ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಸೇನೆ ನೆರಳಲ್ಲಿ ಇಮ್ರಾನ್ ಖಾನ್ ನಡೆ

ಎನ್. ಪಾರ್ಥಸಾರಥಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು
ಕ್ರಿಕೆಟರ್ ಆಗಿ ಹೆಸರು ಮಾಡಿದ್ದ ಇಮ್ರಾನ್ ಖಾನ್ ಪಾಕಿಸ್ತಾನದ ಸಂಭಾವ್ಯ ಪ್ರಧಾನಿಯಾಗಿ ಹೊಮ್ಮಿದ್ದಾರೆ. 1996ರಲ್ಲಿ ಅವರು ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಪಕ್ಷ ಸ್ಥಾಪಿಸಿದರೂ ಅವರಾಗಲಿ, ಅವರ ಪಕ್ಷವಾಗಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಿರಲಿಲ್ಲ. ಕಳೆದ ಚುನಾವಣೆಯಲ್ಲೇ ಅವರ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಈ ಬಾರಿಯ ಗೆಲುವು ಕೂಡ ಇಮ್ರಾನ್ ಚರಿಷ್ಮಾ ಅಥವಾ ರಾಜಕೀಯ ಕಾರ್ಯಸೂಚಿಯಿಂದ ದೊರೆತದ್ದಲ್ಲ ಎಂಬುದು ಸ್ಪಷ್ಟ. ಅಲ್ಲದೆ, ಪಾಕಿಸ್ತಾನದ ಚುನಾವಣೆಗಳು ಅಲ್ಲಿಯ ಸೇನೆಯ ನೆರಳಲ್ಲೇ, ಅದರ ಆಣತಿಯಂತೆ ನಡೆಯುತ್ತವೆ ಎಂಬುದನ್ನೂ ನಾವು ಗಮನಿಸಬೇಕು. ಮಾಜಿ ಪ್ರಧಾನಿ ನವಾಜ್ ಷರೀಫ್ ಸೇನೆಯೊಂದಿಗೆ ವಿರೋಧ ಕಟ್ಟಿಕೊಂಡಿದ್ದರಿಂದಲೇ ಮಗಳೊಡನೆ ಜೈಲು ಸೇರುವಂತಾಯಿತು. ಇನ್ನು, ಬೆನಜೀರ್ ಭುಟ್ಟೋ ಕೂಡ ಸೇನೆಯೊಂದಿಗೆ ವಿರೋಧ ಕಟ್ಟಿಕೊಂಡವರೇ. ಹಾಗಾಗಿ, ಅವರ ಪುತ್ರ ಬಿಲಾವಲ್ ಭುಟ್ಟೋ ಮೇಲೆ ಸೇನೆಗೆ ನಂಬಿಕೆ ಇಲ್ಲ. ಹೀಗಾಗಿ ಸೇನೆಗೆ ಉಳಿದಿದ್ದ ಆಯ್ಕೆ ಇಮ್ರಾನ್ ಖಾನ್ ಮಾತ್ರ! ಇಮ್ರಾನ್​ರ ಪಿಟಿಐ ಪಕ್ಷವನ್ನು ಸೇರುವಂತೆ, ಅದಕ್ಕೆ ಮತ ಹಾಕಿ ಗೆಲ್ಲಿಸುವಂತೆ ಸೇನೆ ಕಳೆದ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಜನರ ಮೇಲೆ, ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತ ಬಂದಿತ್ತು ಎಂಬುದನ್ನು ಗಮನಿಸಿದರೆ ಚುನಾವಣೆಯಲ್ಲಿ ಸೇನೆಯ ಪಾತ್ರವನ್ನು ನಾವು ಸುಲಭವಾಗಿಯೇ ಊಹಿಸಬಹುದು. ಅಷ್ಟಾಗಿಯೂ, ಇಮ್ರಾನ್​ರ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸಿಲ್ಲ. ಸರ್ಕಾರ ರಚನೆ ಮಾಡಬೇಕಾದರೆ ಪಕ್ಷೇತರರ ಬೆಂಬಲ ಅನಿವಾರ್ಯ. ಈ ಚಿತ್ರಣ ಇನ್ನಷ್ಟೇ ಹೊರಬೀಳಬೇಕಿದೆ. ಆದಾಗ್ಯೂ ಈ ಚುನಾವಣೆ ಕೆಲ ಸ್ಪಷ್ಟ ಸಂದೇಶಗಳನ್ನು ರವಾನಿಸಿದೆ. ಇಮ್ರಾನ್ ಖಾನ್ ಪಕ್ಷ ಪ್ರಬಲ ರಾಜಕೀಯ ಶಕ್ತಿಯಾಗಿ ಹೊಮ್ಮಿಲ್ಲವಾದ್ದರಿಂದ ಅದು ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಸೇನೆಯ ಸಮ್ಮತಿ ತೆಗೆದುಕೊಳ್ಳುವುದು ಅನಿವಾರ್ಯ. ಮುಂದಿನ ದಿನಗಳಲ್ಲಿ ಸೇನೆ ಹೇಳಿದಷ್ಟೇ ಕೇಳುವ ಕೆಲಸ ಅವರದಾದರೂ ಅಚ್ಚರಿಯಿಲ್ಲ. ಖಾನ್ ಈಗಾಗಲೇ ಅಮೆರಿಕವನ್ನು ವಿರೋಧಿಸಿದ್ದಾರೆ. ಆದ್ದರಿಂದ ಚೀನಾದ ಸ್ನೇಹ ಅವರಿಗೆ ಅನಿವಾರ್ಯ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಭಾರತದ ವಿಷಯದಲ್ಲಿ ಪಾಕ್ ಆಕ್ರಮಕ ಹೆಜ್ಜೆಯನ್ನು ಇರಿಸುವ ಸಾಧ್ಯತೆ ತೀರಾ ಕ್ಷೀಣ ಎಂದೇ ಹೇಳಬಹುದು. ಹಾಗಾಗಿ, ಭಾರತ ಹೆಚ್ಚೇನು ತಲೆ ಕೆಡಿಸಿಕೊಳ್ಳುವ ಅಗತ್ಯವೇನಿಲ್ಲ. ಮುಖ್ಯವಾಗಿ, ಕಾಶ್ಮೀರ ವಿಷಯ ಪಾಕಿಸ್ತಾನದ ರಾಜಕಾರಣಿಗಳಿಗೆ ‘ಉದ್ಯಮ’ ಇದ್ದಂತೆ. ಅದೇ ವಿಷಯವನ್ನು ಹೇಳಿ ಮತ ಪಡೆಯುತ್ತಾರೆ, ಜನರ ಭಾವನೆ ಕೆರಳಿಸುತ್ತಾರೆ, ಹಣ ಸಂಗ್ರಹಿಸುತ್ತಾರೆ. ಭಯೋತ್ಪಾದನೆಯನ್ನೂ ಹರಡುತ್ತಾರೆ. ಆದರೆ, ಇತ್ತ ಭಾರತದಲ್ಲಿ ಪರಿಸ್ಥಿತಿ ಬದಲಾಗಿದೆ. ಕಾಶ್ಮೀರದಲ್ಲಿ ಭಾರತೀಯ ಸೇನೆ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ‘ಆಪರೇಷನ್ ಅಲೌಟ್’ ಹೆಸರಿನಲ್ಲಿ ಅದು ಆ ಕಣಿವೆ ರಾಜ್ಯದಲ್ಲಿ ಉಗ್ರನಿಗ್ರಹ ಕಾರ್ಯವನ್ನು ಚುರುಕುಗೊಳಿಸಿದೆ. ಸೇನೆಯ ಈ ನಡೆಗೆ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲವೂ ಇದೆ. ಆದರೂ ಒಂದಂಶದ ಬಗ್ಗೆ ಭಾರತ ಎಚ್ಚರ ವಹಿಸಬೇಕಿದೆ. ಅದೇನೆಂದರೆ, ಇಮ್ರಾನ್ ಖಾನ್​ಗೆ ತೀವ್ರವಾದಿ ಗುಂಪುಗಳು ಮತ್ತು ಭಯೋತ್ಪಾದಕ ಸಂಘಟನೆಗಳು ಬೆಂಬಲ ನೀಡಿವೆ. ಮುಂದೆ, ಅವು ಸರ್ಕಾರದ ಮೇಲೆ ಒತ್ತಡ ಹೇರಿ ಭಾರತವಿರೋಧಿ ಚಟುವಟಿಕೆಗಳಿಗೆ ಪ್ರಚೋದಿಸಬಹುದು. ಅಲ್ಲಿನ ಸೇನೆ ಯಾವುದೇ ಚುನಾಯಿತ ಸರ್ಕಾರವನ್ನು ಪೂರ್ಣಾವಧಿ ನಡೆಯಲು ಬಿಟ್ಟಿಲ್ಲ. ಹೀಗಾಗಿ, ಇಮ್ರಾನ್ ಪಕ್ಷ ಅಧಿಕಾರಕ್ಕೆ ಬಂದರೂ ಸೇನಾಡಳಿತದ ಛಾಯೆ ಇದ್ದೇ ಇರುತ್ತದೆ. ಪೂರ್ಣ ಬಹುಮತವಿಲ್ಲದ, ತೀವ್ರವಾದಿಗಳ ಸ್ನೇಹ-ಸಂಪರ್ಕ ಹೊಂದಿರುವ ಮತ್ತು ಸೇನೆಯ ಮಾತಿಗೆ ತಲೆದೂಗುವ ಅನಿವಾರ್ಯತೆ ಇರುವ ಪ್ರಧಾನಿಗೆ ಅಲ್ಲಿನ ಆಂತರಿಕ ಸ್ಥಿತಿಗಳನ್ನು ಪರಿಹರಿಸುವುದೇ ದೊಡ್ಡ ಸವಾಲು ಆಗುತ್ತದೆ. ಆದ್ದರಿಂದ ಪಾಕಿಸ್ತಾನದ ಈ ಹೊಸ ಸರ್ಕಾರದಿಂದ ಭಾರತದ ಮೇಲೆ ಹೆಚ್ಚೇನು ಪರಿಣಾಮವಾಗದು ಎಂದು ಹೇಳುವುದು ಅವಾಸ್ತವಿಕವೇನೂ ಆಗದು.
ಮಿಲಿಟರಿ ಆಡಳಿತದ ಅವಧಿ
1958-1971: ಮೇಜರ್ ಜನರಲ್ ಐ.ಮಿರ್ಜಾ, ಜನರಲ್ ಅಯೂಬ್ ಖಾನ್, ಜನರಲ್ ಯಾಹ್ಯಾ ಖಾನ್
1977-1988: ಜನರಲ್ ಮುಹಮದ್ ಜಿಯಾ ಉಲ್ ಹಕ್
1999-2008: ಜನರಲ್ ಪರ್ವೆಜ್ ಮುಷರಫ್
ಚುನಾವಣಾ ಅಕ್ರಮದ ಕೋಲಾಹಲ
 ಪಾಕಿಸ್ತಾನದ 31ನೇ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅಧಿಕಾರವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. 70 ನಾಮ ನಿರ್ದೇಶಿತ ಸದಸ್ಯರನ್ನು ಸೇರಿಸಿ ಒಟ್ಟು 342 ಸಂಖ್ಯಾ ಬಲದ ಪಾಕಿಸ್ತಾನ ಸಂಸತ್​ನಲ್ಲಿ ಅಧಿಕಾರಕ್ಕೇರಲು 172 ಸದಸ್ಯರ ಬೆಂಬಲ ಬೇಕು. ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷವು 117 ಸದಸ್ಯರನ್ನು ಹೊಂದಿದ್ದು, ನಾಮ ನಿರ್ದೇಶನ ಸೇರಿ ಒಟ್ಟು 160 ಸಂಖ್ಯೆ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಸರ್ಕಾರ ರಚನೆಗೆ 12 ಸದಸ್ಯರ ಅಗತ್ಯವಿದೆ. ಈಗಾಗಲೇ ಎಂಕ್ಯೂಎಂ ಪಕ್ಷವು ಪಿಟಿಐಗೆ ಬೆಂಬಲ ಸೂಚಿಸಿದ್ದು, 23 ಪಕ್ಷೇತರ ಸದಸ್ಯರಲ್ಲಿ ಕೆಲವರ ಬೆಂಬಲ ಪಡೆದು ಸರ್ಕಾರ ರಚಿಸುವ ತವಕದಲ್ಲಿ ಇಮ್ರಾನ್ ಖಾನ್ ಇದ್ದಾರೆ. ಇದಲ್ಲದೆ ಪಂಜಾಬ್ ಹಾಗೂ ಕೆಪಿಕೆ ಪ್ರಾಂತ್ಯದಲ್ಲಿಯೂ ಸರ್ಕಾರ ರಚಿಸುವುದಾಗಿ ಪಿಟಿಐ ಹೇಳಿಕೊಂಡಿದೆ. ಏತನ್ಮಧ್ಯೆ ಇಮ್ರಾನ್ ಖಾನ್ ವಿರೋಧಿ ರಾಜಕೀಯ ಪಕ್ಷಗಳು ಚುನಾವಣೆ ಅಕ್ರಮದ ಕುರಿತ ಚರ್ಚೆಗೆ ಸಭೆ ಕರೆದಿದ್ದು, ಕುತೂಹಲಕಾರಿ ಬೆಳವಣಿಗೆಯಲ್ಲಿ ಬಿಲಾವಲ್ ಭುಟ್ಟೋ ನೇತೃತ್ವದ ಪಿಪಿಪಿ ಸಭೆಯಿಂದ ದೂರ ಉಳಿದಿದೆ. ಆದರೆ ಮತ ಎಣಿಕೆ ಅಕ್ರಮ ಕುರಿತು ಯಾವುದೇ ತನಿಖೆ ಹಾಗೂ ಚರ್ಚೆಗೆ ಸಿದ್ಧ ಎಂದು ಇಮ್ರಾನ್ ಖಾನ್ ಸವಾಲು ಹಾಕಿದ್ದಾರೆ.
ಶುಕ್ರವಾರ ಏನೇನಾಯ್ತು?
ಧಾರ್ವಿುಕ ಮುಖಂಡರ ಎಂಎಂಎಂ ಪಕ್ಷದಿಂದ ಇಮ್ರಾನ್ ಖಾನ್ ವಿರುದ್ಧ ಅಭಿಯಾನ
ಇಮ್ರಾನ್ ಖಾನ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಎಂಕ್ಯೂಎಂ-ಪಿ ಪಕ್ಷ
ಪಕ್ಷೇತರ ಸದಸ್ಯರನ್ನು ಸೆಳೆಯಲು ಪಿಟಿಐ ಪ್ರಯತ್ನ, ಪಿಪಿಪಿ ಜತೆಗಿನ ಮೈತ್ರಿ ಅಲ್ಲಗಳೆದ ಪಿಟಿಐ.
ಗೆದ್ದಿರುವ ಸದಸ್ಯರು 14 ದಿನಗಳೊಳಗೆ ಚುನಾವಣೆ ಖರ್ಚು ವೆಚ್ಚದ ಮಾಹಿತಿ ನೀಡಿ ಸದಸ್ಯತ್ವದ ಪ್ರಮಾಣಪತ್ರ ಪಡೆಯಬೇಕು.
ಮುಗ್ಗರಿಸಿದ ಮುಖಂಡರು
ಮಾಜಿ ಪ್ರಧಾನಿ ಶಹೀದ್ ಖಾನ್ ಅಬ್ಬಾಸಿ, ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ನವಾಜ್ ಷರೀಫ್ ಸಹೋದರ ಶಹಬಾಜ್ ಷರೀಫ್ ಹಾಗೂ ಬಿಲಾವಲ್ ಭುಟ್ಟೋ ಅವರು ರಾಷ್ಟ್ರೀಯ ಚುನಾವಣೆಯಲ್ಲಿ ಮುಗ್ಗರಿಸಿದ್ದಾರೆ. ಶಹಬಾಜ್ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದರಲ್ಲಿ ಗೆದ್ದಿದ್ದರೆ, ಬಿಲಾವಲ್ ಮೂರು ಕಡೆ ಸ್ಪರ್ಧಿಸಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಕಂಡಿದ್ದಾರೆ. ಅಬ್ಬಾಸಿ ಸ್ಪರ್ಧಿಸಿದ ಒಂದು ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿದ್ದಾರೆ. ಇಮ್ರಾನ್ ಖಾನ್ ಅವರು ಸ್ಪರ್ಧಿಸಿದ ಎಲ್ಲ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
1947ರ ಬಳಿಕ ಪಾಕಿಸ್ತಾನವು 3 ಸಂವಿಧಾನ, 30 ಪ್ರಧಾನಿ, 15 ಅಧ್ಯಕ್ಷರು, 5 ಬಾರಿ ಮಿಲಿಟರಿ ಆಡಳಿತ ಕಂಡಿದೆ. 71 ವರ್ಷಗಳ ಪಾಕ್ ಇತಿಹಾಸದಲ್ಲಿ ಕೇವಲ ಶೇ.48 ಅವಧಿಗೆ ಪ್ರಜಾತಂತ್ರ ಸರ್ಕಾರದ ಪ್ರಧಾನಿ ಆಡಳಿತ ನಡೆಸಿದ್ದಾರೆ.
ಪ್ರಾಂತ್ಯಗಳ ಕಥೆಯೇನು?
ಪಂಜಾಬ್, ಸಿಂಧ್, ಕೆಪಿಕೆ ಹಾಗೂ ಬಲೂಚಿಸ್ಥಾನಗಳಿಗೂ ಚುನಾವಣೆ ನಡೆದಿದೆ. ಸಿಂಧ್​ನಲ್ಲಿ ಪಿಪಿಪಿ ಅಧಿಕಾರಕ್ಕೆ ಬಂದಿದ್ದರೆ, ಕೆಪಿಕೆನಲ್ಲಿ ಪಿಟಿಐ ಅಧಿಕಾರಕ್ಕೇರಿದೆ. ಪಂಜಾಬ್​ನಲ್ಲಿ ಪಿಎಂಎಲ್-ಎನ್ ಪಕ್ಷವು ಹೆಚ್ಚಿನ ಸ್ಥಾನ ಗೆದ್ದಿದ್ದರೂ ಪಕ್ಷೇತರರ ಬೆಂಬಲ ಪಡೆದು ಪಿಟಿಐ ಸರ್ಕಾರ ರಚಿಸುವ ಸಾಧ್ಯತೆಯಿದೆ. ಬಲೂಚಿಸ್ಥಾನದಲ್ಲಿ ಅತಂತ್ರ ಸ್ಥಿತಿ ನಿರ್ವಣವಾಗಿದೆ.
ನವಾಜ್ ಆವಾಜ್
ಚುನಾವಣೆಯಲ್ಲಿ ಇಮ್ರಾನ್ , ಸೇನೆ ಯಿಂದ ಭಾರಿ ಅಕ್ರಮ ನಡೆದಿದೆ ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿ ದ್ದಾರೆ. ಇದೊಂದು ದೋಷಪೂರಿತ ಚುನಾವಣೆಯಾಗಿದ್ದು, ಫಲಿತಾಂಶವನ್ನು ಮಾರ್ಪಡಿಸಲಾಗಿದೆ ಎಂದು ಪಿಎಂಎಲ್-ಎನ್ ಪಕ್ಷದ ಮುಖಂಡರಿಗೆ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...