ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಶ್ರೇಷ್ಠ ವಾಗ್ಮಿ , ವಾಗ್ದೇವಿ ವರಪುತ್ರ ಅಟಲ್​ ಜೀ!

ವಾಜಪೇಯಿ ಪ್ರಚಂಡ ವಾಗ್ಮಿ. ಕಲ್ಲನ್ನೂ ಕರಗಿಸುವ ಶಕ್ತಿ ಅವರ ಮಾತುಗಾರಿಕೆಯಲ್ಲಿತ್ತು. ಜಗತ್ತಿನ ಯಾವುದೇ ಭಾಗದ ಜನಸಾಗರದ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸಿದರೂ ಅವರ ಮನಸ್ಸನ್ನು ತಟ್ಟುವ ಶಕ್ತಿ, ಆರ್ದ್ರಗೊಳಿಸುವ ತಾಕತ್ತು ಅಟಲ್ ಮಾತುಗಳಿಗಿತ್ತು. ಅಲ್ಲದೆ, ಕವಿಯೂ ಹೌದು. ಮಾತುಗಳ ಮಧ್ಯವೇ ಕವಿತೆ ಹೇಳುತ್ತಿದ್ದರು.
ಅವರ ಭಾಷಣವೆಂದರೆ ಅದೊಂದು ರಸದೌತಣವೇ ಸರಿ. ಗಾಂಭೀರ್ಯ, ಹಾಸ್ಯ, ಅಕ್ಕರೆ, ಚಟಾಕಿ ಎಲ್ಲವೂ ಮಿಶ್ರಣಗೊಂಡ ಸಂಕ್ರಾಂತಿ ಎಳ್ಳು ಬೆಲ್ಲದ ಮಿಶ್ರಣದಂತಿರುತ್ತಿತ್ತು. ಹೀಗಾಗಿಯೇ, ‘ಅಟಲ್ ಭಾಷಣದ ಮುಂದೆ ನಾವು ಮಾತನಾಡೋಕೆ ನಿಂತರೆ ಕೀಳರಿಮೆ ಉಂಟಾಗುತ್ತದೆ’ ಎಂದು ಆಡ್ವಾಣಿ ಹೇಳಿದ್ದರು.
ಪತ್ರಿಕಾಗೋಷ್ಠಿಗಳೂ ಅಷ್ಟೇ, ಪತ್ರಕರ್ತರಿಗೆ ಅವು ತಲೆನೋವು ಎನಿಸುತ್ತಿರಲಿಲ್ಲ. ಎಷ್ಟೇ ಮುಜುಗರವಾದ ಪ್ರಶ್ನೆಗಳನ್ನು ಕೇಳಿದರೂ ಅದಕ್ಕೆ ತಿಳಿಹಾಸ್ಯದ ಲೇಪನ ನೀಡುತ್ತಿದ್ದರು. ಕೆಲವೊಮ್ಮೆ ಉತ್ತರ ಹೇಳಲಾಗದ ಸ್ಥಿತಿಯಿದ್ದರೆ, ಮಗುವಿನಂತೆ ಮುಗ್ಧ ನಗು ನಕ್ಕು ಸುಮ್ಮನಾಗುತ್ತಿದ್ದರು. ಅದರಲ್ಲೇ ಉತ್ತರ ಅಡಗಿರುತ್ತಿತ್ತು.
ಕೆಲವೊಮ್ಮೆ ಪ್ರಾಸಂಗಿಕವಾಗಿ ಅರ್ಥಪೂರ್ಣ ಪನ್‌ಗಳನ್ನು ಮಾಡುತ್ತಿದ್ದರು ಎಂಬುದಕ್ಕೆ ಉದಾಹರಣೆ- ಒಮ್ಮೆ ಚುನಾವಣಾ ಭಾಷಣ ಮಾಡಲು ಬೃಹತ್ ಸಮಾವೇಶಕ್ಕೆ ಆಗಮಿಸಿದ್ದರು. ಆಗ ಅಭಿಮಾನಿಗಳು ಹಾರ ಹಾಕಲು ಬಂದರು. ಅಟಲ್ ಹೇಳಿದ್ದಿಷ್ಟು: ‘ಮೈ ಹಾರ್(ಹಾರ ಅಥವಾ ಮಾಲೆ/ ಹಿಂದಿಯಲ್ಲಿ ಹಾರ್ ಪದಕ್ಕೆ ಸೋಲೂ ಎನ್ನುವ ಅರ್ಥವೂ ಇದೆ) ನಹಿ, ಜೀತ್ ಲೇನೇ ಆಯಾ ಹೂಂ (ಗೆಲುವು ಸಾಧಿಸಲು ಬಂದಿದ್ದೇನೆ).
ವಿರೋಧಿಗಳನ್ನೂ ಮೆಚ್ಚುವ ನಿಷ್ಕಪಟಿ
ವಾಜಪೇಯಿ ಸಂಸತ್‌ನಲ್ಲಿ ಮಾತನಾಡುತ್ತಾರೆಂದರೆ ಎಲ್ಲರ ಕಿವಿ ನೆಟ್ಟಗಾಗುತ್ತಿದ್ದವು. ಕವಿತ್ವಪೂರ್ಣ ಮಾತುಗಳಲ್ಲಿ ವಿಷಯ ಪ್ರತಿಪಾದನೆಯ ನಡುವೆಯೇ ಹಾಸ್ಯ, ವ್ಯಂಗ್ಯೋಕ್ತಿಗಳು ಸೇರಿರುತ್ತಿದ್ದವು. ಒಳ್ಳೆಯ ಕೆಲಸಗಳನ್ನು ಮಾಡಿದರೆ ತಮ್ಮ ವಿರೋಧಿಗಳನ್ನೂ ಮೆಚ್ಚುವ ನಿಷ್ಕಪಟ ಮನಸ್ಸು ಅವರದು. ಅಂತಹ ಹಲವು ಪ್ರಸಂಗಗಳಿಗೆ ಸಂಸತ್ ಸಾಕ್ಷಿಯಾಗಿದೆ.
ಅವರು ಮೊದಲು ಸಂಸತ್ ಪ್ರವೇಶಿಸಿದಾಗ ನೆಹರು ಪ್ರಧಾನಿಯಾಗಿದ್ದರು. ನೆಹರು ಅವರ ವರ್ಚಸ್ಸು ವಿಶ್ವದಾದ್ಯಂತ ಹರಡಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಬ್ಬ ಪ್ರಭಾವಿ ನಾಯಕರಾಗಿ ನೆಹರು ಸ್ಥಾನ ಗಳಿಸಿದ್ದರು. ವಾಜಪೇಯಿ ಇದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ನೆಹರು ಅವರ ವಿದೇಶಾಂಗ ನೀತಿಯನ್ನು ಕೊಂಡಾಡಿದರು. ಹಾಗೆಯೇ ತಾವು ವಿದೇಶಾಂಗ ಮಂತ್ರಿಯಾದಾಗಲೂ ಅಷ್ಟೆ. ಸಂಸತ್ತಿನಲ್ಲಿ ಮಾಡಿದ ಮೊಟ್ಟಮೊದಲ ಭಾಷಣದಲ್ಲಿ ‘ ಇಷ್ಟರವರೆಗಿನ ನನ್ನ ಸಂಸದೀಯ ಜೀವನದಲ್ಲಿ ಹಲವು ವಿದೇಶಾಂಗ ಖಾತೆ ಸಚಿವರ ಮಾತುಗಳನ್ನು ಕೇಳಿದ್ದೇನೆ. ಅದಕ್ಕೆ ಸಂಬಂಧಿಸಿ ಹಲವು ಟೀಕೆ-ಟಿಪ್ಪಣಿಗಳನ್ನು ಮಾಡಿದ್ದೇನೆ. ಆದರೆ, ಅವರ ಕಷ್ಟ ಏನು ಎಂಬುದು ಈಗ ನನಗೆ ಅರ್ಥವಾಗುತ್ತಿದೆ. ಏಕೆಂದರೆ ಆ ಸ್ಥಾನದಲ್ಲಿ ಈಗ ನಾನಿದ್ದೇನೆ’ ಎಂದು ಹೇಳಿದವರೇ ಈ ಹಿಂದಿನ ಎಲ್ಲ ವಿದೇಶಾಂಗ ಖಾತೆ ಸಚಿವರಿಗೂ ಗೌರವ ಸಲ್ಲಿಸುತ್ತೇನೆ. ಅವರೆಲ್ಲರೂ ತಮ್ಮ ಶಕ್ತ್ಯಾನುಸಾರ ದೇಶದ ಸೇವೆ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಾನು ಅವರೆಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ ಎಂದಾಗ ಇಡೀ ಲೋಕಸಭೆ ವಾಜಪೇಯಿ ಅವರ ಹೃದಯವೈಶಾಲ್ಯಕ್ಕೆ ಸೋತು ಶರಣಾಗಿತ್ತು.
ಹಾಗೆಯೇ ಸಂಸತ್ತಿನ ಹೊರಗಿನ ಒಂದು ಪ್ರಸಂಗ. ಪಂಡಿತ್ ಗೋವಿಂದ ವಲ್ಲಭ ಪಂತ್ ಹೆಸರಿನಲ್ಲಿ 1987ರಲ್ಲಿ ವಾಜಪೇಯಿಗೆ ‘ಶ್ರೇಷ್ಠ ಸಂಸದೀಯ ಪಟು’ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಲು ಎದ್ದುನಿಂತ ವಾಜಪೇಯಿ, ಹಿಂದಿನ ವರ್ಷ ಈ ಪ್ರಶಸ್ತಿಯನ್ನು ನನ್ನ ಹಿರಿಯ ಮಿತ್ರ ಕಮ್ಯುನಿಸ್ಟ್ ಕಾಮ್ರೇಡ್ ಇಂದ್ರಜಿತ್ ಗುಪ್ತಾ ಅವರಿಗೆ ನೀಡಲಾಗಿತ್ತು. ಅವರಿಗೆ ಈ ಪ್ರಶಸ್ತಿ ನೀಡಿದ್ದು ಅತ್ಯಂತ ಯೋಗ್ಯವಾಗಿತ್ತು. ಅವರಲ್ಲಿ ಇದನ್ನು ಸ್ವೀಕರಿಸಲು ಬೇಕಾದ ಎಲ್ಲ ಅರ್ಹತೆಗಳೂ ಇವೆ. ಆದರೆ, ನನಗೆ ಆ ಅರ್ಹತೆ ಇಲ್ಲ. ಆದರೂ ಪ್ರಶಸ್ತಿ ನೀಡುತ್ತಿದ್ದಾರೆ ಎಂದರು. ವೈಚಾರಿಕವಾಗಿ ಕಡು ವಿರೋಧಿಗಳೆನಿಸಿದ್ದ ಕಮ್ಯುನಿಷ್ಟರ ಬಗ್ಗೆಯೂ ಅವರು ವ್ಯಕ್ತಪಡಿಸಿದ ಸದ್ಭಾವನೆ ಅಲ್ಲಿದ್ದರನ್ನು ಮೂಕವಿಸ್ಮಿತರನ್ನಾಗಿಸಿತ್ತು.
ಅಟಲ್ ನೆಚ್ಚಿನ ಉಡುಪು
ಧೋತಿ ಕುರ್ತಾ ಅಥವಾ ನೆಹರು ಶೈಲಿಯ ಜಾಕೆಟ್ ಧರಿಸುತ್ತಿದ್ದರು. ಪಾಶ್ಚಾತ್ಯ ಶೈಲಿಯ ಉಡುಪು ಧರಿಸುವ ಇಚ್ಛೆ ಅವರಿಗಿತ್ತು. ಆದರೆ, ರಾಜಕೀಯದಲ್ಲಿದ್ದ ಕಾರಣ, ಅಂತಹ ಉಡುಪು ತೊಡುತ್ತಿರಲಿಲ್ಲ.
ಥ್ರಿಲ್ ಕೊಟ್ಟ ಕ್ಷಣ
ಇತರ ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ, ಬಹುಮತ ಇಲ್ಲದಿದ್ದರೂ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ಸರ್ಕಾರ ರಚಿಸಲು ಆಹ್ವಾನಿಸಿದ್ದು.
ಬೇಸರದ ಕ್ಷಣ
1999ರ ಏಪ್ರಿಲ್‌ನಲ್ಲಿ ಲೋಕಸಭೆಯಲ್ಲಿ ಒಂದೇ ಒಂದು ಮತದಿಂದ ಸರ್ಕಾರ ಬಿದ್ದದ್ದು.
ಇಷ್ಟದ ವಿಷಯಗಳು
ನಾಯಿ ಜತೆ ಸಮಯ ಕಳೆಯುವುದೆಂದರೆ ಅಟಲ್‌ಗೆ ಪಂಚಪ್ರಾಣ.
ಕಿಚಡಿ, ಪೂರಿ ಖಚೋರಿ, ಮೊಸರೊಡೆ, ಪರಾಠ, ಖೀರ್ ಮತ್ತು ಚೈನೀಸ್ ತಿನಿಸುಗಳು.
ಸದಾ ಹಸನ್ಮುಖಿಯಾದ ನಿಮಗೆ ಸಿಟ್ಟು ಬರುವುದಿಲ್ಲವೇ ಎಂದರೆ, ಪ್ರತಿದಿನವೂ ಸಿಟ್ಟು ಬರುತ್ತದೆ ಎನ್ನುತ್ತಿದ್ದರು.
ಭಾರತದಲ್ಲಿ ಮನಾಲಿ ಮತ್ತು ಆಲ್ಮೋರಾ ಇವರ ನೆಚ್ಚಿನ ತಾಣ. ಕೆನಡಾದ ವ್ಯಾಂಕೂವರ್ ಖುಷಿ ಕೊಡುವ ಸ್ಥಳ. ಚಳಿಗಾಲವನ್ನು ತುಂಬಾ ಇಷ್ಟಪಡುತ್ತಿದ್ದರು. ಸಫ್ದರ್‌ಜಂಗ್ ರಸ್ತೆಯಲ್ಲಿದ್ದ ತಮ್ಮ ಹಳೇ ಬಂಗಲೆಯಲ್ಲಿ ಬಿಸಿಲಿನಲ್ಲಿ ಚಳಿ ಕಾಯಿಸಿಕೊಳ್ಳುವುದೆಂದರೆ ಆಪ್ಯಾಯಮಾನವಾಗಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....