ದ ಪಾಂಡುರಂಗನ ಕಣ್ಣಿಗೆ ಒಂದು ಜಾಹೀರಾತು ಕಂಡಿತು. 1906ರಲ್ಲಿ ಸ್ಯಾನ್​ಫ್ರಾನ್ಸಿಸ್ಕೋದಲ್ಲಿ ಭೂಕಂಪ ಆದನಂತರ ಆ ನಗರವನ್ನು ಮರುನಿರ್ವಿುಸುವ ನಿರ್ಧಾರ ಕೈಗೊಂಡ ಅಮೆರಿಕ ಸರ್ಕಾರ ಆ ಕೆಲಸಕ್ಕಾಗಿ ಕೂಲಿಗಳು ಬೇಕಿದ್ದಾರೆಂದು ಜಾಹೀರಾತು ನೀಡಿತ್ತು. ಮಡಿವಂತಿಕೆಯ ಬ್ರಾಹ್ಮಣ ಮನೆತನದಲ್ಲಿ ಜನಿಸಿದ್ದ ಪಾಂಡುರಂಗ ಅದನ್ನು ಕಿತ್ತೊಗೆದು ಚೀನಿ ಗೆಳೆಯರ ಸಹಾಯದೊಂದಿಗೆ ಹಡಗಿನಲ್ಲಿ ಕೂಲಿಯಂತೆ ದುಡಿಯುತ್ತ ಅಮೆರಿಕ ಸೇರಿಕೊಂಡ. ಆದರೆ ದೇಹದಾರ್ಢ್ಯದ ಕೊರತೆಯಿಂದಾಗಿ ಬಯಸಿಬಂದ ಕೆಲಸ ಸಿಗದೆ, ಆತ ಯಾವ್ಯಾವುದೋ ಉದ್ಯೋಗ ಮಾಡಬೇಕಾಗಿ ಬಂತು; ತಿಲಕರು ಸೂಚಿಸಿದ್ದ ಮಿಲಿಟರಿ ಶಿಕ್ಷಣ ಪಡೆಯಲು, ಬರ್ಕ್​ಲಿ ಸನಿಹದ ಮೌಂಟ್ ತಮಾಲ್​ಪೈಸ್ ಮಿಲಿಟರಿ ಅಕಾಡೆಮಿ ಸೇರಿ ಕೆಲಕಾಲ ಅಲ್ಲಿ ಶಿಕ್ಷಣ ಪಡೆದು ಮಿಲಿಟರಿ ಶಿಸ್ತಿನ ಅನುಭವವನ್ನು ಪಡೆದ. ಇದೇ ವೇಳೆಗೆ, ಅಮೆರಿಕ (ಹಾಗೂ ಕೆನಡಾ)ದಲ್ಲಿ ಕೂಲಿಕೆಲಸ ಮಾಡಲು ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಾರತದ ನಿವಾಸಿಗಳನ್ನು ಸಂರ್ಪಸಿ ಭಾರತ ಬಿಡುಗಡೆಯ ಹೋರಾಟದಲ್ಲಿ ಸೇರುವಂತೆ ಅವರನ್ನು ಪ್ರೇರೇಪಿಸಿದ. ಅದಾಗಲೇ ಅಲ್ಲಿ ನೆಲೆಸಿದ್ದ ಪಂಡಿತ್ ಕಾಶೀರಾಮ್ ಎಂಬ ಉದಾರ ಹೃದಯದ ಶ್ರೀಮಂತ ವ್ಯಾಪಾರಿಯ ಸಹಾಯದೊಂದಿಗೆ ಅಮೆರಿಕದಲ್ಲಿ ‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ ಸ್ಥಾಪಿಸಿ ಅದರ ಮೂಲಕ ಅಮೆರಿಕ ನಿವಾಸಿ ಭಾರತೀಯರನ್ನು ಸಂಘಟಿಸತೊಡಗಿದ.
ಮೌಂಟ್ ತಮಾಲ್​ಪೈಸ್ ಮಿಲಿಟರಿ ಅಕಾಡೆಮಿಯ ಮುಖ್ಯಸ್ಥ ಐರ್ಲೆಂಡಿನ ಮಿಲಿಟರಿ ತಜ್ಞನಾಗಿದ್ದ. ಆಗ ಮೆಕ್ಸಿಕೊದಲ್ಲಿ ಮೆಕ್ಸಿಕನ್ ಕ್ರಾಂತಿ ನಡೆಯುತ್ತಿದ್ದ ಸಮಯ. ನೋಡಲು ಮೆಕ್ಸಿಕನ್​ನಂತೆ ತೋರುತ್ತಿದ್ದ ಖಾನ್​ಖೋಜೆಗೆ ಆ ಮುಖ್ಯಸ್ಥ ವಿಶೇಷ ಆಸ್ಥೆ ವಹಿಸಿ ಮೆಕ್ಸಿಕನ್ ಕ್ರಾಂತಿಕಾರಿಗಳ ಪರಿಚಯ ಮಾಡಿಸಿದ್ದ. ಅದು ಇಡೀ ವಿಶ್ವದಲ್ಲಿ ಪರಿವರ್ತನೆ ಆರಂಭಗೊಂಡಿದ್ದ ಕಾಲ. ಸಾಮ್ರಾಜ್ಯಶಾಹಿ  ಸರ್ವಾಧಿಕಾರಗಳು ನೆಲಕಚ್ಚಿ ಪ್ರಜಾಪ್ರಭುತ್ವ ತಲೆ ಎತ್ತುತ್ತಿದ್ದ ಕಾಲ. ಈಗ ಖಾನ್​ಖೋಜೆ ಮುಂದಿದ್ದ ಗುರಿ ಒಂದೇ- ಸಶಸ್ತ್ರ ಹೋರಾಟದ ಮೂಲಕ ಭಾರತವನ್ನು ಮುಕ್ತಗೊಳಿಸುವುದು.
ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್​ಗೆ ಭಾರತೀಯರನ್ನು ಸೇರ್ಪಡೆ ಮಾಡಿಕೊಳ್ಳುವ ಸಲುವಾಗಿ ಖಾನ್​ಖೋಜೆ ಅಮೆರಿಕದ ಒರೆಗನ್ ರಾಜ್ಯದ ಪೋರ್ಟ್​ಲ್ಯಾಂಡ್​ನಲ್ಲಿ ತ್ಯಾಜ್ಯವಸ್ತುಗಳ ಯಾರ್ಡ್​ನಲ್ಲಿ ಕೂಲಿಯಾಗಿ ದುಡಿಯುತ್ತಿದ್ದ ಭಾರತ ಮೂಲದ ನಿವೃತ್ತ ಸೈನಿಕರನ್ನು ಭಾರತದಲ್ಲಿ ಹೋರಾಡಲು ಸಿದ್ಧಗೊಳಿಸಲಾರಂಭಿಸಿದ. ಆಗ ಅಮೆರಿಕದಲ್ಲಿ ಕ್ರಿಯಾಶೀಲನಾಗಿದ್ದ ಬಂಗಾಳಿ ಕ್ರಾಂತಿಕಾರಿ ತಾರಕನಾಥ್ ದಾಸ್ ಸಂಪರ್ಕವೂ ಖಾನ್​ಖೋಜೆಗೆ ದೊರೆಯಿತು.
ಹೀಗೆ ಅವರ ಪ್ರಯತ್ನ ಮುಂದುವರಿಯುತ್ತಿದ್ದಾಗಲೇ ಲಾಲಾ ಹರದಯಾಳ್, ಭಾಯಿ ಪರಮಾನಂದರ ಪ್ರಯತ್ನಗಳೂ ಅದೇ ನಿಟ್ಟಿನಲ್ಲಿ ಸಾಗುತ್ತಿದ್ದವು. ಅವರ ಗದರ್ ಪಾರ್ಟಿ ಮತ್ತು ಗದರ್ ಪತ್ರಿಕೆಗಳ ಗರ್ಜನೆ ಜೋರಾಗಿತ್ತು. ಅತ್ತ ಜರ್ಮನಿ ರಹಸ್ಯವಾಗಿ ಯುದ್ಧ ಸಿದ್ಧತೆಯಲ್ಲಿ ತೊಡಗಿದ್ದು ಅಲ್ಲಿ ಭಾರತೀಯ ಕ್ರಾಂತಿಕಾರಿಗಳಾದ ವೀರೇಂದ್ರನಾಥ ಚಟ್ಟೋಪಾಧ್ಯಾಯ, ಭೂಪೇಂದ್ರನಾಥ ದತ್ತ, ಚಂಪಕ್ ರಮಣ್ ಪಿಳ್ಳೆ ಮೊದಲಾದವರು ಕ್ರಿಯಾಶೀಲರಾಗಿದ್ದರು. ಅವರ ಮೂಲಕ ಭಾರತೀಯ ಕ್ರಾಂತಿಕಾರಿಗಳಿಗೆ ಆರ್ಥಿಕ ಹಾಗೂ ಶಸ್ತ್ರಾಸ್ತ್ರಗಳ ನೆರವು ಪಡೆಯಲು ಲಾಲಾ ಹರದಯಾಳ್ ಆರಂಭಿಸಿದ್ದರು. ಇಂಡೋ-ಬರ್ಲಿನ್ ಕಮಿಟಿ ಸ್ಥಾಪನೆಯಾಗಿತ್ತು.
ಒರೆಗನ್​ನಲ್ಲಿದ್ದ ಭಾರತೀಯ ನಿವೃತ್ತ ಸೈನಿಕರಿಗೆ ಸಮರತಂತ್ರ ಹಾಗೂ ಪ್ರತ್ಯಕ್ಷ ಹೋರಾಟದ ಶಿಕ್ಷಣವನ್ನು ನೀಡಲು ಖಾನ್​ಖೋಜೆ ಆರಂಭಿಸಿದ್ದ. ಅವರನ್ನು ಭಾರತಕ್ಕೆ ರವಾನಿಸಿ ಅಲ್ಲಿ ಪೊಲೀಸ್ ಠಾಣೆಗಳು, ದಂಡು ಪಾಳಯಗಳನ್ನು ಗುರಿಯಾಗಿರಿಸಿ ಆಕ್ರಮಣ ನಡೆಸಿ, ಮೆಕ್ಸಿಕನ್ ಕ್ರಾಂತಿಯಂತೆ, ಬ್ರಿಟಿಷ್ ಇಂಡಿಯಾದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡುವ ಯೋಜನೆ ಗದರ್ ಪಾರ್ಟಿಯದಾಗಿದ್ದು, ಅದರ ಒಂದು ಅಂಗವೇ ಖಾನ್​ಖೋಜೆ ನಿವೃತ್ತ ಯೋಧರಿಗೆ ನೀಡಿದ ಯುದ್ಧಶಿಕ್ಷಣ.
1914ರ ಮೊದಲ ಮಹಾಯುದ್ಧದ ವೇಳೆ ಈ ಗದರ್ ಆಕ್ರಮಣದ ಯೋಜನೆ ಜಾರಿಗೆ ಬರುವಂತೆ ಯೋಜನೆ ಮಾಡಲಾಗಿತ್ತು. ಆ ಯೋಜನೆಯಂತೆ ಯೋಧರು ಭಾರತಕ್ಕೆ ಹೋಗಲಾರಂಭಿಸಿದಾಗ ಹರದಯಾಳ್ ಬಂಧನವಾಯಿತು. ಅವರು ಜಾಮೀನು ಪಡೆದು ಸ್ವಿಜರ್ಲೆಂಡ್​ಗೆ ಪಲಾಯನ ಮಾಡಿದ್ದೂ ಆಯಿತು.
ಆಗ ಜರ್ಮನ್ನರು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿ ಬ್ರಿಟಿಷರಿಗೆ ಇಂಧನದ ಸರಬರಾಜನ್ನು ತಡೆದು ಬ್ರಿಟಿಷರ ಗಮನವನ್ನು ಬೇರೆಡೆ ಸೆಳೆಯುವ ಯೋಜನೆ ಹಮ್ಮಿಕೊಂಡಿದ್ದರು. ಆದರೆ ಜರ್ಮನಿಯ ಇಮ್ಮಡಿ ಕೈಸರ್ ವಿಲ್​ಹೆಲ್ಮ್ ಎಂಬ ನಾಯಕನಿಗೆ ಭಾರತೀಯರ ಹೋರಾಟಕ್ಕೆ ಬೆಂಬಲ ನೀಡುವ ಇಚ್ಛೆ ಇರಲಿಲ್ಲವಾಗಿ ಕ್ರಾಂತಿಕಾರಿಗಳು ಜರ್ಮನ್ನರಿಂದ ನಿರೀಕ್ಷಿಸಿದ್ದ ಸಹಾಯ ಯಾವುದೂ ದೊರೆಯಲಿಲ್ಲ. ವಿಲ್​ಹೆಲ್ಮ್ ವಾಸ್​ವುುಸ್ ಎಂಬ ಚಾಣಾಕ್ಷ ಜರ್ಮನ್ ಸೈನ್ಯಾಧಿಕಾರಿ ಬ್ರಿಟಿಷ್ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದ. ಖಾನ್​ಖೋಜೆ ಅವನ ಪಡೆಗೆ ಸೇರಿದ. ಅಫ್ಘಾನಿಸ್ತಾನ್ ಮತ್ತು ಬಲೂಚಿಸ್ತಾನಗಳಲ್ಲಿ ಈ ದಾಳಿಗಳು ನಡೆಯುತ್ತಿದ್ದವು. ಒಂದು ದಾಳಿಯ ವೇಳೆ ಖಾನ್​ಖೋಜೆ ಗಾಯಗೊಂಡ. ಆಗ ಕಾಶ್​ಖಾಯ್ ಎಂಬ ಬುಡಕಟ್ಟು ಜನಾಂಗದವರ ಆಶ್ರಯ ಸಂಪಾದಿಸಿ ಮಾಮೂಲು ಸ್ಥಿತಿಗೆ ಬರುವವರೆಗೆ ಒಂದು ವರ್ಷ ಅಲ್ಲಿ ವಿಶ್ರಾಂತಿ ಪಡೆದ.
ಚೇತರಿಸಿಕೊಳ್ಳುವ ವೇಳೆಗೆ ಗದರ್ ಪ್ರಯತ್ನ ವಿಫಲಗೊಂಡು ಕರ್ತಾರ್ ಸಿಂಗ್ ಸರಾಬಾ ಮೊದಲಾದವರು ಗಲ್ಲಿಗೇರಿ ಹುತಾತ್ಮರಾಗಿದ್ದರು. ಖಾನ್​ಖೋಜೆ ಭಾರತದ ಸ್ವಾತಂತ್ರ್ಯ ಹೋರಾಟದ ಮುಖ್ಯವಾಹಿನಿಯನ್ನು ಸೇರಿಕೊಳ್ಳಬೇಕೆಂದು ಬಯಸಿ ಮಾರ್ಗದರ್ಶನ ಪಡೆಯಲು ಪ್ಯಾರಿಸ್​ಗೆ ಹೋಗಿ ಮೇಡಂ ಕಾಮಾರ ಸಲಹೆ ಕೇಳಿದ. ಆಕೆಯ ಸಲಹೆಯಂತೆ ಬರ್ಲಿನ್ ಕಮಿಟಿಯನ್ನು ಸೇರಿಕೊಂಡ. ಅಲ್ಲಿ ಕ್ರಿಯಾಶೀಲನಾಗಿದ್ದಾಗಲೇ ರಷ್ಯಾದಲ್ಲಿ 1917ರ ಅಕ್ಟೋಬರ್ ಕ್ರಾಂತಿ ಸಫಲವಾಗಿ ಲೆನಿನ್ ಮುಂಚೂಣಿಯ ನಾಯಕನಾಗಿ ಹೊರಹೊಮ್ಮಿದ್ದ.
ಕೊಮಿನ್​ಟರ್ನ್ ಅಥವಾ ಕಮ್ಯೂನಿಸ್ಟ್ ಇಂಟರ್​ನ್ಯಾಷನಲ್ ಎಂಬ ಅಂತಾರಾಷ್ಟ್ರೀಯ ಚಳವಳಿಯನ್ನು ಲೆನಿನ್ ಆರಂಭಿಸಿದಾಗ ಕೆಲವರು ಭಾರತೀಯ ಕ್ರಾಂತಿಕಾರಿಗಳ ಗಮನ ಅತ್ತ ಹರಿಯಿತು. ಅವರ ಪೈಕಿ ಖಾನ್​ಖೋಜೆ ಒಬ್ಬ. ಲೆನಿನ್ ಖಾನ್​ಖೋಜೆಯನ್ನು ಪ್ರತ್ಯೇಕವಾಗಿ ಭೇಟಿಗೆ ಕರೆದ. ಅವರಿಬ್ಬರ ನಡುವೆ ದೀರ್ಘ ಮಾತುಕತೆ ನಡೆಯಿತು. ಖಾನ್​ಖೋಜೆಯ ಚಿಂತನೆಗಳು ಲೆನಿನ್ನನ ದಾರಿ ಹಿಡಿದವು. ಆದರೆ ತನಗೆ ಮೆಕ್ಸಿಕೊ ದೇಶವೇ ಹೆಚ್ಚು ಸೂಕ್ತವೆಂದು ಬಯಸಿ ಅಲ್ಲಿಗೆ ತೆರಳಿದ. ಅಲ್ಲಿ ಜೀವನಕ್ಕೆ ಪಡಬಾರದ ಕಷ್ಟಗಳನ್ನು ಪಟ್ಟನೆಂಬುದು ಅವನು ತನ್ನ ತಂದೆಗೆ ಬರೆದ ಪತ್ರಗಳಿಂದ ಅರಿವಾಗುತ್ತದೆ.
ಮೊದಲ ಮಹಾಯುದ್ಧದ ನಂತರ ಮೆಕ್ಸಿಕೋ ರಾಜಕೀಯವಾಗಿ ಹಾಗೂ ವೈಚಾರಿಕವಾಗಿ ಹೆಚ್ಚು ಬಲಶಾಲಿಯಾಗಿ ಹೊರಹೊಮ್ಮಿತ್ತು. ಆಗ ಖಾನ್​ಖೋಜೆ ಮೆಕ್ಸಿಕೋ ರೈತರೊಂದಿಗೆ ಕೆಲಸ ಮಾಡುತ್ತಿದ್ದ. ಮೆಕ್ಸಿಕೋದಲ್ಲಿ 1920ರಲ್ಲಿ ‘ನ್ಯಾಷನಲ್ ಸ್ಕೂಲ್ ಆಫ್ ಅಗ್ರಿಕಲ್ಚರ್’ನಲ್ಲಿ ಸಸ್ಯಶಾಸ್ತ್ರ ಹಾಗೂ ಕೃಷಿಶಾಸ್ತ್ರಗಳ ಪೊ›ಫೆಸರ್ ಆಗಿ ನೇಮಕಗೊಂಡ. ಆ ದಿನಗಳಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕಿ ಟೀನಾ ಮೊಡೊಟ್ಟಿ ಮತ್ತು ಅವಳ ಸಂಗಾತಿ ಎಡ್ವರ್ಡ್ ವೆಸ್ಟನ್​ರ ಪರಿಚಯವಾಯಿತು. ಇವರಿಬ್ಬರೂ ಕಮ್ಯೂನಿಸ್ಟ್ ವಿಚಾರಧಾರೆಯವರಾಗಿದ್ದರು. ಅದೇ ವಿಚಾರಧಾರೆಯ ರಿವೆರಾ ಎಂಬ ಛಾಯಾಗ್ರಾಹಕನೂ ಖಾನ್​ಖೋಜೆಯ ಮಿತ್ರವರ್ಗದಲ್ಲಿ ಸೇರಿಕೊಂಡ. ಖಾನ್​ಖೋಜೆಯ ವಿವಿಧ ಭಂಗಿಯ ಫೋಟೋಗಳನ್ನು ಮೊಡೊಟ್ಟಿ ಮತ್ತು ರಿವೆರಾ ಹೆಚ್ಚಿನ ಸಂಖ್ಯೆಯಲ್ಲಿ ತೆಗೆದು ಸಂಗ್ರಹಿಸಿಟ್ಟಿರುವುದುಂಟು.
ಮೆಕ್ಸಿಕೋದಲ್ಲಿದ್ದುಕೊಂಡೇ ಕೃಷಿಕ್ಷೇತ್ರದಲ್ಲಿ ಅಪಾರ ಕಾರ್ಯವೆಸಗಿದ ಖಾನ್​ಖೋಜೆ 1936ರಲ್ಲಿ ಜೀನ್ ಅಲೆಕ್ಸಾಂಡ್ರಿನ್ ಸಿಂಡಿಕ್ ಎಂಬ ಬೆಲ್ಜಿಯನ್ ಮಹಿಳೆಯನ್ನು ವಿವಾಹವಾದ. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಹುಟ್ಟಿದರು. ಕೊನೆಗೆ ತಾಯ್ನಾಡಿಗೆ ಹಿಂದಿರುಗಬೇಕೆಂಬ ಸೆಳೆತ ಹೆಚ್ಚಾಗಿ 1955ರಲ್ಲಿ ಭಾರತಕ್ಕೆ ಬಂದು ಇಲ್ಲಿನ ಕಮ್ಯೂನಿಸ್ಟ್ ಪಕ್ಷ ಸೇರಿ ಕೆಲಕಾಲ ರಾಜಕೀಯದಲ್ಲಿ ಕ್ರಿಯಾಶೀಲನಾಗಿದ್ದ. ನಾಗಪುರದಲ್ಲಿ ನೆಲೆಸಿ, ತೋಟಗಾರಿಕೆ ಹಾಗೂ ಕೃಷಿಯಲ್ಲಿ  ತೊಡಗಿಸಿಕೊಂಡ ಆತ 1967ರಲ್ಲಿ ಸಕ್ರಿಯ ಸಾರ್ವಜನಿಕ ಕಾರ್ಯದಿಂದ ವಿಶ್ರಾಂತಿ ಪಡೆದು ಉಳಿದ ದಿನಗಳನ್ನು ವೇದಾಧ್ಯಯನ ಹಾಗೂ ಭಾರತೀಯ ತತ್ತ್ವಜ್ಞಾನ ಗ್ರಂಥಗಳನ್ನು ಓದುವುದರಲ್ಲಿ ಕಳೆದ. 1967ರ ಜನವರಿ 22ರಂದು ನಾಗಪುರದಲ್ಲಿ ಕೊನೆಯುಸಿರೆಳೆಯುವ ವೇಳೆಗೆ ಆತನ ಮನಸ್ಸು ವೇದಾಂತ ಅಭ್ಯಾಸದಲ್ಲಿ ಲೀನವಾಗಿತ್ತು. ಆರ್ಯಸಮಾಜದ ಚಿಂತನೆ, ಕಮ್ಯೂನಿಸ್ಟ್ ವೈಚಾರಿಕತೆ ಹಾಗೂ ಭಾರತೀಯ ವೇದಾಂತದ ಸಮ್ಮಿಶ್ರಣವಾಗಿದ್ದ ಪಾಂಡುರಂಗ ಸದಾಶಿವ ಖಾನ್​ಖೋಜೆ ಭಾರತದ ಕ್ರಾಂತಿಕಾರಿ ಪಥದಲ್ಲಿ ದೀರ್ಘಕಾಲ ಪಯಣಿಸಿದ ಸ್ವಾತಂತ್ರ್ಯಯೋಧ.
(ಲೇಖಕರು ಹಿರಿಯ ಪತ್ರಕರ್ತರು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....