ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ನಿಮಗಿದು ಗೊತ್ತೇ? ನಿಸರ್ಗ ದೇವತೆಯ ಕಲಾಶಾಲೆ: ಗ್ಯುಲಿನ್

ಚೀನಾ ದೇಶದ ದಕ್ಷಿಣ ಭಾಗದಲ್ಲಿರುವ ಗುಯಾಂಗ್ಸ್‌ಕಿ ಜುಯಾಂಗ್ ಪ್ರಾಂತ್ಯದ ಈಶಾನ್ಯದಲ್ಲಿರುವ ಗ್ಯುಲಿನ್, ಪ್ರಕೃತಿ ಮಾತೆಯು ತನ್ನ ಲಾಸ್ಯದಾಟಕ್ಕೆ ರಂಗಸ್ಥಳವಾಗಿ ಆಯ್ದುಕೊಂಡಿರುವ ಚೆಲುವು ಸೂರೆವರಿದಿರುವ ತಾಣ. ಚೀನಾ ಸರ್ಕಾರವು ಆರು ಜಿಲ್ಲೆಗಳು, ಹನ್ನೊಂದು ಕೌಂಟಿಗಳನ್ನೊಳಗೊಂಡಿರುವ ಗ್ಯುಲಿನ್ನನ್ನು ದೇಶದ ಪ್ರಮುಖವಾದ ನಾಲ್ಕು ಐತಿಹಾಸಿಕ, ಪ್ರಾಕೃತಿಕ, ಸಾಂಸ್ಕೃತಿಕ ನೆಲೆವೀಡುಗಳಲ್ಲಿ ಒಂದು ಎಂದು ಪರಿಗಣಿಸಿದೆ. ಗ್ಯುಲಿನ್ ಎಂಬ ಪದದ ಅರ್ಥ ’ಸುಗಂಧಿತ ಆಸ್ಮಾಂಥಾಸ್ ಬೆಳೆವ ಅರಣ್ಯ’ ಎಂದು. ಕಳೆದ ಶತಮಾನದ ಪ್ರಾರಂಭದಲ್ಲಿ ಚೀನಾವನ್ನು ಆಳುತ್ತಿದ್ದ ದುರ್ಬಲ ಮಂಚು ವಂಶದವರು ದೇಶದ ಹಿತಾಸಕ್ತಿಗಳನ್ನು ಗಾಳಿಗೆ ತೂರಿ ವಸಾಹತುಶಾಹಿ ಶಕ್ತಿಗಳಿಗೆ ಮಣೆ ಹಾಕುತ್ತಿದ್ದಾಗ, ಡಾ.ಸನ್‌ಯಾತ್‌ಸೆನ್‌ರವರು ಜನರನ್ನು ಮಂಚು ಆಳ್ವಿಕೆಯ ವಿರುದ್ಧ ಸಂಘಟಿಸಿದ್ದರು. ಇದಕ್ಕಾಗಿ ಗ್ಯುಲಿನ್‌ಅನ್ನು ತಮ್ಮ ಉತ್ತರದ ಸೇನಾ ದಂಡಯಾತ್ರೆಯ ಕೇಂದ್ರ ನೆಲೆಯಾಗಿಸಿಕೊಂಡಿದ್ದರು. ಗ್ಯುಲಿನ್ನನ್ನು ಸುತ್ತುವರಿದಿರುವ ಬೆಟ್ಟಗಳು, ಶಿಖರಗಳು, ಇಲ್ಲಿನ ಸುಣ್ಣಕಲ್ಲಿನ ನಿರ್ಮಿತಿಯ ಭೂ ಲಕ್ಷಣಗಳು ಹಾಗೂ ಗುಹೆಗಳು, ಮಧ್ಯಭಾಗದಲ್ಲಿ ಹರಿವ ಲೀ ನದಿ-ಇವೆಲ್ಲವುಗಳ ಮೂಲಕ ವ್ಯಕ್ತವಾಗುವ ಪ್ರಕೃತಿಯ ರಮ್ಯತೆ, ಭವ್ಯತೆಯು ಪ್ರವಾಸಿಗಳಿಗೆ ವಿಶಿಷ್ಟವಾದ ಆನಂದಾನುಭವ ನೀಡುತ್ತದೆ. ಹಾಗೆಯೇ ಗ್ಯುಲಿನ್, ಚೀನಾದ ಏಕೈಕ ಅಲ್ಪಸಂಖ್ಯಾತ ಜನಾಂಗೀಯ ಸಮುದಾಯವನ್ನೊಳಗೊಂಡ ಪ್ರದೇಶವಾಗಿದ್ದು, ಸಾಂಪ್ರದಾಯಿಕ ಚೀನೀ ಪದ್ಧತಿಗಳಿಗಿಂತ ವಿಭಿನ್ನವಾದ ಸಂಸ್ಕೃತಿಗಾಗಿ ಕೂಡ ಇದು ಪ್ರಸಿದ್ಧವಾಗಿದೆ.
ಗ್ಯುಲಿನ್‌ನಿಂದ ಎಂಬತ್ಮೂರು ಕಿ.ಮೀ.ದೂರದ ಯಾಂಗ್ ಶೌ ಕೌಂಟಿಗೆ ಪುಟ್ಟ ಹಡಗುಗಳಲ್ಲಿನ ನಾಲ್ಕು ಗಂಟೆಗಳ ಜಲಯಾನವು ಪ್ರವಾಸಿಗಳಿಗೆ ಪ್ರಕೃತಿ ಸೌಂದರ್ಯದ ಶ್ರೀಮಂತ ಖಜಾನೆಯನ್ನೇ ತೆರೆದಿಡುತ್ತದೆ. ನೀಲಾಕಾಶದಡಿಯಲ್ಲಿ ಹರಿವ ತುಂಬು ನದಿ ಲೀ- ಇದರ ಇಕ್ಕೆಲಗಳಲ್ಲೂ ದಟ್ಟ ಹಸಿರು ಮರಗಳು, ಅವುಗಳ ಹಿನ್ನೆಲೆಯಲ್ಲಿನ ನೀಲ ಬೆಟ್ಟಗಳು, ಕೋಡುಗಲ್ಲಿನಂತಹ ಶಿಖರಗಳ ಸಾಲು ಸಾಲು ಸರಮಾಲೆ, ಈ ಹೆಚ್ಚು ಎತ್ತರವಲ್ಲದ ಶಿಖರಗಳನ್ನು ಮುದ್ದಾಡುತ್ತಿರುವ ಮೋಡಗಳ ದೃಶ್ಯವು ಕಣ್ಣಿಗೆ ರಸದೌತಣವೀಯುತ್ತಾ ಎಂತಹವರಲ್ಲೂ ರಸಿಕತೆಯ ಸೆಲೆಯುಕ್ಕಿಸುತ್ತದೆ. ಅಲ್ಲಲ್ಲಿ ನದಿಯ ದಡಕ್ಕೆ ತಾಗಿದಂತಿರುವ ಕಲ್ಲಿನ ಸೋಪಾನಗಳು, ಅವುಗಳಾಚೆಯ ಪುಟ್ಟ ಹಳ್ಳಿಗಳು, ಕೌತುಕದ ಭಾವ ಮೂಡಿಸುತ್ತವೆ. ದಡದ ಮರಗಳೆಡೆಯಿಂದ ನದಿಗೆ ಧುಮ್ಮಿಕ್ಕುವ ಜಲಧಾರೆ. ಅಲ್ಲಲ್ಲಿ ಕೆಲವೆಡೆ ಪುರ್‍ರೆಂದು ಹಾರಿ ಹೋಗುವ ಹಕ್ಕಿಗಳ ಹಿಂಡು. ಅಲ್ಲೊಮ್ಮೆ ಇಲ್ಲೊಮ್ಮೆ ಕಂಡುಬರುವ ಭತ್ತದ ಹೊಲಗಳಲ್ಲಿ ದುಡಿವ ರೈತರು. ಬಿದಿರ ತೆಪ್ಪದ ಮೇಲೆ ಮೀನು ಹಿಡಿವ ಬೆಸ್ತರು. ನಿಸರ್ಗದ ಚೆಲುವು ಚೆಲ್ಲುವರಿದಿರುವಂತಹ ಈ ಸನ್ನಿವೇಶವು ಚೀನಾದ ಇಪ್ಪತ್ತು ಯುಯಾನ್‌ನ ನೋಟಿನಲ್ಲಿ ಮುದ್ರಿತವಾಗಿದೆ.
ನಾಲ್ಕು ಗಂಟೆಗಳ ಜಲಯಾನದ ನಂತರ ಯಾಂಗ್ ಶೌ ಕೌಂಟಿಗೆ ಬಂದರೆ ನಾವು ಕಾಲಿಡುವ ಇಲ್ಲಿನ ‘ವೆಸ್ಟ್ ಸ್ಟ್ರೀಟ್’ ದೇಶ ವಿದೇಶಗಳ ಪ್ರವಾಸಿಗಳಿಂದ ಕಿಕ್ಕಿರಿದಿರುತ್ತದೆ. ಆಕರ್ಷಕ ಕರಕುಶಲ ವಸ್ತುಗಳು, ಸ್ಮರಣಿಕೆಗಳ ಮಾರಾಟ ಭರದಿಂದ ಸಾಗಿರುತ್ತದೆ. ವಿಧವಿಧದ ಭವ್ಯ ಕಟ್ಟಡಗಳು, ಕೆಲವು ಕಟ್ಟಡಗಳ ಮುಂದಿರುವ ಡ್ರ್ಯಾಗನ್ ಪ್ರತಿಮೆಗಳು, ಟ್ರಾಂ ಗಾಡಿಯನ್ನೂ ಒಳಗೊಂಡ ಸಕಲ ವಿಧದ ವಾಹನಗಳು ಯಾಂಗ್ ಶೌ ಕೌಂಟಿಯಲ್ಲಿ ಪ್ರವಾಸಿಗರಿಗಾಗಿ ರೆಸಾರ್ಟ್‌ಗಳಿವೆ. ಬಂಡೆಗಳನ್ನೇರುವ ಚಾರಣಕ್ಕಾಗಿಯೇ ಇಲ್ಲಿಗೆ ಬರುವವರಿದ್ದಾರೆ.
ಗ್ಯುಲಿನ್‌ನಿಂದ ಐದು ಕಿಲೋಮೀಟರ್ ದೂರದಲ್ಲಿರುವ ರೀಡ್ ಫ್ಲೂಟ್ ಕೇವ್‌ಗೆ (ಚೀನೀ ಹೆಸರು-ಲು ದಿ ಯಾನ್) ಪ್ರವೇಶಿಸುವುದೆಂದರೆ ಒಂದು ಕಿನ್ನರ ಲೋಕವನ್ನೇ ಹೊಕ್ಕಂತೆ. ಈ ಗುಹೆಯ ಮೇಲೆ ಬೆಳೆಯುವ ರೀಡ್ ಸಸ್ಯದಿಂದ ಕೊಳಲು ತಯಾರಿಸುವುದರಿಂದ ಆ ಹೆಸರು ಬಂದಿದೆ. ಈ ಗುಹೆಯಲ್ಲಿ ಎಂಟನೇ ಶತಮಾನದ ಟ್ಯಾಂಗ್ ವಂಶದವರು ಬರೆದ ಶಾಸನಗಳಿರುವುದು ಇದರ ಪ್ರಾಚೀನತೆಗೆ ನಿದರ್ಶನ. ಪ್ರಾಚೀನ ಕಾಲದಿಂದಲೂ ಇದು ಆಕರ್ಷಣೆಯ ತಾಣವಾಗಿತ್ತೆಂದು ಈ ಬರಹಗಳು ತಿಳಿಸುತ್ತವಂತೆ. ನಂತರದಲ್ಲಿ ವಿಸ್ಮೃತಿಗೆ ಸಂದಿದ್ದ ಈ ಗುಹೆಯು, ಜಪಾನೀಯರು ಚೀನಾವನ್ನು ಆಕ್ರಮಿಸಿದಾಗ ಇಲ್ಲಿ ಆಶ್ರಯ ಪಡೆದ ನಿರಾಶ್ರಿತರ ತಂಡವೊಂದರಿಂದ ಪುನರ್‌ಪತ್ತೆಯಾಯಿತು. 1962ರಿಂದ ಪ್ರವಾಸಿಗರಿಗೆ ತೆರವಾಗಿದೆ. ಪ್ರವೇಶ ದ್ವಾರದಿಂದ ಹೊಕ್ಕು, 240 ಮೀಟರ್ ಉದ್ದದ ಗುಹೆಯಲ್ಲಿ ಇಂಗ್ಲಿಷ್‌ನ ’ಯು’ ಆಕಾರದಲ್ಲಿ ಸಾಗಿ ಇನ್ನೊಂದು ದ್ವಾರದಿಂದ ಹೊರ ಬರಬಹುದು. ನಮ್ಮ ಚೀನೀ ಗೈಡ್ ಎವ್ಲಿನ್‌ಳ ಮಾರ್ಗದರ್ಶನದಲ್ಲಿ ನಾವೆಲ್ಲಾ ಈ ಗುಹೆಯ ಒಳ ಪ್ರವೇಶಿಸಿದಾಗ ಕಣ್ಣಿಗೆ ಮಬ್ಬುಗತ್ತಲು. ಟಾರ್ಚ್ ಬೆಳಕು ಬೀರುತ್ತಾ ನಿಧಾನವಾಗಿ ಮೆಟ್ಟಿಲಿಳಿದು ಬನ್ನಿ ಎಂಬ ಗೈಡ್ ಸೂಚನೆಯಂತೆ ಮುಂದುವರಿದೆವು. ಉದ್ದಕ್ಕೂ ಹಿಡಿದು ಸಾಗಲು ಇದ್ದ ದಪ್ಪ ಸ್ಟೀಲ್‌ನ ಕಂಬಿಗಳಿಂದಾಗಿ ಬೀಳುವ ಭಯವೇನಿರಲಿಲ್ಲ. ಕ್ರಮೇಣ ಕಣ್ಣು ನಸುಗತ್ತಲಿಗೆ ಹೊಂದಿಕೊಂಡಾಗ ಅನಾವರಣಗೊಂಡ ಶಿಲೆಯಲ್ಲಿ ನೇಯ್ದ ಕಲೆಯ ಬಲೆಯ ಜಾಲದ ಭವ್ಯತೆಗೆ ಬೆರಗಾದ ನಾವೆಲ್ಲಾ ಉಸಿರು ಬಿಗಿಹಿಡಿದು ಮೂಕರಾದೆವು.
‘ಭಗವಂತನಾನಂದ ರೂಪುಗೊಂಡ’, ಈ ಗುಹೆಯು ‘ನೆಲದಾಳದ ಅರಮನೆ’, ‘ನಿಸರ್ಗದ ಕಲಾಶಾಲೆ’ ಎಂದೆಲ್ಲಾ ಬಣ್ಣಿಸಲ್ಪಟ್ಟಿದೆ. ಗುಹೆಯ ಒಳಗೆ ಸುಣ್ಣಕಲ್ಲಿನ ವರ್ಣನಾತೀತವಾದ ಶಿಲಾರಚನೆಗಳ ಲೋಕ ಮೂಕವಿಸ್ಮಿತರನ್ನಾಗಿಸುತ್ತದೆ. ಇಲ್ಲಿ ಮೌನವೇ ಮಾತಾಗುತ್ತದೆ. ಕ್ಯಾಲ್ಸಿಯಂ ಕಾರ್ಬೋನೇಟ್‌ನ ಸಡಿಲ ಸಂರಚನೆ, ಮೇಲಿನ ಕಲ್ಲಿನಿಂದ ಜಿನುಗುವ ನೀರ ಹನಿಗಳ ಲವಣಗಳು ಮಡುಗಟ್ಟಿ ನಿರ್ಮಾಣವಾದ ರಚನೆಗಳು ಮೇಲ್ಚಾವಣಿಯಿಂದ ಇಳಿಬಿದ್ದಿರುವಂತೆಯೇ ನೆಲದ ಮೇಲೂ ಅದ್ಭುತ ವಿನ್ಯಾಸಗಳಲ್ಲಿ ರೂಪುಗೊಂಡಿವೆ. ಇದು ರೂಪುಗೊಂಡಿದ್ದು ನೂರಾಎಂಬತ್ತು ಮಿಲಿಯನ್ ವರ್ಷಗಳ ಹಿಂದೆ. ಪ್ರಕೃತಿಮಾತೆಯ ಈ ಕೊರಳ ಹಾರ ಒಂದು ಸೆಂಟಿಮೀಟರ್‌ನಷ್ಟು ರೂಪುಗೊಳ್ಳಲು ನೂರಾರು ವರ್ಷಗಳೇ ಬೇಕಾಗುತ್ತದಂತೆ. ಪ್ರಕೃತಿ ಮಾತೆಯ ಚಾಣದಿಂದ ಈ ಗುಹೆಯಲ್ಲಿ ರೂಪುಗೊಂಡ ವಿವಿಧಾಕೃತಿಗಳ ಈ ಸುಣ್ಣಕಲ್ಲಿನ ಅನುಪಮ ನಿರ್ಮಾಣಗಳ ಕುಸುರಿ ಕೆಲಸದ ಕುಶಲತೆ ಸರಿಸಾಟಿಯಿಲ್ಲದ್ದು. ಅವುಗಳ ಸೊಬಗಿಗೆ ಮೆರಗು ನೀಡಲು ಗುಹೆಯ ಒಳಗೆ ವರ್ಣರಂಜಿತ ಬೆಳಕಿನ ವ್ಯವಸ್ಥೆ ಇದೆ. ಕೆಳಗೆ ಹರಿವ ಹಳ್ಳಗಳಿಗೂ ಕೆಳಗಿನಿಂದ ಅಳವಡಿಸಿದ ಫ್ಲಡ್‌ಲೈಟ್‌ನಿಂದಾಗಿ ಅಲ್ಲೊಂದು ಕಾಲ್ಪನಿಕ ಲೋಕವೇ ಸೃಷ್ಟಿಯಾದಂತಿದೆ. ಅಲ್ಲಲ್ಲಿ ಮಡುಗಟ್ಟಿದ ಕೊಳದ ದಡಗಳನ್ನು ಮಿನುಗುವ ಮಣಿಗಳಂತಹ ದೀಪದ ಮಾಲೆಗಳು ಸಿಂಗರಿಸಿವೆ.
ಸಾಗುತ್ತಾ ಬರುವಾಗ ಅಲ್ಲೊಂದೆಡೆ ಸಿಂಹವು ತನ್ನ ಮರಿಯೊಂದಿಗೆ ಕುಳಿತಂತಿರುವುದೇ ‘ಜಂಗಲ್ ಲಯನ್’. ವಿವಿಧ ತರಕಾರಿಗಳು ಮೇಲಿನಿಂದ ಇಳಿಬಿದ್ದಿರುವ ಈ ಗೊಂಚಲೇ ‘ಹಾರ್ವೆಸ್ಟ್ ಆಫ್ ವೆಜಿಟಬಲ್ಸ್’. ಈ ಅಣಬೆಗಳ ಪ್ರದರ್ಶನಾಲಯ ‘ಮಶ್ರೂಮ್ ಹಿಲ್’. ‘ನಾಟಕದ ರಂಗಸ್ಥಳ’ವು ಒಂದು ನಾಟಕ ಪ್ರದರ್ಶನಕ್ಕೆ ಇದೀಗ ಸಜ್ಜಾಗಿರುವ ವೇದಿಕೆಯಂತೆ ರೂಪುಗೊಂಡಿದೆ. ಯಕ್ಷಲೋಕ, ಸ್ಫಟಿಕದರಮನೆ, ಡ್ರ್ಯಾಗನ್ ಪಗೋಡಾ- ಹೀಗೆ ಇಲ್ಲಿ ಮೂಡಿರುವ ಆಕೃತಿಗಳಿಗೆ ಚೀನೀಯರು ಕೊಟ್ಟಿರುವ ಹೆಸರುಗಳನ್ನು ನಾವು ಸ್ವಲ್ಪ ಕಲ್ಪನಾಶಕ್ತಿ ಬೆರೆಸಿ ಅರ್ಥೈಸಿಕೊಂಡರಾಯಿತು.
ಚೀನೀಯರು ಇವುಗಳ ಕುರಿತು ದಂತಕತೆಗಳನ್ನೂ ಹೇಳುತ್ತಾರೆ. ಅಂತಹವುಗಳಲ್ಲಿ ಒಂದೆಂದರೆ, ಒಬ್ಬ ಕವಿ ಈ ಗುಹೆಯ ಸೌಂದರ್ಯವನ್ನು ವರ್ಣಿಸಿ ಒಂದು ಕವಿತೆ ರಚಿಸಲು ತೊಡಗಿದ. ಈ ಸೌಂದರ್ಯಕ್ಕೆ ಸರಿಸಾಟಿಯಾಗಬಲ್ಲ ಸೂಕ್ತ ಪದಗಳೇ ಅವನಿಗೆ ಸಿಗಲಿಲ್ಲ. ಅಂತಹ ಪದಗಳಿಗಾಗಿ ಹುಡುಕುತ್ತಾ ಹುಡುಕುತ್ತಾ ಕೊನೆಗೆ ಅವನೇ ಒಂದು ಶಿಲೆಯಾದನಂತೆ! ನಿಜ, ಇಲ್ಲಿನ ಶಿಲೆಯ ಕುಸುರಿ ಕಲೆಯ ವರ್ಣನೆಗೆ ಭಾಷೆಯೇ ಬಡವಾಗುತ್ತದೆ. ಕೊನೆಯಲ್ಲಿ ಎವ್ಲಿನ್ ಇಲ್ಲಿ ಜೀವ ವಿಕಾಸದ ಲೇಸರ್ ಷೋ ತೋರಿಸಿದಳು. ಅದನ್ನು ನೋಡಿ ಈ ಕಲಾ ನಿರ್ಮಿತಿ ಆರಂಭವಾದ ಅವಧಿಯನ್ನು ಊಹಿಸಲೆತ್ನಿಸಿ ಸೋತಾಗ ನೆನಪಾದ ಕವಿವಾಣಿ ‘ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ’. ಗುಹೆಯಿಂದ ಹೊರಬಂದಾಗ ಅಲ್ಲಿ ಹೊಂದಿದ ಅನುಪಮ ಆನಂದಾನುಭವದಿಂದಾಗಿ ಹೊರಗಿನ ಮಾಮೂಲಿನ ಯಾಂತ್ರಿಕ ಜಗತ್ತೂ ಮೆರುಗಿನಿಂದ ಕೂಡಿದ್ದಂತೆನಿಸಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....