ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಇಮ್ರಾನ್ ಹೊಸ ಇನಿಂಗ್ಸ್​ಗೆ ಪಂಚ ಸವಾಲು

ಪಾಕಿಸ್ತಾನದ 22ನೇ ಪ್ರಧಾನಮಂತ್ರಿಯಾಗಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆಡಳಿತ ವಿಚಾರದಲ್ಲಿ ಅನನುಭವಿಯಾಗಿರುವ ಇಮ್ರಾನ್​ಗೆ ಹೊಸ ಇನಿಂಗ್ಸ್​ನಲ್ಲಿ ಪಂಚ ಸವಾಲುಗಳು ಎದುರಾಗಿವೆ. ಅವುಗಳನ್ನು ಎದುರಿಸುತ್ತ ದೇಶವನ್ನು ಯಾವ ರೀತಿ ಮುನ್ನಡೆಸುವರೆಂಬ ಕುತೂಹಲವಿದೆ.
ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ರಾಜಕಾರಣದ ಹೊಸ ಇನಿಂಗ್ಸ್ ಆರಂಭಿಸಿರುವ ಪಾಕ್ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಇಮ್ರಾನ್ ಖಾನ್​ಗೆ ಎರಡು ದಶಕದ ರಾಜಕೀಯ ಅನುಭವವಿದೆ. ಆದರೆ, ಅವರ ಪಕ್ಷ ಆಡಳಿತ ಚುಕ್ಕಾಣಿ ಹಿಡಿದಿಲ್ಲವಾದ್ದರಿಂದ ಆಡಳಿತಾನುಭವ ಕಡಿಮೆ. ಈಗ ಅವರ ಎದುರು ಸವಾಲುಗಳ ಸರಮಾಲೆಯೇ ಇದೆ. ಅವುಗಳ ಪೈಕಿ ಪ್ರಮುಖ ಐದು ಸವಾಲುಗಳು- ವಿಶೇಷವಾಗಿ ಆರ್ಥಿಕತೆ, ಭಯೋತ್ಪಾದನೆ, ಜನಸಂಖ್ಯೆ ಹೆಚ್ಚಳ, ಜಲಕ್ಷಾಮ, ನಾಗರಿಕ-ಸೇನಾ ಸಂಬಂಧ- ಅವರನ್ನು ಹೆಚ್ಚು ಸಂಕಷ್ಟಕ್ಕೊಡ್ಡುವ ಸಾಧ್ಯತೆ ಇದೆ. ಇವುಗಳನ್ನೆಲ್ಲ ಮೀರಿ ಪಾಕ್​ನ ಭವಿಷ್ಯವನ್ನು ಉಜ್ವಲಗೊಳಿಸುವ ಗುರುತರ ಹೊಣೆಗಾರಿಕೆಯನ್ನು ಕ್ಯಾಪ್ಟನ್ ನಿಭಾಯಿಸಿಯಾರೆ?
1 ಕುಸಿಯುತ್ತಿರುವ ಆರ್ಥಿಕತೆ: ಸಾಲಬಾಧೆ ಯಿಂದ ಬಸವಳಿದಿರುವ ಪಾಕ್​ನ ಹಣಕಾಸು ಪರಿಸ್ಥಿತಿ ಶೋಚನೀಯವಾಗಿದೆ. ಮುಂದಿನ ಕೆಲ ತಿಂಗಳಲ್ಲಿ ಖಜಾನೆ ಬರಿದಾಗುವ ಆತಂಕ ಇದೆ. ವಿದೇಶಿ ವಿನಿಮಯ ಸಂಪೂರ್ಣ ನೆಲಕಚ್ಚಿದ್ದು, ಅಮೆರಿಕದ ಡಾಲರ್ ಎದುರು ಪಾಕ್ ಕರೆನ್ಸಿ ರೂಪಾಯಿ(123.25 ರೂ.) ಸೋತು ಸೊರಗಿದೆ. 2013ರ ನಂತರ ಮತ್ತೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಂದೆ ಪಾಕ್ ಮಂಡಿಯೂರುವ ಸ್ಥಿತಿ ಬಂದೊದಗಿದೆ. ಆದರೆ, ಐಎಂಎಫ್ ದೇಣಿಗೆ ನೀಡುವ ರಾಷ್ಟ್ರಗಳಲ್ಲಿ ಅಮೆರಿಕದ್ದು, ಸಿಂಹಪಾಲು. ಆದರೆ, ಉಗ್ರರ ನಿಗ್ರಹದಲ್ಲಿ ಪಾಕ್ ಕಳ್ಳಾಟ ಆಡುತ್ತಿದೆ ಎಂದು ಮುನಿಸಿಕೊಂಡಿರುವ ಅಮೆರಿಕ, ಈಗೇನಾದರೂ ಆಕ್ಷೇಪ ವ್ಯಕ್ತಪಡಿಸಿದರೆ ಪಾಕ್​ಗೆ ನೆರವು ದೊರೆಯುವ ಸಾಧ್ಯತೆ ಕ್ಷೀಣಿಸುತ್ತದೆ. ಹಣಕಾಸು ಖಾತೆಯನ್ನು ತಮ್ಮ ಬಳಿಯೆ ಇರಿಸಿಕೊಳ್ಳಲು ಇಮ್ರಾನ್ ಬಯಸಿದ್ದಾರೆಂದು ಹೇಳಲಾಗುತ್ತಿದ್ದು, ಇದು ಅವರಿಗೆ ಮುಳ್ಳಿನ ಹಾಸಿಗೆ ಆಗುವ ಸಾಧ್ಯತೆ ಇದೆ.
2 ಉಗ್ರರ ಬಗ್ಗೆ ಮೃದು ಧೋರಣೆ: ಮೂಲಭೂತವಾದಿಗಳನ್ನು ಮಟ್ಟಹಾಕಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಅಂತಾರಾಷ್ಟ್ರೀಯ ಸಮುದಾಯ ವಿಶೇಷವಾಗಿ ಅಮೆರಿಕಕ್ಕೆ ನಂಬಿಕೆ ಬರುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ನಡೆದ ದಾಳಿಯಲ್ಲಿ 200ಕ್ಕೂ ಹೆಚ್ಚು ಜನರು ಪಾಕ್​ನಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ನೂತನ ಪ್ರಧಾನಿಗೆ ‘ತಾಲಿಬಾನ್ ಖಾನ್’ ಎಂಬ ಉಪಾಧಿಯೂ ಇರುವುದರಿಂದ ಉಗ್ರರ ಸಂಘಟನೆಗಳ ಜತೆಗೆ ಮಾತುಕತೆ ನಡೆಸಿ ಉಗ್ರವಾದವನ್ನು ದೇಶದಿಂದ ದೂರ ಮಾಡಿಯಾರೆ ಎಂಬ ಅನುಮಾನ ಇದೆ. ಮೃದು ಧೋರಣೆ ಹೊಂದಿರುವ ಖಾನ್​ರ ದೌರ್ಬಲ್ಯ ಬಳಸಿಕೊಂಡು ಉಗ್ರರು ಮತ್ತಷ್ಟು ಪ್ರಬಲರಾಗುವ ಅಪಾಯವೂ ಇದೆ. ಜಾಗತಿಕವಾಗಿ ನೀಡುವ ಹಣಕಾಸು ನೆರವು ಉದ್ದೇಶಕ್ಕೆ ಬಳಕೆಯಾಗುತ್ತಿದೆಯೆ ಎಂದು ನಿಗಾ ಇರಿಸುವ ಪ್ಯಾರಿಸ್ ಮೂಲದ ಹಣಕಾಸು ಕ್ರಿಯಾ ಪಡೆ (ಎಫ್​ಎಟಿಎಫ್) ಪಾಕಿಸ್ತಾನವನ್ನು ಕಳೆದ ಜೂನ್​ನಲ್ಲಿ ಬೂದುಪಟ್ಟಿಗೆ (ಗ್ರೇಲಿಸ್ಟ್) ಸೇರಿಸಿದೆ. ಉಗ್ರರಿಗೆ ಹಣಕಾಸು ದೊರೆಯದಂತೆ ಮತ್ತು ಅಕ್ರಮ ಹಣಕಾಸು ವ್ಯವಹಾರ ತಡೆಗಟ್ಟುವ ಕಾನೂನು ಬಿಗಿ ಮಾಡಿ ಎಂದು ಸೂಚಿಸಿರುವ ಎಫ್​ಎಟಿಎಫ್, 10 ಅಂಶಗಳ ಕ್ರಿಯಾಯೋಜನೆ ಯನ್ನು ಕೊಟ್ಟಿದೆ. ಇದನ್ನು ಸೆಪ್ಟೆಂಬರ್ ಒಳಗೆ ಜಾರಿಗೆ ತರದಿದ್ದರೆ ನಿರ್ಬಂಧಕ್ಕೆ ಸಿದ್ಧರಾಗಿ ಎಂದು ಖಡಕ್ ಎಚ್ಚರಿಕೆಯನ್ನೂ ನೀಡಿದೆ. ಇನ್ನು 40 ದಿನಗಳಲ್ಲಿ ಈ ಷರತ್ತನ್ನು ಪೂರೈಸುವ ಇಕ್ಕಟ್ಟು ಇಮ್ರಾನ್​ರ ಮೇಲಿದೆ.
3 ಜಲಕ್ಷಾಮ: ಪಾಕಿಸ್ತಾನದಲ್ಲಿ ಕುಡಿಯುವ ನೀರಿನ ಅಭಾವ ತೀವ್ರ ತರಹದಲ್ಲಿದೆ. ನೀರನ್ನು ಹಿತಮಿತವಾಗಿ ಬಳಸಿ, ಜಲಮೂಲಗಳ ಸಂರಕ್ಷಣೆ ಮಾಡದಿದ್ದರೆ 2025ರ ಹೊತ್ತಿಗೆ ಪರಿಸ್ಥಿತಿ ಬಿಗಾಡಾಯಿಸಲಿದೆ. ಸೊಮಾಲಿಯಾಗಿಂತ ದೈನೇಸಿ ಸ್ಥಿತಿಯನ್ನು ಪಾಕ್ ಎದುರಿಸಬೇಕಾಗುತ್ತದೆ ಎಂದು ವಿಶ್ವಸಂಸ್ಥೆ ಪಾಕ್​ಗೆ ಎಚ್ಚರಿಕೆ ನೀಡಿದೆ. ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ಹೊಂದಿರುವ ಇಮ್ರಾನ್, ನೀರಿನ ಸಂರಕ್ಷಣೆ ಮತ್ತು ಜಲ ಜಾಗೃತಿ ಕಾರ್ಯಕ್ರಮ ಗಳನ್ನು ಯದ್ಧೋಪಾದಿಯಲ್ಲಿ ಹಮ್ಮಿಕೊಳ್ಳಬೇಕಿದೆ.
4 ಏರುತ್ತಿರುವ ಜನಸಂಖ್ಯೆ: ಏಷ್ಯಾದಲ್ಲಿ ಅತ್ಯಂತ ಹೆಚ್ಚಿನ ಜನನ ಪ್ರಮಾಣ ಇರುವುದು ಪಾಕಿಸ್ತಾನದಲ್ಲಿ. ದೇಶದ ಜನಸಂಖ್ಯೆ 20.70 ಕೋಟಿ ದಾಟಿದೆ. ಸರಾಸರಿ ಪ್ರತಿ ಮಹಿಳೆಗೆ ಮೂರು ಮಕ್ಕಳು ಇದ್ದಾರೆ. ಜನಸಂಖ್ಯಾ ಸ್ಪೋಟದಿಂದ ಆರ್ಥಿಕ, ಸಾಮಾಜಿಕ ಸಮಸ್ಯೆಗಳು ಉಲ್ಬಣ ಆಗುತ್ತಿದೆ. ಇದರ ನಿಯಂತ್ರಣ ಹಾಕಲು ಪಿಟಿಐ ಸರ್ಕಾರ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳದೆ ಗತ್ಯಂತರವಿಲ್ಲ.
5 ಸೇನೆ-ನಾಗರಿಕರ ಸಂಬಂಧ ಸುಧಾರಣೆ: ಏಳು ದಶಕಗಳಲ್ಲಿ ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತದ ಅವಧಿಯೇ ಹೆಚ್ಚು. ಜನರನ್ನು ಸೇನೆಯ ಭೀತಿಯಿಂದ ಇಮ್ರಾನ್ ಹೊರತರಬೇಕಿದೆ. ಸಂಸತ್​ನಲ್ಲಿ ಅವರೇ ಘೋಷಿಸಿದಂತೆ ‘ನಾನು ಸ್ವಬಲದಿಂದ ಇಲ್ಲಿ ಬಂದು ನಿಂತಿದ್ದೇನೆ’ ಎಂಬುದನ್ನು ಅಕ್ಷರಶಃ ನಡೆಸಿಕೊಡಬೇಕಿದೆ.
ಸಂಬಂಧ ಸುಧಾರಣೆಗೆ ಹಲವು ಅಡ್ಡಿ
ಉಗ್ರರ ಬಗ್ಗೆ ಮೃದು ಧೋರಣೆ ತಳೆದಿರುವ ಇಮ್ರಾನ್ ಖಾನ್ ಈಗ ಪ್ರಧಾನಿ ಆದ ಕಾರಣ ಭಾರತದ ಜತೆಗಿನ ಸಂಬಂಧ ಸುಧಾರಣೆಗೆ ಹಲವು ಅಡ್ಡಿ ಆತಂಕಗಳಿವೆ. ಈಗಾಗಲೇ ನೆಲಕಚ್ಚಿರುವ ದ್ವಿಪಕ್ಷೀಯ ಸಂಬಂಧ ಸುಧಾರಣೆ ಆಗಬೇಕಾದಲ್ಲಿ, ಗಡಿ ಯಲ್ಲಿ ಗುಂಡಿನ ಮೊರೆತ ಕಡಿಮೆ ಆಗಬೇಕು. ಆದರೆ, ಛಾಯಾ ಸಮರ ನಡೆಸುತ್ತಿರುವ ಪಾಕ್ ಸೈನ್ಯದ ಕಪಿಮುಷ್ಟಿಯಲ್ಲಿ ಪಾಕಿಸ್ತಾನದ ಆಡಳಿತದ ಸೂತ್ರ ಇದೆ. ಇಂತಹ ಸನ್ನಿವೇಶದಲ್ಲಿ ಇಮ್ರಾನ್ ಖಾನ್ ಭಾರತದ ಜತೆಗೆ ಸಂಬಂಧ ಸುಧಾರಿಸಿಕೊಂಡು, ಶಾಂತಿ ಸ್ಥಾಪಿಸಬೇಕಿದೆ. ಇದಕ್ಕೆ ಇಮ್ರಾನ್ ಮುಂದಡಿ ಇಟ್ಟರೂ, ಅವರ ಬೆನ್ನಿಗಿರುವ ಸೇನೆ ಇದಕ್ಕೆ ಮುಕ್ತ ಅವಕಾಶ ನೀಡುವುದೆ ಎಂಬುದು ಪ್ರಶ್ನೆ.
ತಪ್ಪು ಉಚ್ಚಾರ
ಪ್ರಮಾಣ ವಚನ ಸ್ವೀಕರಿಸುವಾಗ ಇಮ್ರಾನ್ ಖಾನ್ ಕೆಲವು ಶಬ್ದಗಳನ್ನು ತಡವರಿಸಿ, ಮತ್ತೆ ಕೆಲವನ್ನು ತಪ್ಪಾಗಿ ಉಚ್ಚರಿಸಿದರು. ಪ್ರತಿಜ್ಞಾ ವಿಧಿ ಬೋಧಿಸುವಾಗ ಅಧ್ಯಕ್ಷ ಹುಸೇನ್,  ‘ರೋಜ್-ಎ-ಖಿಯಾಮತ್’ (ನ್ಯಾಯನಿರ್ಣಾಯಕ ದಿನ) ಎಂದು ಹೇಳಿದರು. ಇದನ್ನು ತಪ್ಪಾಗಿ ಗ್ರಹಿಸಿದ ಖಾನ್, ‘ರೋಜ್-ಎ-ಖಿಯಯಾದ್ತ್’ (ನಾಯಕತ್ವದ ದಿನ) ಎಂದು ತಪ್ಪಾಗಿ ಹೇಳಿದರು. ಆಗ ಅಧ್ಯಕ್ಷರು ಮತ್ತೊಮ್ಮೆ ಅದೇ ಪದವನ್ನು ಹೇಳಿದರು. ತಪ್ಪಾಗಿದ್ದನ್ನು ಅರಿತ ಖಾನ್ ಮುಗುಳ್ನಕ್ಕು, ಕ್ಷಮೆ ಕೋರಿ, ಸರಿಯಾಗಿ ಉಚ್ಚರಿಸಿದರು.
ಇಮ್ರಾನ್ ಆನಂದಬಾಷ್ಪ
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಮತ್ತು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಪಾಕ್ ಅಧ್ಯಕ್ಷರ ನಿವಾಸ ‘ಐವನ್-ಎ-ಸದ್›’ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷ ಮಮ್ನೂನ್ ಹುಸೇನ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ನಸುಬೂದು ಮಿಶ್ರಿತ ಕಪು್ಪಬಣ್ಣದ ಶೆರ್ವಾನಿ ಧರಿಸಿದ್ದ 65 ವರ್ಷದ ಇಮ್ರಾನ್, ಪ್ರಮಾಣ ವಚನ ಸ್ವೀಕರಿಸುವಾಗ ಆನಂದಬಾಷ್ಪ ಸುರಿಸಿದರು.
ಭಾರತದಿಂದ ಪಂಜಾಬ್ ಸಚಿವ ಸಿಧು ಭಾಗಿ
ಇಮ್ರಾನ್ ಪ್ರಮಾಣ ವಚನ ಸಮಾರಂಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ, ಪಂಜಾಬ್​ನ ಸಚಿವ ನವಜೋತ್ ಸಿಂಗ್ ಸಿಧು ಮೊದಲ ಸಾಲಿನಲ್ಲೆ ಕುಳಿತಿದ್ದರು. ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ, ಸಿಧು ಅವರನ್ನು ಕಂಡೊಡನೆಯೆ ನಸುನಗುತ್ತ ಅವರ ಬಳಿ ಹೋಗಿ ಆಲಂಗಿಸಿ ಕೆಲ ನಿಮಿಷ ಮಾತನಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಧು, ‘ಪ್ರೀತಿಯ ಸಂದೇಶವನ್ನು ಹೊತ್ತು, ಭಾರತದ ರಾಯಭಾರಿಯಾಗಿ ಇಲ್ಲಿಗೆ ಬಂದಿದ್ದೇನೆ. ಆದರೆ, ರಾಜಕಾರಣಿಯಾಗಿ ಅಲ್ಲ. ಇಮ್ರಾನ್​ರ ಗೆಳೆಯನಾಗಿ ಆಗಮಿಸಿದ್ದೇನೆ. ಖಾನ್ ಸಾಹೇಬರಿಗೆ ಕಾಶ್ಮೀರಿ ಶಾಲನ್ನು ಉಡುಗೊರೆಯಾಗಿ ತಂದಿದ್ದೇನೆ. ಕ್ರೀಡಾಪಟುಗಳು, ಕಲಾವಿದರಿಂದ ಎರಡೂ ದೇಶಗಳ ಜನರನ್ನು ಬೆಸೆಯಲು ಸಾಧ್ಯ’ ಎಂದ ಅವರು ‘ಹಿಂದೂಸ್ತಾನ್ ಜೀವೇ, ಪಾಕಿಸ್ತಾನ್ ಜೀವೇ’ ಎಂಬ ಘೋಷಣೆ ಮಾಡಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...