ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಪೋಖ್ರಾನ್ ದಿಟ್ಟತನ ಸ್ಮೈಲಿಂಗ್ ಬುದ್ಧ

ಇಡೀ ಜಗತ್ತಿನ ಅಷ್ಟೂ ರಾಷ್ಟ್ರಗಳ ಕಣ್ತಪ್ಪಿಸಿ ನಡೆಸಿದ ಅಣ್ವಸ್ತ್ರ ಪರೀಕ್ಷೆಗೆ ನೀಡಿದ್ದ ರಹಸ್ಯ ಕೋಡ್​ವರ್ಡ್ ‘ಸ್ಮೈಲಿಂಗ್ ಬುದ್ಧ.’ ನಭೋಮಂಡಲದಲ್ಲಿ ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್ ಮತ್ತಿತರ ದೇಶಗಳ ಕಣ್ಗಾವಲಿಗೂ ಸಿಗದೆ ನಡೆಸಲಾದ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ಸಾಧಾರಣವಾದುದಲ್ಲ.
 ಈ ಕಾರ್ಯಾಚರಣೆ ಬಳಿಕ ವಾಜಪೇಯಿಯವರ ಬಗ್ಗೆ ಅನ್ನಿಸಿದ್ದು- ‘ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ’ ಇದು ವಾಜಪೇಯಿಗೆ ಸಂಪೂರ್ಣ ಅನ್ವಯಿಸುವ ನುಡಿಗಟ್ಟು. ಸದಾ ಮಗುವಿನಂತಹ ಮುಗುಳುನಗೆ, ಭಾವಪರವಶತೆಯ ಮನಸ್ಸು, ಮೃದುವಾದ ಮಾತುಗಳು… ಇವನ್ನು ಕಂಡಾಗ ವಾಜಪೇಯಿ ಎಷ್ಟು ಮೃದು ಸ್ವಭಾವದವರು ಎಂದು ಅನ್ನಿಸದಿರದು. ಇದು ನೂರಕ್ಕೆ ನೂರು ಸತ್ಯ. ಅದರಲ್ಲೇನೂ ಅನುಮಾನವಿರಲಿಲ್ಲ. ಆದರೆ, ದೇಶದ ರಕ್ಷಣೆ ವಿಷಯ, ಸಾಮಾಜಿಕ ಹಿತದ ವಿಷಯ ಬಂದಾಗ ಅವರು ಅತ್ಯಂತ ಕಠೋರ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಇದಕ್ಕೆ ಯೋಗ್ಯ ಉದಾಹರಣೆಯೆಂದರೆ ಪೋಖ್ರಾನ್​ನಲ್ಲಿ ಕೈಗೊಂಡ ಅಣು ಪರೀಕ್ಷೆ.
ಆ ಸಂದರ್ಭದಲ್ಲಿ ಅಣ್ವಸ್ತ್ರ ಪರೀಕ್ಷೆ ಸುಲಭದ ಕೆಲಸವಾಗಿರಲಿಲ್ಲ. ಇಡೀ ವಿಶ್ವದ ಹತ್ತಾರು ದೇಶಗಳು ಕಣ್ಣಿಗೆ ಎಣ್ಣೆ ಹಾಕಿಕೊಂಡು ಕಾಯುತ್ತಿದ್ದವು. ಅದರಲ್ಲೂ ಅಮೆರಿಕವು ಉಪಗ್ರಹದ ಮೂಲಕ ಯಾವುದೇ ದೇಶದ ಒಂದೊಂದು ಇಂಚು ಭೂಮಿಯನ್ನೂ ಪರಿವೀಕ್ಷಿಸುವ ಸಾಮರ್ಥ್ಯ ಹೊಂದಿದ್ದರಿಂದ ಎಷ್ಟು ಎಚ್ಚರ ವಹಿಸಿದರೂ ಸಾಲದೆಂಬ ಪರಿಸ್ಥಿತಿ ಇತ್ತು! ಇಂತಹ ಸಂದರ್ಭದಲ್ಲಿ ವಾಜಪೇಯಿ ಅಧಿಕಾರಕ್ಕೆ ಬಂದ ಕೂಡಲೇ ಕೈಗೊಂಡ ಕೆಲಸ ಅಣ್ವಸ್ತ್ರ ಪರೀಕ್ಷೆ.
ಹಿಂದೆ 1962ರಲ್ಲಿ ಚೀನಾ ಆಕ್ರಮಣದ ನಂತರ ಭಾರತವೂ ಅಣ್ವಸ್ತ್ರ ದೇಶವಾಗಬೇಕೆಂದು ನೆಹರು ಬಯಸಿದ್ದರು. ಇದರಿಂದ ಚೀನಾದ ‘ನ್ಯೂಕ್ಲಿಯರ್ ಬ್ಲಾಕ್​ವೆುೕಲ್’ ತಡೆಗಟ್ಟಲು ಸಾಧ್ಯ ಎಂದು ಅವರು ಎಣಿಸಿದ್ದರು. ಆದ್ದರಿಂದ ಪರಮಾಣು ಸಂಶೋಧನೆಗೆ ಬೇಕಾದ ವ್ಯವಸ್ಥೆಗೆ ಅವರು ಆದ್ಯತೆ ನೀಡಿದರು. ನಂತರ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಇಂದಿರಾಗಾಂಧಿ ಕಾಲದಲ್ಲೂ ಇದು ಮುಂದುವರಿಯಿತು. 1972ರಲ್ಲಿ ಡಾ.ರಾಜಾರಾಮಣ್ಣ ನೇತೃತ್ವದಲ್ಲಿ ಇಂದಿರಾ ಅಣ್ವಸ್ತ್ರ ಪರೀಕ್ಷಾ ತಯಾರಿಗೆ ಸಿದ್ಧತೆ ನಡೆಸುವಂತೆ ಸೂಚಿಸಿದರು. 1974ರಲ್ಲಿ ಮೊದಲ ಬಾರಿಗೆ ಅಣ್ವಸ್ತ್ರ ಪರೀಕ್ಷೆಯೂ ನಡೆಯಿತು. ಆಗ ಅಮೆರಿಕ, ಚೀನಾ ಮುಂತಾದ ದೇಶಗಳು ಇದನ್ನು ವಿರೋಧಿಸಿದರೂ ಅಷ್ಟೊಂದು ಗಂಭೀರ ಸ್ವರೂಪ ಪಡೆಯಲಿಲ್ಲ. ಆದರೆ ಪರಮಾಣು ಪರೀಕ್ಷಾ ಕೇಂದ್ರದ ಮೇಲೆ ಅಮೆರಿಕ ತನ್ನ ಕಳ್ಳದೃಷ್ಟಿಯನ್ನು ಇಟ್ಟೇ ಇತ್ತು. 1995ರಲ್ಲಿ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಇಂಥದ್ದೇ ಪ್ರಯೋಗ ನಡೆಸಲು ಹೋಗಿ ವಿಫಲರಾದದ್ದು ಇದೇ ಕಾರಣದಿಂದ. ಪೂರ್ವಸಿದ್ಧತೆಯ ಹಂತದಲ್ಲಿರುವಾಗಲೇ ಅಮೆರಿಕಕ್ಕೆ ಸಂಪೂರ್ಣ ಸುಳಿವು ಸಿಕ್ಕಿಬಿಟ್ಟಿತು. ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅಬ್ಬರಕ್ಕೆ ಹೆದರಿ ಆಗ ನರಸಿಂಹರಾವ್ ಅನಿವಾರ್ಯವಾಗಿ ಸುಮ್ಮನಾದರು. ಇದಾದ ಕೇವಲ ಮೂರೇ ವರ್ಷದಲ್ಲಿ ವಾಜಪೇಯಿ ಪ್ರಧಾನಿಯಾದ್ದರಿಂದ ಅಮೆರಿಕ ಇನ್ನಷ್ಟು ಜಾಗೃತವಾಗೇ ಇತ್ತು. ಉಪಗ್ರಹದ ಮೂಲಕ ರಾಜಸ್ಥಾನದ ಪೋಖ್ರಾನ್​ನ ಪರಮಾಣು ಪರೀಕ್ಷಾ ಕೇಂದ್ರದ ಮೇಲೆ ಕಣ್ಣಿಟ್ಟು ಕಾಯುತ್ತಿತ್ತು.
ಅದು ಚಾಪೆಯ ಕೆಳಗೆ ನುಸುಳುವ ಕೆಲಸ ಮಾಡಿದರೆ, ವಾಜಪೇಯಿ ರಂಗೋಲಿಯ ಕೆಳಗೆ ನುಸುಳಬಲ್ಲರು ಎಂಬ ಕಲ್ಪನೆ ಅಮೆರಿಕಕ್ಕೆ ಇರಲಿಲ್ಲವೆಂದೇ ಕಾಣುತ್ತದೆ. ವಾಜಪೇಯಿ 1998ರ ಫೆಬ್ರವರಿ 18ಕ್ಕೆ ಪ್ರಧಾನಿಯಾದರು. ಮಾರ್ಚ್​ನಲ್ಲೇ ಈ ಮಹತ್ಕಾರ್ಯಕ್ಕೆ ಕೈಹಾಕಿದರು. ಕೆಲವೇ ಪ್ರಮುಖ ವಿಜ್ಞಾನಿಗಳನ್ನು ಕರೆದು ಆದಷ್ಟು ಶೀಘ್ರವಾಗಿ ಪರಮಾಣು ಸ್ಫೋಟ ಪರೀಕ್ಷೆಗೆ ಅತ್ಯಂತ ಗುಪ್ತವಾಗಿ ಸಿದ್ಧತೆ ನಡೆಸುವಂತೆ ಸೂಚಿಸಿದರು. ಈ ಕಾರ್ಯ ಅದೆಷ್ಟು ಗುಪ್ತವಾಗಿ ನಡೆಯಿತೆಂದರೆ, ನಿಜಕ್ಕೂ ಭಾರತದ ಇತಿಹಾಸದಲ್ಲಿ ರೋಮಾಂಚಕ ಅಧ್ಯಾಯವೆಂದೇ ಹೇಳಬೇಕು.
ಅತಿ ಗೌಪ್ಯವಾಗಿ ಕೆಲಸ ಆರಂಭವಾಯಿತು. ಕೇಂದ್ರ ಮಂತ್ರಿಮಂಡಲದ ಹಿರಿಯ ಸಚಿವರಿಗೂ ಇದು ಗೊತ್ತಿರಲಿಲ್ಲ. ಕೆಲವೇ ವಿಜ್ಞಾನಿಗಳು ನಿಯೋಜಿತರಾಗಿದ್ದರು. ಆ ಪೈಕಿ ತಮಿಳುನಾಡಿನ ರಾಜಗೋಪಾಲ ಚಿದಂಬರಂ(ನೇತೃತ್ವ), ಎಪಿಜೆ ಅಬ್ದುಲ್ ಕಲಾಂ(ತಮಿಳುನಾಡು), ಡಾ.ರಾಜಾರಾಮಣ್ಣ(ಕರ್ನಾಟಕ), ಪಿ.ಕೆ.ಐಯ್ಯಂಗಾರ್(ಕೇರಳ), ನಾಗಪಟ್ಟಣಂ ಸಾಂಬಶಿವ ವೆಂಕಟೇಶ್(ಆಂಧ್ರಪ್ರದೇಶ), ಡಾ.ವಾಮನ್ ದತ್ತಾತ್ರೇಯ ಪಟವರ್ಧನ್(ಮಹಾರಾಷ್ಟ್ರ)ಇವರು ಪ್ರಮುಖರು. ಜತೆಗೆ 75 ಆಯ್ದ ವಿಜ್ಞಾನಿಗಳ ಸಮೂಹ. ಉಪಗ್ರಹಕ್ಕೂ ಸುಳಿವು ಸಿಗದ ರೀತಿಯಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಯಿತು. ರಾತ್ರಿ ಹೊತ್ತೇ ಹೆಚ್ಚಿನ ಕೆಲಸಗಳು ನಡೆದವು. ಕೆಲಸಕ್ಕೆಂದು ಬರುವವರು ಗುಂಪಾಗಿ ಪೋಖ್ರಾನ್ ಬಳಿಯ ಯಾವುದೋ ಸ್ಥಳಕ್ಕೆ ಬಸ್​ನಿಂದ ಬಂದಿಳಿದು ಮಿಲಿಟರಿ ವಾಹನದಲ್ಲಿ ಸೈಟ್​ಗೆ ಬರುತ್ತಿದ್ದರು. ಅವರ ಕೆಲಸ ಮುಗಿದ ಮೇಲೆ ಅಷ್ಟೇ ನಿಶ್ಯಬ್ದವಾಗಿ ಅವರು ತೆರಳುತ್ತಿದ್ದರು. ಇನ್ನೊಂದು ಗುಂಪು ಬರುತ್ತಿತ್ತು. ಆ ಇಡೀ ಸೈಟ್​ನಲ್ಲಿ ಕೆಲಸ ಮಾಡುವವರೆಲ್ಲರೂ ಮಿಲಿಟರಿ ವೇಷವನ್ನೇ ಧರಿಸುತ್ತಿದ್ದರು. ಏಕೆಂದರೆ ಉಪಗ್ರಹದ ಕಣ್ಣಿನಿಂದ ನೋಡಿದರೂ ಎಂದಿನಂತೆ ಮಿಲಿಟರಿ ಆ ಸ್ಥಳದಲ್ಲಿ ಪಹರೆ ನಡೆಸುತ್ತಿದೆ ಎಂದು ಅನ್ನಿಸುವಂತಿರಬೇಕು. ಇಷ್ಟು ಎಚ್ಚರಿಕೆ, ಮುಂಜಾಗ್ರತೆ ವಹಿಸಿ 1998ರ ಮೇ 11 ಮತ್ತು 13ರಂದು ಯಶಸ್ವಿಯಾಗಿ ಐದು ಸ್ಪೋಟಗಳನ್ನು ನಡೆಸಲಾಯಿತು.
13ರಂದು ಮಧ್ಯಾಹ್ನ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ‘ಆಪರೇಷನ್ ಶಕ್ತಿ’ ಹೆಸರಿನಲ್ಲಿ ಐದು ಸ್ಪೋಟಗಳನ್ನು ನಡೆಸಿರುವುದಾಗಿ ಪ್ರಧಾನಿ ವಾಜಪೇಯಿ ಘೊಷಿಸಿದಾಗ ಇಡೀ ವಿಶ್ವವೇ ತಬ್ಬಿಬ್ಬಾಯಿತು. ಅಮೆರಿಕ ಮೈ ಚಿವುಟಿಕೊಂಡಿತು. ತಾನು ಎಲ್ಲಿ ಯಾಮಾರಿದೆ ಎಂಬುದನ್ನು ತಿಳಿಯಲು ತನ್ನೆಲ್ಲ ಗುಪ್ತಚರ ವ್ಯವಸ್ಥೆಯನ್ನೂ ಜಾಲಾಡಿತು. ವಾಜಪೇಯಿ ನೇತೃತ್ವದ ಭಾರತದ ದಿಟ್ಟತನ ಮತ್ತು ಚಾಣಾಕ್ಷತೆಯಿಂದಾಗಿ ವಿಶ್ವದ ದೊಡ್ಡಣ್ಣನೆಂದೇ ಮೆರೆಯುವ ಅಮೆರಿಕಕ್ಕೆ ದಿಕ್ಕೇ ತೋಚದ ಪರಿಸ್ಥಿತಿ ಉಂಟಾಯಿತು.
ಅವಮಾನ ಮತ್ತು ಅಹಮಿಕೆಯ ಧೋರಣೆಯಿಂದ ಕುದಿಯುತ್ತಿದ್ದ ಅಮೆರಿಕ ಸಹಜವಾಗಿ ಭಾರತದ ವಿರುದ್ಧ ಅಬ್ಬರಿಸಿತು. ಹಲವು ರೀತಿಯ ವ್ಯಾವಹಾರಿಕ, ರಾಜತಾಂತ್ರಿಕ ಮತ್ತು ಆರ್ಥಿಕ ನಿರ್ಬಂಧಗಳನ್ನು ಹೇರಿರುವುದಾಗಿ ಘೊಷಿಸಿತು. ಆದರೆ ವಾಜಪೇಯಿ ಇದಕ್ಕೆ ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ. ವಿರೋಧ ಪಕ್ಷಗಳು ವಾಜಪೇಯಿ ಮೇಲೆ ಹರಿಹಾಯ್ದವು. ಟೀಕೆಗಳ ಸುರಿಮಳೆಯೇ ಆಯಿತು. ಇದೆಲ್ಲದಕ್ಕೂ ವಾಜಪೇಯಿ ನೀಡಿದ್ದು ಮುಗುಳುನಗೆಯ ಉತ್ತರ ಮಾತ್ರ. ಅವರ,  ದೂರದೃಷ್ಟಿಗೆ ಆ ನಿರ್ಬಂಧಗಳನ್ನು ಎದುರಿಸುವ ಮಾರ್ಗಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದುದರಿಂದ ಅವರು ಆ ದಿಕ್ಕಿನಲ್ಲಿ ಪ್ರವಹಿಸುವ ಕೆಲಸವನ್ನಷ್ಟೇ ಮಾಡಿದರು. ಕೆಲವೇ ದಿನಗಳಲ್ಲಿ ಎಲ್ಲವೂ ತಣ್ಣಗಾಯಿತು. ನಿಧಾನವಾಗಿ ಅಮೆರಿಕ ವಿಧಿಸಿದ್ದ ನಿರ್ಬಂಧವನ್ನೂ ಅದು ಹಿಂತೆಗೆದುಕೊಳ್ಳಬೇಕಾಯಿತು. ಭಾರತದ ಘನತೆ, ಗೌರವ ಎತ್ತರಕ್ಕೇರಿ ಅದು ‘ಅಣ್ವಸ್ತ್ರ ರಾಷ್ಟ್ರ’ಗಳ ಗುಂಪಿಗೆ ಸೇರುವಂತಾಯಿತು. ಅಮೆರಿಕ, ಚೀನಾ ಬಿಟ್ಟರೆ ಫ್ರಾನ್ಸ್, ರಷ್ಯಾ, ಇಸ್ರೇಲ್ ಮುಂತಾದ ದೇಶಗಳು ಭಾರತದ ದಿಟ್ಟತನವನ್ನು ಮೆಚ್ಚಿ ಹೊಗಳಿದವು. ಅದೇ ವರ್ಷದ ಆಗಸ್ಟ್ 15ರಂದು ಸ್ವಾತಂತ್ರ್ಯೊತ್ಸವ ಸಂದರ್ಭದಲ್ಲಿ ವಾಜಪೇಯಿ ದೆಹಲಿಯ ಕೆಂಪುಕೋಟೆಯ ಮೇಲೆ ನಿಂತು ಹೊಸ ಘೊಷಣೆಯನ್ನೇ ಮಾಡಿದರು. ವೈಜ್ಞಾನಿಕವಾಗಿ ಭಾರತ ಅತಿ ಎತ್ತರಕ್ಕೆ ಏರಬೇಕಾಗಿದೆ. ಅದಕ್ಕಾಗಿ ಸರ್ಕಾರ ಎಲ್ಲ ರೀತಿಯ ಪ್ರಯತ್ನವನ್ನೂ ಮಾಡಲಿದೆ: ಜೈ ಜವಾನ್, ಜೈ ಕಿಸಾನ್ ಎಂಬುದು ಇಷ್ಟರವರೆಗಿನ ನಮ್ಮ ಘೊಷಣೆಯಾಗಿತ್ತು. ಇನ್ನು ಮುಂದೆ ‘ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್’ ಎಂಬುದೇ ನಮ್ಮ ಮಂತ್ರವಾಗಿರುತ್ತದೆ ಎಂದು ವಾಜಪೇಯಿ ಹೇಳಿದಾಗ ಇಡೀ ದೇಶದ ಜನರ ಹೃದಯದಲ್ಲಿ ಹೆಮ್ಮೆಯ ಭಾವ ತುಂಬಿತುಳುಕಿತ್ತು.
ಪ್ರಧಾನಿಯಾಗಿ ವಾಜಪೇಯಿ
ಬಿಜೆಪಿ ಅಂದಾಕ್ಷಣ ಉತ್ತರ ಭಾರತದ ಪಕ್ಷ ಎಂದೇ ಜನಮಾನಸದಲ್ಲಿ ನೆಲೆನಿಂತಿದ್ದ ಕಾಲದಲ್ಲಿ ಸರ್ವವ್ಯಾಪಿಯಾಗಿ ಜನಮಾನಸದಲ್ಲಿ ತಲುಪುವಂತೆ ಮಾಡಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲಬೇಕು. ಐದು ದಶಕಕ್ಕೂ ಹೆಚ್ಚಿನ ಸುದೀರ್ಘ ರಾಜಕೀಯದಲ್ಲಿ ಮೂರು ಬಾರಿ ಪ್ರಧಾನಿಯಾದರು, ಆದರೆ ನಂಬಿದ ತತ್ವ ಸಿದ್ಧಾಂತಕ್ಕಾಗಿ ಅಧಿಕಾರವನ್ನೇ ತ್ಯಜಿಸಿ ಮಾದರಿಯಾದರು.
ಮೊದಲ ಅವಧಿ : ಆ ಹದಿಮೂರು ದಿನ (1996-ಮೇ 16-ಜೂ.1)
1996 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 161 ಸ್ಥಾನ ಪಡೆ ಯುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸರ್ಕಾರ ರಚಿಸುವಂತೆ ವಾಜಪೇಯಿ ಅವರಿಗೆ ಆಗಿನ ರಾಷ್ಟ್ರಪತಿಯಾಗಿದ್ದ ಶಂಕರದಯಾಳ್ ಶರ್ಮಾ ಆಹ್ವಾನ ಕಳುಹಿಸಿದರು. ಅದರಂತೆ ಮೇ 15ರಂದು ಪ್ರಧಾನಿಯಾಗಿ ಪ್ರಮಾಣವಚನ ಕೂಡ ಸ್ವೀಕರಿಸಿದರು. ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಷ್ಟ್ರಪತಿಗಳು ನೂತನ ಪ್ರಧಾನಿಗೆ ಎರಡು ವಾರಗಳ ಕಾಲಾವಕಾಶ ನೀಡಿದರು. ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸುವ ಉಮೇದು ವಾಜಪೇಯಿ ಅವರಿಗಿತ್ತು. ಬಿಜೆಪಿಗೆ ಬೆಂಬಲ ನೀಡದಂತೆ ಕಾಂಗ್ರೆಸ್ ತನ್ನದೇ ಆದ ರಣತಂತ್ರ ರೂಪಿಸಿತ್ತು. ಮೇ 31ರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ವಾಜಪೇಯಿ, ‘ಮಾನ್ಯ ಸಭಾಪತಿಗಳೇ, ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಮಾರುಕಟ್ಟೆಯಲ್ಲಿ ಖರೀದಿಗೆ ಸಾಕಷ್ಟು ಕುದುರೆಗಳಿದ್ದವು, ಆದರೆ ಖರೀದಿಸುವ ಮನಸ್ಸಿರಲಿಲ್ಲ. ನಂಬಿದ ತತ್ವ, ಸಿದ್ಧಾಂತ ಬದಿಗಿಟ್ಟು ಅಧಿಕಾರ ಹಿಡಿಯಲಾರೆ, ಪಕ್ಷ ಸೂಕ್ತ ಬೆಂಬಲ ಹೊಂದಿರದ ಹಿನ್ನೆಲೆಯಲ್ಲಿ ಅಧಿಕಾರ ತ್ಯಜಿಸಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ತಿಳಿಸಿದ್ದರು.
ಎರಡನೇ ಅವಧಿ: 1998 ಮಾ.10-99 ಏ.26
98ರಲ್ಲಿ ವಾಜಪೇಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದ ಬಿಜೆಪಿ 182 ಸ್ಥಾನ ಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ವಾಜಪೇಯಿ ಅವರನ್ನು ಅರಿತಿದ್ದ 22 ಪಕ್ಷಗಳು ಬೆಂಬಲ ಸೂಚಿಸಿದವು. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯಿತು. ಪರಿಣಾಮ, 1999 ಏ. 17ರಂದು ನಡೆದ ವಿಶ್ವಾಸಮತದ ಸಂದರ್ಭದಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಹೇಳಿದ್ದ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಕಡೆ ಕ್ಷಣದಲ್ಲಿ ನಿರ್ಧಾರ ಬದಲಿಸಿ, ಸರ್ಕಾರದ ವಿರುದ್ಧ ಮತ ಚಲಾಯಿಸಿದರು. 2 ತಿಂಗಳ ಹಿಂದಷ್ಟೇ ಒಡಿಶಾದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದ ಗಿರಿಧರ್ ಗಮಾಂಗ್ ಲೋಕಸಭಾ ಸದಸ್ಯ ಸ್ಥಾನಕ್ಕೆ ಇನ್ನು ರಾಜೀನಾಮೆ ನೀಡಿರಲಿಲ್ಲ. ಅವರು ಸರ್ಕಾರದ ವಿರುದ್ಧ ಮತ ಚಲಾಯಿಸಿದರು. ಈ ಎರಡು ಬೆಳವಣಿಗೆಗಳು ಸಂಭವಿಸದಿದ್ದಲ್ಲಿ ಗೆಲವು ಎನ್​ಡಿಎ ಪಾಲಾಗುತ್ತಿತ್ತು. ಒಂದೇ ಮತದಿಂದ ಸರ್ಕಾರ ಪತನಗೊಂಡಿತ್ತು.
ಮೂರನೇ ಅವಧಿ: 1999 ಅ.10-2004 ಫೆ.10
ಜನರ ತೀರ್ವನವೇ ಬೇರೆ ಆಗಿತ್ತು. ದೇಶದ ಜನ ಶಕುನಿ ತಂತ್ರಕ್ಕೆ ಸೆಡ್ಡು ಹೊಡೆದು ವಾಜಪೇಯಿ ಪರ ನಿಂತರು. ಒಂದು ಮತದ ಸೋಲಿನಿಂದ ಅಧಿಕಾರ ಕಳೆದುಕೊಂಡ ಎನ್​ಡಿಎ ಸರ್ಕಾರ 20 ಪಕ್ಷಗಳು ಮೈತ್ರಿಕೂಟದೊಂದಿಗೆ ಮತ್ತೆ ಚುನಾವಣೆಗೆ ಧುಮುಕಿತು. ಕಾಂಗ್ರೆಸ್ ಈ ಚುನಾವಣೆಯಲ್ಲಿ ಮತ್ತೆ 29 ಸ್ಥಾನ ಕಳೆದುಕೊಂಡರೆ, ಎನ್​ಡಿಎ ಮೈತ್ರಿಕೂಟ 269 ಸ್ಥಾನ ಗಳಿಸಿತ್ತು. 29 ಸ್ಥಾನ ಗೆದ್ದ ತೆಲುಗುದೇಶಂ, ಎನ್​ಡಿಎ ಸರ್ಕಾರವನ್ನು ಬೆಂಬಲಿಸುವುದರೊಂದಿಗೆ ಸರ್ಕಾರ ರಚನೆಯ ಹಾದಿ ಸುಗಮವಾಯಿತು. 4 ವರ್ಷ ಏಳು ತಿಂಗಳು 9 ದಿನ ಸರ್ಕಾರ ರಚಿಸಿದ್ದ ವಾಜಪೇಯಿ, ಅವಧಿಗೂ ಮುನ್ನವೇ ಚುನಾವಣೆಗೆ ತೆರಳಿದ್ದರಿಂದ ಪಕ್ಷ ಬಹುಮತ ಕಳೆದುಕೊಂಡು, ವಾಜಪೇಯಿ ನಿಧಾನವಾಗಿ ನೇಪಥ್ಯಕ್ಕೆ ಸರಿದರು.
ಜನ್ಮಜಾತ ಶ್ರೇಷ್ಠ,  ಕವಿ

ವಾಜಪೇಯಿ ರಾಜಕಾರಣಿ ಎಂಬುದಕ್ಕಿಂತ ಹೆಚ್ಚಾಗಿ ಕವಿತ್ವ ಅವರಲ್ಲಿ ತುಂಬಿ ತುಳುಕುತ್ತಿತ್ತು. ನಾನು ಸ್ವಲ್ಪಹೊತ್ತು ಸುಮ್ಮನೆ ಕುಳಿತರೂ ಯಾವುದೋ ಭಾವಲೋಕಕ್ಕೆ ಜಾರಿಬಿಡುತ್ತೇನೆ. ನನ್ನಲ್ಲಿ ಕವಿತ್ವವು ಸ್ಪುರಿಸುತ್ತದೆ. ಎಷ್ಟೋ ಬಾರಿ ರಾಜಕೀಯದ ಭಾಷಣ ಮಾಡುವಾಗಲೂ ನನ್ನಲ್ಲಿನ ಕವಿ ಜಾಗೃತನಾಗಿಬಿಡುತ್ತಾನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಅದು ವಾಸ್ತವವೂ ಆಗಿತ್ತು. ಅದಕ್ಕಾಗೇ ಅವರ ಮಾತುಗಳು ಅಷ್ಟು ಆಕರ್ಷಕವಾಗಿರುತ್ತಿದ್ದವು. ಕೇಳುಗರ ಮನಸ್ಸನ್ನು ಸೂರೆಗೊಳ್ಳುತ್ತಿದ್ದವು. ಮೂಲತಃ ಅವರು ಭಾವಜೀವಿ. ಇದರಿಂದಾಗಿಯೇ ಕವಿತೆಗಳು ಹುಟ್ಟುತ್ತಿದ್ದವೋ…ಅಥವಾ ಕವಿಯಾದ್ದರಿಂದ ಭಾವನೆಗಳು ಉಕ್ಕಿಬರುತ್ತಿದ್ದವೋ…ಹೇಳುವುದು ಕಷ್ಟ-ಬೀಜವೃಕ್ಷ ನ್ಯಾಯದಂತೆ!
ಅವರು ಕವಿಯಾದದ್ದು ಪ್ರಯತ್ನದಿಂದ ಅಲ್ಲ. ಅವರು ಜನ್ಮಜಾತ ಕವಿ. ಅವರ ತಂದೆ ಹಿಂದಿಯಲ್ಲಿ ಉತ್ತಮ ಕವಿ. ಗ್ವಾಲಿಯರ್ ರಾಜಸಂಸ್ಥಾನ ಅವರನ್ನು ಗುರುತಿಸಿ ಸನ್ಮಾನಿಸಿತ್ತು. ಅವರು ಬರೆದ ಎಷ್ಟೋ ಕವಿತೆಗಳು ಆ ಸಂಸ್ಥಾನದ ಜನರ ಬಾಯಲ್ಲಿ ಕಂಠಸ್ಥಗೊಂಡಿದ್ದವು. ಒಂದು ಪದ್ಯವಂತೂ ಪ್ರತಿನಿತ್ಯ ಮಕ್ಕಳು ಶಾಲೆಯಲ್ಲಿ ಹೇಳುವ ಸಾಮೂಹಿಕ ಗೀತೆಯೇ ಆಗಿತ್ತು. ವಾಜಪೇಯಿಯವರ ಅಜ್ಜನೂ ದೊಡ್ಡ ಸಂಸ್ಕೃತ ವಿದ್ವಾಂಸರಾಗಿದ್ದರು. ಹಾಗಾಗಿ ಭಾಷಾಪ್ರೌಢಿಮೆ ಮನೆತನದಲ್ಲೇ ಮನೆಮಾಡಿತ್ತು. ಸಾಹಿತ್ಯ ಪರಂಪರೆಯಲ್ಲೇ ಹರಿದುಬಂದಿತ್ತು. ಚಿಕ್ಕವಯಸ್ಸಿನಲ್ಲೇ ವಾಜಪೇಯಿ ತಂದೆಯೊಡನೆ ಕವಿಗೋಷ್ಠಿಗಳಿಗೂ ಹೋಗುತ್ತಿದ್ದರು. ಅವರೂ ಸಹಜವಾಗೇ ಪ್ರಾಸ ಕೂಡಿಸಲು ಶುರು ಮಾಡಿದರು. ತರಗತಿಯಲ್ಲಿ ನಡೆಯುವ ಸ್ಪರ್ಧೆಯಲ್ಲಿ, ಊರಿನ ಧಾರ್ವಿುಕ ಸಮಾರಂಭಗಳಲ್ಲಿ ಅವರ ಕವನಗಳು ಕೇಳಿಬರಲಾರಂಭಿಸಿದವು. ಈ ಕವಿತೆಗಳು ಸ್ವಾಭಾವಿಕವಾಗಿಯೇ ಅವರ ವ್ಯಕ್ತಿತ್ವವನ್ನೂ ರೂಪಿಸತೊಡಗಿದವು. ರಾಜಕಾರಣಿಯೊಬ್ಬ ಕವಿಯಾಗಿದ್ದರೆ ಅವನೆಂದೂ ಕ್ರೂರಿಯಾಗಲಾರ, ಕಠೋರ ಹೃದಯಿಯಾಗಲಾರ, ಜನರನ್ನು ಹಿಂಸಿಸಲಾರ ಎಂದು ಅವರು ಹೇಳುತ್ತಿದ್ದರು. ಅವರ ಹೃದಯ ಬಡವರ ಪಾಲಿಗೆ, ನೊಂದವರ ಪಾಲಿಗೆ, ದೀನ ದಲಿತರ ಪಾಲಿಗೆ ಸದಾ ಕಾಲ ಆರ್ದ್ರವಾಗಿರುತ್ತಿತ್ತು. ಇದನ್ನೇ ಅವರು ಇತರ ರಾಜಕಾರಣಿಗಳಿಂದಲೂ ಬಯಸುತ್ತಿದ್ದರು.
 ವಾಜಪೇಯಿ ಅವರ ಕವಿತ್ವದ ತುಣುಕುಗಳನ್ನು ಆಗಾಗ ಭಾಷಣಗಳಲ್ಲಿ ಕೇಳುತ್ತಿದ್ದ ಜನಕ್ಕೆ ಅದರ ದಿವ್ಯಾನುಭವ ಉಂಟಾದದ್ದು ಅವರ ಕವನ ಸಂಗ್ರಹ ‘ ಮೇರಿ ಇಕ್ಯಾವನ್ ಕವಿತಾಯೆ’ ಬಿಡುಗಡೆಯಾದ ನಂತರ. ವಾಜಪೇಯಿಯ ಗೆಳೆಯ ಡಾ.ಚಂದ್ರಿಕಾಪ್ರಸಾದ್ ಶರ್ಮಾ ಇದನ್ನು ಸಂಪಾದಿಸಿ ಮುದ್ರಿಸಿದರು. 1995ರ ಜೂನ್​ನಲ್ಲಿ ಪ್ರಧಾನಮಂತ್ರಿ ಪಿ.ವಿ.ನರಸಿಂಹ ರಾವ್ ಈ ಕವನ ಸಂಕಲನ ಬಿಡುಗಡೆ ಮಾಡಿದರು. ಅವರು ವಾಜಪೇಯಿ ಕವಿತ್ವವನ್ನೂ, ಅವರಲ್ಲಿರುವ ಮಾನವೀಯ ದೃಷ್ಟಿಯನ್ನೂ, ವೈಚಾರಿಕ ಹೊಳಪನ್ನೂ ಹಾಡಿ ಹೊಗಳಿದರು.
ವಾಜಪೇಯಿಯವರ ಕವನಗಳಲ್ಲಿ ಸಂಭ್ರಮಕ್ಕಿಂತ ವೇದನೆಯೇ ಹೆಚ್ಚು. ಆಗಸ್ಟ್ 15 ಕುರಿತ ಕವನದಲ್ಲಿ ಸ್ವಾತಂತ್ರ್ಯ್ಕತ ಹೆಚ್ಚಾಗಿ ರಾಷ್ಟ್ರವಿಭಜನೆಯ ದುರಂತವೇ ಪ್ರಧಾನವಾಗಿ ಕಾಣುತ್ತದೆ. ತಾಜಮಹಲಿನ ಬಗ್ಗೆ ಬರೆದ ಕವನದಲ್ಲಿ ಅದರ ವೈಭವಕ್ಕಿಂತ ಹೆಚ್ಚಾಗಿ ಅದನ್ನು ಕಟ್ಟುವಾಗ ನಡೆಯಿತೆನ್ನಲಾದ ದಾರುಣ ಘಟನಾವಳಿಗಳೇ ಬಿಂಬಿತವಾಗಿವೆ. ಹಾಗೆಯೇ ಸ್ವತಃ ತಾವು ಕಂಡ ಈ ದೇಶದ ಪರಿಸ್ಥಿತಿ, ಜನರ ದುಃಖ-ದುಮ್ಮಾನಗಳು, ವೈಚಾರಿಕ ಸಂಘರ್ಷಗಳು ಅವರ ಕವನದ ವಸ್ತುಗಳಾಗಿವೆ. ಕಾಶ್ಮೀರದ ಪರಿಸ್ಥಿತಿ, ತುರ್ತಪರಿಸ್ಥಿತಿಯ ಸಂಘರ್ಷ, ಹಿಂದು ಜೀವನ ಪರಂಪರೆ, ಈ ದೇಶದ ಐತಿಹಾಸಿಕ ಮಹಾಪುರುಷರು, ಪಾರಮಾರ್ಥಿಕ ಸಾಧನೆ ಅವರ ಕಾವ್ಯಗಳಲ್ಲಿ ಮೇಳೈಸಿವೆ. ಅವರ ಬಿಡುವಿಲ್ಲದ ರಾಜಕೀಯ ಚಟುವಟಿಕೆಯ ನಡುವೆಯೂ ಅವರಿಗೆ ಕವನ ಬರೆಯಲು ಹೆಚ್ಚು ಅವಕಾಶ ದೊರೆತದ್ದು ಸೆರೆವಾಸದಲ್ಲಿ. ತುರ್ತು ಪರಿಸ್ಥಿತಿಯ ಸೆರೆವಾಸವನ್ನಂತೂ ಅವರು ಓದುವುದಕ್ಕೆ ಮತ್ತು ಬರೆಯುವುದಕ್ಕೆ ಸಂಪೂರ್ಣ ಬಳಸಿಕೊಂಡರು. ತಮ್ಮ ಸೆರೆವಾಸದ ಸಂದರ್ಭ ಹೀಗೆ ಸಾರ್ಥಕತೆ ಪಡೆದಿದ್ದನ್ನು ಅವರೇ ಹೇಳಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉತ್ತಮ ಕವನ ರಚಿಸುವ ಕವಿಗಳು, ಕವನ ವಾಚನ ಮಾಡುವ ಗೋಷ್ಠಿಗಳು ಕಡಿಮೆಯಾಗಿರುವ ಬಗ್ಗೆ ವಾಜಪೇಯಿಗೆ ತುಂಬಾ ಬೇಸರವಿತ್ತು. ಶ್ರೋತೃಗಳ ಸಂಖ್ಯೆಯ ಅಭಾವವೂ ಇದಕ್ಕೆ ಕಾರಣ ಎನ್ನುತ್ತಿದ್ದರು ಅವರು. ‘ಕೇಳುವವರೇ ಇಲ್ಲದಿದ್ದಾಗ ಕವಿತೆಯನ್ನು ಓದುವವರಿಗೆ ಉತ್ಸಾಹವಾದರೂ ಹೇಗೆ ಬಂದೀತು? ನಾವು ಚಿಕ್ಕವರಿದ್ದಾಗ ಬೇರೆಯವರ ಕವನಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದೆವು. ಆ ಮೂಲಕ ನಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದೆವು. ಈಗ ಆ ವಾತಾವರಣವೇ ಇಲ್ಲ’ ಎಂದು ವಿಷಾದಿಸುತ್ತಿದ್ದರು.
ಗೀತ್ ನಹೀ ಗಾತಾಂ ಹೂಂ
ಬೇನಕಾಬ್ ಚೆಹರೇ ಹೈ
ದಾಗ್ ಬಡೇ ಗೆಹರೇ ಹೈ
ತೂಟತಾ ತಿಲಿಸ್ಮ್ ಆಜ್ ಸಚ್ ಸೇ ಭಯ್ ಖಾತಾ ಹೂಂ
ಗೀತ್ ನಹೀ ಗಾತಾಂ ಹೂಂ
ಲಗೀ ಕುಛ್ ಐಸೀ ನಜರ್
ಬಿಖರಾ ಶಿಶೇ ಸಾ ಶಹರ್
ಅಪನೋ ಕೇ ಮೇಲೇ ಮೇಂ ಮೀತ್ ನಹೀ ಪಾತಾ ಹೂಂ
ಗೀತ್ ನಹೀ ಗಾತಾಂ ಹೂಂ
ಪೀಠ್ ಮೇಂ ಛುರೀ ಸಾ ಚಾಂದ್
ರಾಹೂ ಗಯಾ ರೇಖಾ ಫಾಂದ್
ಮುಕ್ತೀ ಕೇ ಕ್ಷಣೋಂ ಮೇ ಬಾರ್ ಬಾರ್ ಬಂಧ್ ಜಾತಾ ಹೂಂ
ಗೀತ್ ನಹೀ ಗಾತಾಂ ಹೂಂ
ಮೋದಿಗೆ ರಾಜಕೀಯ ಗುರು
 ಪ್ರಧಾನಿ ನರೇಂದ್ರ ಮೋದಿ ಅಟಲ್ ಬಿಹಾರಿ ವಾಜಪೇಯಿಯೊಡನೆ ನಿಕಟ ಬಾಂಧವ್ಯ ಇರಿಸಿಕೊಂಡಿದ್ದರು. ರಾಜಕೀಯ ಸಂಘಟನೆ, ಕಾರ್ಯಕರ್ತರ ಮನವೊಲಿಕೆ ಮೊದಲಾದ ಸೂಕ್ಷ್ಮಗಳನ್ನು ಮೋದಿ ವಾಜಪೇಯಿ ಅವರಿಂದಲೇ ಕಲಿತರು. ಮಾತ್ರವಲ್ಲ, ವಾಜಪೇಯಿಯವರನ್ನು ರಾಜಕೀಯ ಗುರು ಎಂದು ಸಂಬೋಧಿಸಿದರು. 2001ರಲ್ಲಿ ಗುಜರಾತ್​ನಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಳಿಕ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ವಿಫಲರಾಗಿದ್ದಾರೆ ಎಂಬ ವ್ಯಾಪಕ ಆರೋಪಗಳು ಸ್ವಪಕ್ಷೀಯರಿಂದಲೇ ಬಂದವು. ವಾಜಪೇಯಿ ಅವರಿಗೆ ಆಗ ಮುಖ್ಯಮಂತ್ರಿ ಸ್ಥಾನಕ್ಕೆ ಅತ್ಯಂತ ಸೂಕ್ತವೆನಿಸಿದ್ದು ನರೇಂದ್ರ ಮೋದಿ. 2001ರ ಅಕ್ಟೋಬರ್ ಆರಂಭದಲ್ಲಿ ವಾಜಪೇಯಿ ಮೋದಿಯವರನ್ನು ಕರೆದು ತಮ್ಮ ಎಂದಿನ ಹಾಸ್ಯಮಿಶ್ರಿತ ಶೈಲಿಯಲ್ಲಿ ‘‘ಯಂಹಾ ಪಂಜಾಬಿ ಖಾನಾ ಖಾಕೇ ಮೊಟೇ ಹೊತೇ ಜಾರಹೈ ಹೋ, ಅಬ್ ದಿಲ್ಲಿ ಛೋಡೋ, ಗುಜರಾತ್ ಜಾವೋ’ (ಇಲ್ಲಿ ಪಂಜಾಬಿ ಊಟ ಮಾಡುತ್ತ ದಪ್ಪ ಆಗುತ್ತಿದ್ದೀಯಾ. ಈಗ ದಿಲ್ಲಿ ಬಿಡು, ಗುಜರಾತ್​ಗೆ ಹೋಗು) ಎಂದರಂತೆ. ಆಗಲೂ ಮೋದಿಗೆ ತಮ್ಮನ್ನು ಯಾಕೆ ಗುಜರಾತಿಗೆ ಕಳಿಸುತ್ತಿದ್ದಾರೆ ಎಂಬುದು ಅರ್ಥವಾಗಲಿಲ್ಲ. ಸ್ವಲ್ಪಹೊತ್ತಿನ ಬಳಿಕ ವಾಜಪೇಯಿ ಅವರೇ ‘ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ಸ್ವೀಕರಿಸು’ ಎಂದಾಗ ಮೋದಿ ತಬ್ಬಿಬ್ಬಾದರಂತೆ. 2002ರಲ್ಲಿ ಗೋಧ್ರೋತ್ತರ ಗಲಭೆಗಳು ಸಂಭವಿಸಿದಾಗ ‘ರಾಜಧರ್ಮ’ ಪಾಲಿಸುವಂತೆ ಮೋದಿಗೆ ವಾಜಪೇಯಿ ಸೂಚಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....