ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಅನಾಥರ ಬದುಕಿಗೆ ಹೊಸ ದಿಶೆ ಒದಗಿಸಿದ ಅಮೃತಾ ಕರವಂದೆ

*ನಮ್ಮ ರಾಜ್ಯದಲ್ಲೀಗ ವಿಧಾನ ಸಭೆ ಚುನಾವಣೆ ಸಂದರ್ಭ. ಪ್ರಚಾರದ ರಂಗು ರಾಜ್ಯವನ್ನಾವರಿಸತೊಡಗಿದೆ. ಅಲ್ಲಲ್ಲಿ ಕಾಣಸಿಕ್ಕುವ ಬ್ಯಾನರ್​ಗಳಲ್ಲಿ ಚುನಾವಣ ಕಣಕ್ಕೆ ಇಳಿಯಲಿರುವ ಅಭ್ಯರ್ಥಿಗಳ ಹೆಸರಿನ ಜತೆಗೆ ‘ಅನಾಥ ರಕ್ಷಕ’, ‘ಅನಾಥ ಬಂಧು’ ಇತ್ಯಾದಿ ವಿಶೇಷಣಗಳನ್ನು ಕೂಡ ಕಾಣುತ್ತಿದ್ದೇವೆ. ಅನಾಥರಿಗೋಸ್ಕರ ಇವರ ಕೊಡುಗೆಯಾದರೂ ಏನು? ಅನಾಥರು ಬದುಕಿನಲ್ಲಿ ಎದುರಿಸುವ ಸಂಕಷ್ಟಗಳ ಅರಿವು ಇವರಿಗೆ ಬಿಡಿ, ನಮ್ಮಲ್ಲಿ ಬಹುತೇಕರಿಗೂ ಇರಲ್ಲ. ಸಾಮಾನ್ಯವಾಗಿ ‘ಅನಾಥ’ ಎಂಬ ಪದ ಕೇಳಿದಾಕ್ಷಣ ಮನಸ್ಸು ಗುನುಗುನಿಸುವ ಹಾಡೊಂದಿದೆ. 1990ರ ಜುಲೈನಲ್ಲಿ ತೆರೆಕಂಡ ಶಂಕರ್​ನಾಗ್ ನಟನೆಯ ‘ಹೊಸಜೀವನ’ ಎಂಬ ಸಿನಿಮಾದ್ದು. ಆ ಹಾಡಿನ ಸಾಹಿತ್ಯ ‘‘ಅನಾಥ ಮಗುವಾದೆ ನಾನು.. ಅಪ್ಪನೂ ಅಮ್ಮನೂ ಇಲ್ಲ..’ ಎಂದು ಸಾಗುತ್ತದೆ.*
==========
*ಅಂದ ಹಾಗೆ ‘ಅನಾಥ’ರ ವಿಷಯ ಯಾಕೆ ಬಂತು ಅಂತೀರಾ.. ಮಹಾರಾಷ್ಟ್ರ ಸರ್ಕಾರ ದೇಶದಲ್ಲೇ ಮೊದಲ ಬಾರಿ ಅನಾಥರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇಕಡ 1 ಮೀಸಲು ಸೌಲಭ್ಯವನ್ನು ಒದಗಿಸುವ ನಿರ್ಣಯವನ್ನು ಏಪ್ರಿಲ್ 2ರಂದು ಪ್ರಕಟಿಸಿದೆ. ಸರ್ಕಾರದ ಈ ನಿರ್ಧಾರದ ಹಿಂದೆ 23 ವರ್ಷದ ಯುವತಿ ಅಮೃತಾ ಕರವಂದೆ ಅವರ ಹೋರಾಟ ಮತ್ತು ಪ್ರಯತ್ನ ಇದೆ. ಅನಾಥರ ಬದುಕಿಗೆ ಹೊಸ ದಿಶೆ ಒದಗಿಸಿದ ಅಮೃತಾ ವ್ಯಕ್ತಿ ಚಿತ್ರಣ ನೀಡುವುದಕ್ಕೆ ಇದೊಂದು ನಿಮಿತ್ತ.*
=============
*ಅವರ ‘ಅನಾಥ’ ಬದುಕಿನ ಕಥೆ ಆರಂಭವಾಗುವುದು ಗೋವಾದಿಂದ..*
===========
*ಎರಡು ದಶಕದ ಹಿಂದಿನ ಘಟನೆ. ತಂದೆಯೊಬ್ಬ ಎರಡೋ ಮೂರೋ ವರ್ಷದ ಹೆಣ್ಮಗಳನ್ನು ಕರೆದುಕೊಂಡು ಗೋವಾದ ಒಂದು ಅನಾಥಾಲಯದ ಮುಂದೆ ಹಾಜರಾಗುತ್ತಾರೆ. ಅಲ್ಲಿನ ಮುಖ್ಯಸ್ಥರನ್ನು ಕಂಡು ಆ ಹೆಣ್ಮುಗುವನ್ನು ಅಲ್ಲಿ ಒಪ್ಪಿಸಿ, ಹಿಂತಿರುಗುತ್ತಾರೆ. ಆ ತಂದೆ ಯಾಕೆ ಹಾಗೆ ಮಾಡಿದರೋ? ಅದರ ಹಿಂದಿನ ಕಥೆ ಏನೋ ಒಂದೂ ಗೊತ್ತಿಲ್ಲ. ಆದಾಗ್ಯೂ, ಈ ‘ಅನಾಥ’ ಬದುಕಿನ ‘ದೈನ್ಯ’ ಕಥನವನ್ನು ಬಿಬಿಸಿ ಸುದ್ದಿಸಂಸ್ಥೆ ಚಿತ್ರಿಸಿದ್ದು, ಅಮೃತಾ ಮಾತಿನಲ್ಲೇ ಓದಿದರೆ ಹೃದಯರ್ಸ³ಯೆನಿಸುವುದು. ಯಾವುದೇ ಸಿನಿಮಾ ಕಥೆಗಿಂತ ಭಿನ್ನವಲ್ಲದ ಬದುಕಿನ ಚಿತ್ರಣವದು.. ‘ತಂದೆ ನನ್ನನ್ನು ಅನಾಥಾಲಯಕ್ಕೆ ಸೇರಿಸಿದಾಗ ಪುಟ್ಟ ಬಾಲೆ. ಅಂದು ಅವರು ಅನಾಥಾಲಯದ ನೋಂದಣಿ ಪುಸ್ತಕದಲ್ಲಿ ನನ್ನ ಹೆಸರು ‘ಅಮೃತಾ ಕರವಂದೆ’ ಎಂದು ಬರೆದು ಹೋಗಿದ್ದರು. ಹಾಗೆ ನನ್ನ ಹೆಸರು ಅಮೃತಾ ಎಂಬುದು ನನಗೆ ಗೊತ್ತಾಗಿದ್ದು. ಆ ಅನಾಥಾಲಯದಲ್ಲಿ ನನ್ನಂತೆಯೇ ‘ಅನಾಥ’ರೆನಿಸಿಕೊಂಡ ಅನೇಕ ಬಾಲಕಿಯರಿದ್ದರು. ಸಾಮಾನ್ಯ ಶಿಕ್ಷಣವನ್ನು ಅನಾಥಾಲಯವೇ ಒದಗಿಸಿತು. ಕಲಿಕೆಯಲ್ಲಿ ಚುರುಕಾಗಿದ್ದ ನನಗೆ ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಆದರೆ, ಅನಾಥಾಲಯದಲ್ಲಿ 18 ವರ್ಷ ತುಂಬುವವರೆಗೆ ಮಾತ್ರವೇ ಉಳಿದುಕೊಳ್ಳಲು ಅವಕಾಶ. ಹದಿನೆಂಟು ವರ್ಷ ತುಂಬಿದ ಅನೇಕ ಯುವತಿಯರನ್ನು ಸೂಕ್ತರಿಗೆ ಕೊಟ್ಟು ವಿವಾಹ ನೆರವೇರಿಸಿ ಕುಟುಂಬ ಜೀವನ ನಡೆಸಲು ಕಳುಹಿಸಿಕೊಡುತ್ತಿದ್ದರು ಅವರು. ನನಗೆ ಹೆಚ್ಚಿನ ಶಿಕ್ಷಣ ಪಡೆಯಬೇಕೆನಿಸಿದ್ದರಿಂದ ವಿವಾಹವನ್ನು ನಿರಾಕರಿಸಿದೆ. ಹೀಗಾಗಿ, 18 ವರ್ಷ ತುಂಬುತ್ತಲೇ ಅಲ್ಲಿಂದ ಹೊರಬೀಳಬೇಕಾಯಿತು. ಅಲ್ಲಿಂದ ಹೊರಬಂದು ಎತ್ತ ಹೋಗಬೇಕು ಗೊತ್ತಿಲ್ಲ. ಹೆಚ್ಚುವರಿ ಶಿಕ್ಷಣ ಪಡೆಯಬೇಕು ಎಂಬಾಸೆಯಿಂದ ಗೋವಾದಲ್ಲಿ ರೈಲು ಹತ್ತಿ ಪುಣೆಗೆ ಬಂದಿಳಿದೆ. ಗುರುತು ಪರಿಚಯವೇ ಇರದ ಪುಣೆಯ ರೈಲು ನಿಲ್ದಾಣದಲ್ಲಿ ಇಳಿದಾಗ ಕತ್ತಲಾಗಿತ್ತು. ಮುಂದೇನು ಎಂಬ ಸ್ಪಷ್ಟತೆ ಇಲ್ಲದ ನನ್ನಲ್ಲಿ ಭಯ, ಆತಂಕ ಮನೆಮಾಡಿತ್ತು. ಒಂದರೆಕ್ಷಣ ಯಾರೂ ಇಲ್ಲದ ನಾನು ಸತ್ತರೇನು? ಬದುಕುವುದಾದರೂ ಯಾರಿಗೋಸ್ಕರ.. ರೈಲಿನಡಿಗೆ ಬಿದ್ದು ಸತ್ತುಬಿಡೋಣ ಎಂದೆನಿಸಿತ್ತು.*
============
*ಆದರೂ, ಸಾಯಲು ಮನಸಾಗಲಿಲ್ಲ. ಧೈರ್ಯ ತಂದುಕೊಂಡು ರಾತ್ರಿ ಕಳೆದೆ. ಮರುದಿನ ಅಲ್ಲಿ ಕೆಲವು ಮನೆಗಳಿಗೆ ತೆರಳಿ ಮನೆಗೆಲಸ ಮಾಡುವುದಾಗಿ ಹೇಳಿ ಕೆಲಸ ಕಂಡುಕೊಂಡೆ. ಒಂದೆರಡು ಕಿರಾಣಿ ಅಂಗಡಿಗಳಲ್ಲೂ ಸಹಾಯಕಿಯಾಗಿ ಕೆಲಸ ಮಾಡತೊಡಗಿದೆ. ಒಂದಿಷ್ಟು ಹಣ ಒಟ್ಟುಗೂಡಿಸಿದೆ. ಈ ನಡುವೆ ಕೆಲವರ ಪರಿಚಯವಾಯಿತು. ಹಾಗೆ ಸ್ನೇಹಿತನೊಬ್ಬನ ನೆರವಿನೊಂದಿಗೆ ಅಹ್ಮದ್​ನಗರದ ಸಂಜೆ ಕಾಲೇಜೊಂದರಲ್ಲಿ ಪ್ರವೇಶ ಗಿಟ್ಟಿಸಿಕೊಂಡೆ.*
===============
*ಹಗಲಿಡೀ ಕೆಲಸ, ಸಂಜೆ ಕಾಲೇಜು ಶಿಕ್ಷಣ. ಇಷ್ಟೆಲ್ಲ ಆದರೂ ನನಗೆ ಉಳಿದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಏನೂ ಇರಲಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸೂರು ಕಂಡುಕೊಂಡಿದ್ದೆ. ಅಲ್ಲೇ ಊಟ, ವಸತಿ. ಎಲ್ಲರ ನೆರವು ಪಡೆದು ಪದವಿ ಶಿಕ್ಷಣ ಪೂರ್ತಿಗೊಳಿಸಿದೆ.*
============
*ಇದಾಗಿ ಮಹಾರಾಷ್ಟ್ರ ಲೋಕ ಸೇವಾ ಆಯೋಗದ ಪರೀಕ್ಷೆ ಎದುರಿಸಿ, 100ಕ್ಕೆ 39 ಅಂಕ ಗಳಿಸಿದೆ. ಮಹಿಳಾ ಮೀಸಲು ವಿಭಾಗದಲ್ಲಿ ಆಯ್ಕೆಯಾಗಲು ಕನಿಷ್ಠ 35 ಅಂಕ ಗಳಿಸಿದ್ದರೆ ಸಾಕಿತ್ತು. ಇದಕ್ಕಿಂತ ಹೆಚ್ಚು ಅಂಕ ನನಗೆ ಬಂದಿತ್ತು. ಆದರೆ, ಸಮಸ್ಯೆ ಎದುರಾಗಿದ್ದೇ ಅಲ್ಲಿ. ಅವರು ಪಾಲಕರ ಜಾತಿ ಸರ್ಟಿಫಿಕೇಟ್ ಕೇಳಿದರು. ಪಾಲಕರು ಯಾರು, ಜಾತಿ ಧರ್ಮ ಯಾವುದೆಂದು ಅರಿಯದ ನಾನು ಎಲ್ಲಿಂದ ತರಲಿ ಆ ಪ್ರಮಾಣಪತ್ರವನ್ನು! ಕೊನೆಗೆ ಅವರು ನನ್ನನ್ನು ಸಾಮಾನ್ಯ ವರ್ಗದ ವಿಭಾಗಕ್ಕೆ ಸೇರಿಸಿದರು. ಅಲ್ಲಿ ಕನಿಷ್ಠ ಅಂಕ 46 ಬೇಕಿತ್ತು. ಅಷ್ಟು ನನಗೆ ಸಿಕ್ಕಿರಲಿಲ್ಲ. ಅಲ್ಲಿಗೆ ಆ ಉದ್ಯೋಗ ಕನಸಾಗಿ ಉಳಿಯಿತು. ಇದಾಗಿ ಪಿಎಸ್​ಐ, ಮಾರಾಟ ತೆರಿಗೆ ಇನ್​ಸ್ಪೆಕ್ಟರ್ ಮುಂತಾದ ಪರೀಕ್ಷೆಗಳನ್ನೂ ಎದುರಿಸಿದೆ. 2017ರ ಅಕ್ಟೋಬರ್​ನಲ್ಲಿ ಫಲಿತಾಂಶ ಪ್ರಕಟವಾದಾಗ, ಆಯ್ಕೆ ವಿಷಯದಲ್ಲಾಗುತ್ತಿದ್ದ ತೊಂದರೆಗಳನ್ನು ಅಧಿಕಾರಿಗಳಿಗೆ ಮನವರಿಕೆ ಮಾಡುವುದಕ್ಕಾಗಿ ಪ್ರತಿಯೊಬ್ಬ ಅಧಿಕಾರಿಯ ಬಳಿಗೂ ಹೋದೆ. ಪ್ರಯೋಜನವಾಗಲಿಲ್ಲ. ‘ಅನಾಥ’ರೆನಿಸಿಕೊಂಡ ನಮಗೆ ಯಾವುದೇ ಕಾನೂನು ನೆರವಿಗೆ ಬರಲಿಲ್ಲ. ಇದರಿಂದ ಆಘಾತವಾಯಿತು. ಕೊನೆಗೆ ಮುಂಬೈಗೆ ತೆರಳಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸರನ್ನು ಭೇಟಿಯಾಗಲು ಪ್ರಯತ್ನಿಸಿದೆ. ಅಲ್ಲಿ, ಅವರ ಸಲಹೆಗಾರರಾದ ಶ್ರೀಕಾಂತ್ ಭಾರತೀಯರನ್ನಷ್ಟೇ ಭೇಟಿಯಾಗಲು ಅವಕಾಶ ಸಿಕ್ಕಿತು. ಅವರಿಗೆ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟೆ. ಅವರು ಅದನ್ನು ಮುಖ್ಯಮಂತ್ರಿಯವರಿಗೆ ತಿಳಿಸಿ ಭೇಟಿಗೆ ಅವಕಾಶ ಮಾಡಿಕೊಟ್ಟರು. ಮುಂದಿನದ್ದು ನಿಮಗೆ ಗೊತ್ತೇ ಇದೆ. ನನ್ನ ಮಟ್ಟಿಗೆ ಇದು ಬಹುದೊಡ್ಡ ಹೋರಾಟ. ಈಗ ಮಹಾರಾಷ್ಟ್ರದಲ್ಲಿ ಒಂದಿಷ್ಟು ಪರಿಹಾರ ಸಿಕ್ಕಿದೆ. ಇದು ದೇಶಾದ್ಯಂತ ಇರುವ ಅನಾಥರಿಗೆ ದಕ್ಕಬೇಕು’. ಹೀಗೆ ಹೋರಾಟದ ಕಥನವನ್ನು ತೆರೆದಿಟ್ಟ ಅಮೃತಾ ಸದ್ಯ ಪುಣೆಯ ಮಾಡರ್ನ್ ಕಾಲೇಜ್​ನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಮೀಸಲು ಸೌಲಭ್ಯ ದೇಶಾದ್ಯಂತ ಇರುವ ಇತರೆ ಅನಾಥರಿಗೂ ಸಿಗಬೇಕೆಂಬ ಅವರ ಆಶಯದಲ್ಲಿ ತಪ್ಪೇನೂ ಇಲ್ಲ. ಅರ್ಹರಿಗೆ ಸರ್ಕಾರಿ ಸೌಲಭ್ಯ ಒದಗಿಸುವಲ್ಲಿ ಎಲ್ಲರ ಸಹಕಾರ, ಬೆಂಬಲವೂ ಅಗತ್ಯ.*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....