ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಓಕೆ ಹೇಳುವ ಮುನ್ನ ಜೋಕೆ!

ಪೊಲೀಸ್ ಇಲಾಖೆ, ರಾಜಕಾರಣ, ವೈದ್ಯವೃತ್ತಿ, ವಕೀಲಿಕೆ ಮತ್ತು ಪತ್ರಿಕೋದ್ಯಮಕ್ಕೆ ನಕಲಿ ಕಾಟ ಹೆಚ್ಚಿದಂತೆ ಸೈಬರ್ ಲೋಕದಲ್ಲೂ ಖದೀಮರ ಅಬ್ಬರ ಜೋರಾಗಿದೆ. ಸೈಬರ್ ಅಪರಾಧಗಳ ಬಗ್ಗೆ ಜನರು ಜಾಗೃತರಾದಷ್ಟೇ ವೇಗದಲ್ಲಿ ಸೈಬರ್ ಕಳ್ಳರೂ ಕಂಪ್ಯೂಟರ್​ನಂತೆ ಅಪ್​ಡೇಟ್ ಆಗುತ್ತಿರುವುದು ಜನಸಾಮಾನ್ಯರ ನಿದ್ದೆಗೆಡಿಸಿದೆ. ‘ಆಧಾರ್ ನಂಬರ್ ಕೊಟ್ಟು ನೋಡಿ, ನಿಮ್ಮ ವೈಯಕ್ತಿಕ ಮಾಹಿತಿಗೇ ಕನ್ನಹಾಕುತ್ತೇನೆ’ ಎಂದು ಹ್ಯಾಕರ್ ಒಬ್ಬ ಪ್ರಧಾನಿಗೇ ನೇರ ಸವಾಲೆಸೆದಿರುವುದು ಸೈಬರ್ ಅಪರಾಧದ ಕರಾಳತೆಯನ್ನು ಬಯಲು ಮಾಡಿದೆ. ವಂಚನೆ ಜಾಲದ ಇಂಚಿಂಚೂ ಜಾಲಾಡಿ ಜನಜಾಗೃತಿ ಮೂಡಿಸುವ ಈ ಎರಡನೇ ಸರಣಿ ವರದಿಯನ್ನು ವಿಜಯವಾಣಿ ಓದುಗರ ಮುಂದಿಡುತ್ತಿದೆ.
|ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಅಧಿಕಾರಿಗಳ ಸೋಗಿನಲ್ಲಿ, ಲಾಟರಿ ಕಂಪನಿ ಸಿಬ್ಬಂದಿ ಹೆಸರಲ್ಲಿ ಕೋಟಿ ಕೋಟಿ ರೂ. ಬಹುಮಾನದ ಆಸೆ ತೋರಿಸಿ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದು ವಂಚಿಸುತ್ತಿದ್ದ ಖದೀಮರೀಗ ಮತ್ತಷ್ಟು ಹೈಟೆಕ್ ಆಗಿದ್ದಾರೆ. ಮೋಸದ ದಾರಿಗಳ ಬಗ್ಗೆ ಜನರು ಎಚ್ಚೆತ್ತುಕೊಳ್ಳುತ್ತಿರುವುದರಿಂದ ಹೊಸ ವರಸೆ ತೆಗೆದಿರುವ ಈ ಸೈಬರ್ ಕಳ್ಳರೀಗ ಮಾಲ್​ಗಳಲ್ಲಿ ವಸ್ತುಗಳ ಖರೀದಿಗೆ ನೀಡುವ ಪ್ರತಿಕ್ರಿಯೆ, ರಿವಾರ್ಡ್ ಪಾಯಿಂಟ್ಸ್, ಹೆಲ್ಪ್​ಲೈನ್, ಆಧಾರ್ ಕಾರ್ಡ್ ಲಿಂಕ್, ಐಟಿ ರೀಫಂಡ್ ಹೆಸರಲ್ಲಿ ಜನರಿಗೆ ಟೋಪಿ ಹಾಕುವ ದಾರಿ ಕಂಡುಕೊಂಡಿದ್ದಾರೆ.
ಆಧಾರ್ ಲಿಂಕ್ ಸೇಫಲ್ಲ: ಪ್ರತಿಯೊಂದಕ್ಕೂ ಆಧಾರ್ ನಂಬರ್ ಲಿಂಕ್ ಮಾಡುವ ನಿಯಮವನ್ನು ದುರ್ಬಳಕೆ ಮಾಡಿಕೊಳ್ಳುವ ಸೈಬರ್ ಕಳ್ಳರು ‘ನೀವು ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ. ಇದರಿಂದ ನಿಮ್ಮ ಬ್ಯಾಂಕ್ ಖಾತೆ, ಸಿಮ್ ಕಾರ್ಡ್, ಐಟಿ ರಿಟರ್ನ್ಸ್ ಸಲ್ಲಿಕೆಗೆ ತೊಂದರೆಯಾಗುತ್ತದೆ’ ಎಂದು ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ವೈಯಕ್ತಿಕ ವಿವರ ಪಡೆದು ವಂಚಿಸುತ್ತಾರೆೆ.
ಮಾಲ್ ಪ್ರತಿಕ್ರಿಯೆಯಲ್ಲೂ ವಂಚನೆ: ಮಾಲ್​ಗಳಲ್ಲಿ ಉತ್ಪನ್ನಗಳನ್ನು ಖರೀದಿಸಿದಾಗ ಗ್ರಾಹಕರ ಮೊಬೈಲ್ ಪಡೆದುಕೊಳ್ಳುವ ಜತೆಗೆ ಸೇವೆ ಹೇಗಿತ್ತು ಎಂಬುದರ ಬಗ್ಗೆ ಎಲೆಕ್ಟ್ರಾನಿಕ್ ಬಟನ್ ಒತ್ತುವ ಮೂಲಕ ಗುಡ್, ವೆರಿಗುಡ್, ಪೂರ್ ಎಂದು ಪ್ರತಿಕ್ರಿಯೆ ಪಡೆಯುವ ರೂಢಿಯಿದೆ. ಇದನ್ನೇ ಉಪಯೋಗಿಸಿಕೊಳ್ಳುವ ಸೈಬರ್ ಚೋರರು, ಗ್ರಾಹಕರ ನಂಬರ್ ಕದ್ದು ಮಾಲ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಈ ಮಾಲ್​ಗೆ ಭೇಟಿ ನೀಡಿದ್ದ ನೀವು ಸೇವೆ ಪೂರ್ ಎಂದು ಪ್ರತಿಕ್ರಿಯೆ ಕೊಟ್ಟಿದ್ದೀರಿ. ಯಾವ ಕಾರಣಕ್ಕೆ ಎಂದು ಕೇಳುವವರಂತೆ ನಟಿಸಿ ವೈಯಕ್ತಿಕ ವಿವರ ಕದ್ದು ಖಾತೆಗೆ ಕನ್ನ ಹಾಕುತ್ತಾರೆ.
ರಿವಾರ್ಡ್ ಚೀಟಿಂಗ್: ಪೆಟ್ರೋಲ್, ಔಷಧ, ಬಟ್ಟೆ, ದಿನಸಿ ಖರೀದಿಗೆ ಆಪ್/ಕಾರ್ಡ್​ಗಳ ಬಳಕೆ ಹೆಚ್ಚಿದೆ. ಇದರಲ್ಲಿ ಖರೀದಿಸಿದರೆ ರಿವಾರ್ಡ್ ಪಾಯಿಂಟ್ಸ್ ಸಿಗುತ್ತದೆ. ಮೊಬೈಲ್​ಗೆ ಕರೆ ಮಾಡಿ ನಿಮ್ಮ ಕಾರ್ಡ್​ಗೆ ಇಷ್ಟು ಪಾಯಿಂಟ್ಸ್ ಬಂದಿದೆ. ಇಂಥ ಆಫರ್​ಗೆ ಆಯ್ಕೆ ಆಗಿದ್ದೀರಿ ಎಂದು ನಂಬಿಸಿ ವೈಯಕ್ತಿಕ ವಿವರ ಪಡೆದು ಹಣ ಕಬಳಿಸುತ್ತಾರೆ.
ದಿನಕ್ಕೆ 12 ಖಾತೆಗೆ ಕನ್ನ!
ರಾಜ್ಯಾದ್ಯಂತ ಪ್ರತಿದಿನ ಸರಾಸರಿ 12 ಮಂದಿಯ ಬ್ಯಾಂಕ್ ಖಾತೆಗೆ ಸೈಬರ್ ಕಳ್ಳರು ಕನ್ನ ಹಾಕುತ್ತಿದ್ದಾರೆ. 2017ರಲ್ಲಿ ಒಟ್ಟು 3,175 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ವರ್ಷ ಕೇವಲ 6 ತಿಂಗಳಲ್ಲಿ 2,427 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಕರಣ ಶೇ.100 ಹೆಚ್ಚಾಗಿದೆ. ಸರಾಸರಿ ಲೆಕ್ಕ ತೆಗೆದುಕೊಂಡರೆ ಪ್ರತಿನಿತ್ಯ 12 ಪ್ರಕರಣ ಅಧಿಕೃತವಾಗಿ ಠಾಣೆ ಮೆಟ್ಟಿಲೇರುತ್ತಿವೆ.
ಓಟಿಪಿ ಹೇಳದಿದ್ರೂ ಹಣ ಹೋಯ್ತು
ಕ್ರೆಡಿಟ್ ಕಾರ್ಡ್ ಹೆಲ್ಪ್​ಲೈನ್ ಸೋಗಿನಲ್ಲಿ ಕರೆ ಮಾಡಿದ ವಂಚಕರು 16 ಸಂಖ್ಯೆಯ ಕೊನೆಯ ನಾಲ್ಕು ನಂಬರ್ ಕೇಳಿದ್ದಾರೆ. 4 ನಂಬರ್ ಅಷ್ಟೇ ಅಲ್ವಾ ಎಂದುಕೊಂಡು ಮಾಹಿತಿ ನೀಡಿದ ಕೆಲ ಸೆಕೆಂಡ್​ಗೆ 8,340 ರೂ. ಖಾತೆಯಲ್ಲಿ ಕಡಿತವಾಗಿದೆ. ಮೊಬೈಲ್​ಗೆ ಓಟಿಪಿ ನಂಬರ್ ಬಂದಿಲ್ಲ. ಕಾರ್ಡ್​ನ ಸಿವಿವಿ ಸಂಖ್ಯೆಯೂ ಹೇಳಿಲ್ಲ. ಆದರೂ ಹಣ ಕಡಿತವಾಗಿದೆ. ಸಂಬಂಧಪಟ್ಟ ಬ್ಯಾಂಕಿಗೆ ಕೇಳಿದಾಗ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ವಂಚನೆಗೆ ಒಳಗಾದ ಅಜಯ್ಕುಮಾರ್ ಎಂಬುವರು ತಮ್ಮ ಅನುಭವವನ್ನು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.
ಗದಗದ ಕುಲಪತಿಗೆ ವಂಚನೆ
ಜುಲೈ 21ರಂದು ಗದಗ ಗ್ರಾಮೀಣಾಭಿವೃದ್ಧಿ ವಿವಿಯ ಕುಲಪತಿ ಡಾ. ಬಿ. ತಿಮ್ಮೇಗೌಡ ಅವರಿಗೆ ಎಸ್​ಬಿಐ ಅಧಿಕಾರಿ ಗಳ ಸೋಗಲ್ಲಿ ಕರೆಮಾಡಿದ್ದ ವಂಚಕರು ನಿಮ್ಮ ಮತ್ತು ನಿಮ್ಮ ಮಗಳ ಕ್ರೆಡಿಟ್​ಕಾರ್ಡ್ ಅವಧಿ ಮುಗಿದಿದೆ ಎಂದು ನಂಬಿಸಿ ಮಾಹಿತಿ ಪಡೆದು 69 ಸಾವಿರ ವಂಚಿಸಿದ್ದಾರೆ.
ಐಟಿ ರಿಫಂಡ್ ಆಮಿಷವೊಡ್ಡಿ ಟೋಪಿ
ಆ.31 ಆದಾಯ ತೆರಿಗೆ ಪಾವತಿಗೆ ಕೊನೆಯ ದಿನವಾಗಿದ್ದು, ಬಹುತೇಕರು ಆನ್​ಲೈನ್​ನಲ್ಲೇ ರಿಟರ್ನ್ಸ್ ಸಲ್ಲಿಕೆ ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಖದೀಮರು ಅಮಾಯಕರಿಗೆ ಕರೆ/ಮೆಸೇಜ್ ಮಾಡುತ್ತಾರೆ. ‘ನಿಮ್ಮ ಐಟಿ ರಿಫಂಡ್ ಅರ್ಜಿ ಅಂಗೀಕೃತವಾಗಿದ್ದು, ಇಂತಿಷ್ಟು ಮೊತ್ತ ಶೀಘ್ರದಲ್ಲೇ ನಿಮ್ಮ ಈ ನಂಬರ್ ಖಾತೆಗೆ ಜಮೆ ಆಗಲಿದೆ’ ಎಂದು ಯಾವುದೋ ಒಂದು ನಂಬರ್ ಹಾಕಿ ಮೊಬೈಲ್​ಗೆ ಸಂದೇಶ ಕಳುಹಿಸುತ್ತಾರೆ. ಒಂದು ವೇಳೆ ಖಾತೆ ನಂಬರ್ ತಪ್ಪಿದ್ದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಬ್ಯಾಂಕ್ ವಿವರಗಳನ್ನು ಅಪ್​ಡೇಟ್ ಮಾಡಿ ಎಂದು ಸೂಚಿಸಿರುತ್ತಾರೆ. ಇದನ್ನು ನಂಬಿ ಬ್ಯಾಂಕ್ ವಿವರ ನಮೂದಿಸಿದರೆ ಕ್ಷಣಮಾತ್ರ ದಲ್ಲೇ ಖಾತೆಯಲ್ಲಿರುವ ಹಣವೆಲ್ಲ ಖದೀಮರ ಪಾಲಾಗುತ್ತದೆ.
 ಅಧಿಕಾರಿಗಳ ಸೋಗಿನಲ್ಲಿ ಅನಾಮಿಕರು ಕರೆ ಮಾಡಿ ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಬ್ಯಾಂಕ್ ಖಾತೆ ವಿವರ ಕೇಳಿದರೆ ಮಾಹಿತಿ ಹಂಚಿಕೊಳ್ಳಬೇಡಿ.
| ಜಿನೇಂದ್ರ ಖಣಗಾವಿ,  ಸಿಸಿಬಿ ಡಿಸಿಪಿ
ಯಾವುದೇ ಸಂಸ್ಥೆ ಕರೆ ಮಾಡಿ ವೈಯಕ್ತಿಕ ವಿವರ ಕೇಳುವುದಿಲ್ಲ, ಆನ್​ಲೈನ್ ವ್ಯವಹಾರ ತಪ್ಪಾದರೆ ನೇರ ಸಂಸ್ಥೆಯನ್ನೇ ಸಂರ್ಪಸಿ
ಗೂಗಲ್ ಹೆಲ್ಪ್​ಲೈನ್ ನಂಬಬೇಡಿ, ಬ್ಯಾಂಕ್, ಕಂಪನಿಯ ಅಧಿಕೃತ ಹೆಲ್ಪ್​ಲೈನ್ ಸಹಾಯ ಪಡೆಯಿರಿ
ಆಧಾರ್ ಲಿಂಕ್ ನೆಪದಲ್ಲಿ ಕರೆ ಮಾಡಿದರೆ ಮಾಹಿತಿ ಕೊಡಬೇಡಿ, ಕ್ರೆಡಿಟ್, ಡೆಬಿಟ್ ಕಾರ್ಡ್ ಮಾಹಿತಿ ಕೇಳಿ ಯಾವ ಬ್ಯಾಂಕ್​ಗಳೂ ಕರೆ ಮಾಡುವುದಿಲ್ಲ
ಗಿಫ್ಟ್ ವೋಚರ್, ರಿವಾರ್ಡ್ ಪಾಯಿಂಟ್ಸ್ ಆಮಿಷವನ್ನು ನಂಬಬೇಡಿ, ಐಟಿ ರಿಟರ್ನ್ಸ್/ರಿಫಂಡ್ ಬಗ್ಗೆ ಗೊಂದಲವಿದ್ದರೆ ಐಟಿ ಕಚೇರಿಯನ್ನು ನೇರವಾಗಿ ಸಂರ್ಪಸಿ.
ಹೆಲ್ಪ್​ಲೈನ್ ನಂಬರ್ ಬಿಟ್ಹಾಕಿ
ಆನ್​ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ವ್ಯಾಲೆಟ್ ವ್ಯವಹಾರದಲ್ಲಿ ಸಮಸ್ಯೆಯಾದರೆ ಗ್ರಾಹಕರು ಹೆಚ್ಚಾಗಿ ಹೆಲ್ಪ್​ಲೈನ್ ನಂಬರ್ ಹುಡುಕಿ ಕರೆ ಅಥವಾ ಸಂದೇಶ ಕಳುಹಿಸಿ ದೂರು ಕೊಡುತ್ತಾರೆ. ಸಹಾಯದ ಸೋಗಿನಲ್ಲಿ ಕರೆ ಮಾಡುವ ವಂಚಕರು ಬ್ಯಾಂಕ್ ಖಾತೆಯಿಂದ ಕಡಿತವಾಗಿರುವ ಹಣ ಹಿಂದಿರುಗಿಸುವುದಾಗಿ ಹೇಳಿ ವಿವರ ಪಡೆದು ಕನ್ನ ಹಾಕುತ್ತಾರೆ. ಜು.23ರಂದು ಬೆಂಗಳೂರಿನ ಬಿಟಿಎಂ ಲೇಔಟ್​ನ ಮಹಿಳಾ ಟೆಕ್ಕಿ ವೆಬ್​ಸೈಟ್​ನಲ್ಲಿ ತಪ್ಪಾಗಿ ಪಾವತಿಸಿದ್ದ ಬೆಸ್ಕಾಂ ಬಿಲ್ 317 ರೂ. ಹಿಂಪಡೆಯಲು ಆನ್​ಲೈನ್​ಗೆ ದೂರು ನೀಡಿದ್ದರು. ಸಹಾಯದ ನೆಪದಲ್ಲಿ ಕರೆ ಮಾಡಿದ ವಂಚಕ ಕ್ರೆಡಿಟ್ ಕಾರ್ಡ್ ವಿವರ ಪಡೆದು 16 ಸಾವಿರ ರೂ. ಎಗರಿಸಿದ್ದು ಇದಕ್ಕೊಂದು ತಾಜಾ ಉದಾಹರಣೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....