ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ನಿಲ್ಲದ ಗುಟ್ಖಾ ಘಾಟು,

ಜೋಡಿ ಪ್ಯಾಕೆಟ್​ನಲ್ಲಿ ಕಣ್ಕಟ್, ನಿತ್ಯ 100 ಕೋಟಿ ರೂ. ವಹಿವಾಟು >>
ತಮಿಳುನಾಡಿನಲ್ಲಿ ಬೆಳಕಿಗೆ ಬಂದಿರುವ ಬಹುಕೋಟಿ ಗುಟ್ಖಾ ಹಗರಣ ತಲ್ಲಣಗೊಳಿಸಿದೆ. ತಮಿಳುನಾಡು ಸರ್ಕಾರ ರಾಜ್ಯದಲ್ಲಿ ತಂಬಾಕು, ಗುಟ್ಖಾ ಪದಾರ್ಥಗಳ ಮೇಲೆ ನಿಷೇಧ ಹೇರಿದ ಹೊರತಾಗಿಯೂ ಅವುಗಳ ಮಾರಾಟ ಎಗ್ಗಿಲ್ಲದೆ ಮುಂದುವರಿದಿತ್ತು. ಅಲ್ಲಿನ ಆರೋಗ್ಯ ಸಚಿವರು, ಪೊಲೀಸ್ ಅಧಿಕಾರಿಗಳೇ ವ್ಯಾಪಾರಿಗಳಿಂದ ಕಿಕ್​ಬ್ಯಾಕ್ ಪಡೆದು ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಚೆನ್ನೈ, ಮುಂಬೈ, ಬೆಂಗಳೂರು ಸೇರಿ 37 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಇತ್ತ ಕರ್ನಾಟಕದಲ್ಲೂ ಗುಟ್ಖಾ ಘಾಟಿಗೆ ತಡೆ ಬಿದ್ದಿಲ್ಲ. ರಾಜ್ಯದ ಸ್ಥಿತಿಗತಿ ಕುರಿತು ಈ ವಿಶೇಷ ವರದಿ ಸಿದ್ಧಪಡಿಸಲಾಗಿದೆ.
| ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಕ್ಯಾನ್ಸರ್ ಸೇರಿ 80ಕ್ಕೂ ಹೆಚ್ಚು ರೋಗಗಳನ್ನು ಬಳುವಳಿಯಾಗಿ ನೀಡುವ ತಂಬಾಕುಸಹಿತ ಗುಟ್ಖಾಗೆ ಕೇಂದ್ರ ಸರ್ಕಾರ ನಿಷೇಧ ಹೇರಿದ್ದರೂ ತೆರೆಮರೆಯಲ್ಲಿನ ಅದರ ಘಾಟು ಮಾತ್ರ ನಿಂತಿಲ್ಲ. ನೇರವಾಗಿ ಗುಟ್ಖಾ ಮಾರಾಟ ನಿಷೇಧಗೊಂಡ ಬಳಿಕ ಹೊಸ ದಾರಿ ಕಂಡುಕೊಂಡಿರುವ ವ್ಯಾಪಾರಸ್ಥರು ತಂಬಾಕು ಹಾಗೂ ಪಾನ್ ಮಸಾಲಾವನ್ನು ಪ್ರತ್ಯೇಕ ಪ್ಯಾಕೆಟ್​ಗಳಲ್ಲಿ ಮಾರಾಟಮಾಡುವ ಮೂಲಕ ಕಾನೂನಿಗೇ ಸೆಡ್ಡು ಹೊಡೆದಿದ್ದಾರೆ. ಈ ವಿಚಾರ ಅಧಿಕಾರಿಗಳಿಗೆ ಗೊತ್ತಿದ್ದರೂ ಕಾನೂನು ನಿಯಮದ ನೆಪ ಹೇಳಿ ಸುಮ್ಮನಿದ್ದಾರೆ.
ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಎಂಬ ಕಾರಣಕ್ಕಾಗಿ ದೇಶಾದ್ಯಂತ ಗುಟ್ಖಾ ತಯಾರಿಕೆ ಮತ್ತು ಮಾರಾಟ ಬಂದ್ ಮಾಡಲಾಗಿದೆ. ಆದರೆ ತಂಬಾಕು ಉತ್ಪನ್ನಗಳ ತಯಾರಿಕೆಗೆ ನಿಷೇಧವಿಲ್ಲ. ತಂಬಾಕು ಮಾರಾಟದ ಮೇಲೆ ಕೆಲ ಮಾರ್ಗಸೂಚಿ ರೂಪಿಸಿ ಅವಕಾಶ ಕಲ್ಪಿಸಿರುವುದು ಗುಟ್ಖಾ ತಯಾರಿಕಾ ಕಂಪನಿಗಳಿಗೆ ವರದಾನವಾಗಿದೆ. ಕಾನೂನಿನ ಕಣ್ಣಿಗೆ ಮಣ್ಣೆರಚಿ ತಂಬಾಕು ಮಾರಾಟದ ಸೋಗಿನಲ್ಲಿ ಗುಟ್ಖಾ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.
ಶಿಕ್ಷೆ ಏನು?
ಅಕ್ರಮವಾಗಿ ಗುಟ್ಖಾ ತಯಾರಿಸುವ ವರಿಗೆ 10 ಲಕ್ಷ ರೂ. ದಂಡ ಮತ್ತು 2 ವರ್ಷ ಸಜೆ ವಿಧಿಸಬಹುದು. ಅದೇ ರೀತಿ ಅಂಗಡಿಗಳಲ್ಲಿ ಚಿಲ್ಲರೆ ರೂಪದಲ್ಲಿ ಮಾರಾಟ ಮಾಡಿದಲ್ಲಿ 2 ಸಾವಿರ ರೂ. ದಂಡ ಹಾಗೂ 6 ತಿಂಗಳ ಸಜೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಪ್ಯಾಕ್ ಮಿಕ್ಸ್ ಮಸಾಲ
ಅಡಕೆ, ಸುಣ್ಣ, ಮಸಾಲ, ತಂಬಾಕು ಪದಾರ್ಥ ಸೇರಿದರೆ ಗುಟ್ಖಾ ಆಗುತ್ತದೆ. ಆದರೆ ತಂಬಾಕು ಮಾರಾಟಕ್ಕೆ ನಿರ್ಬಂಧವಿಲ್ಲವಾದ್ದರಿಂದ ಗುಟ್ಖಾ ಕಂಪನಿಗಳು ಒಂದು ಪ್ಯಾಕ್​ನಲ್ಲಿ ಮಸಾಲ, ಅಡಿಕೆ, ಸುಣ್ಣ ಮತ್ತೊಂದು ಪ್ಯಾಕ್​ನಲ್ಲಿ ತಂಬಾಕು ತುಂಬಿ ಮಾರುಕಟ್ಟೆಗೆ ಬಿಡುತ್ತಿವೆ. ಗ್ರಾಹಕರು ಈ ಎರಡೂ ಪ್ಯಾಕ್​ಗಳನ್ನು ಪ್ರತ್ಯೇಕವಾಗಿ ಖರೀದಿಸಿ ಸೇರಿಸಿ ಗುಟ್ಖಾ ಮಾಡಿಕೊಂಡು ಸೇವಿಸುತ್ತಾರೆ.
ಐದು ತಿಂಗಳಲ್ಲಿ 415 ಪ್ರಕರಣ!
ರಾಜಧಾನಿ ಬೆಂಗಳೂರಿನಲ್ಲೇ ಕಳೆದ 5 ತಿಂಗಳಲ್ಲಿ 415 ಪ್ರಕರಣಗಳು ದಾಖಲಾಗಿದ್ದು, 12 ಸಾವಿರ ರೂ. ದಂಡ ವಿಧಿಸಲಾಗಿದೆ. ಅಕ್ರಮ ಗುಟ್ಖಾ ಮಾರಾಟದ ಬಗ್ಗೆ ಜನರು ದೂರು ನೀಡಿದರೆ ಕೂಡಲೇ ಅಂತಹ ಅಂಗಡಿಗಳ ಮೇಲೆ ದಾಳಿ ನಡೆಸಿ ಮಾಲೀಕರಿಗೆ ದಂಡ ವಿಧಿಸುವುದಾಗಿ ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ತಂಬಾಕು, ಗುಟ್ಖಾದಿಂದ ಶೇ.80 ಕ್ಯಾನ್ಸರ್ ರೋಗಗಳು ಬರುತ್ತವೆ. ಈ ಚಟ ಯುವಪೀಳಿಗೆಯಲ್ಲಿ ಹೆಚ್ಚಾಗಿದ್ದು, ಇವುಗಳಿಂದ ದೂರವಿದ್ದರೆ ಕ್ಯಾನ್ಸರ್ ತಡೆಗಟ್ಟಲು ಸಾಧ್ಯವಾಗುತ್ತದೆ.
| ಡಾ.ಸಿ.ರಾಮಚಂದ್ರ, ನಿರ್ದೇಶಕ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
ಮಾರಕ ಕ್ಯಾನ್ಸರ್​ಗೆ ರಹದಾರಿ
ತಂಬಾಕು, ಗುಟ್ಖಾ ಸೇವನೆಯಿಂದ ಗಂಟಲು, ಬಾಯಿ, ಅನ್ನನಾಳ, ಶ್ವಾಸಕೋಶ, ದವಡೆ ಕ್ಯಾನ್ಸರ್ ಬರುತ್ತದೆ. ತಂಬಾಕು, ಗುಟ್ಖಾ ಜಗಿಯುವುದರಿಂದ ನಿಕೋಟಿನ್ ಇನ್ನಿತರ 4 ಸಾವಿರ ವಿಷಕಾರಿ ಪದಾರ್ಥಗಳು ಶ್ವಾಸನಾಳದ ಒಳಸೇರುತ್ತವೆ. ಇದರಿಂದ ರಕ್ತದೊತ್ತಡ ಹೆಚ್ಚುತ್ತದೆ, ಹೃದಯದ ಬಡಿತ ತೀವ್ರಗೊಳ್ಳುತ್ತದೆ. ಹೆಣ್ಣು ಮಕ್ಕಳಲ್ಲಿ ಗರ್ಭಾಶಯಕ್ಕೆ ಹಾನಿ ಉಂಟಾಗುತ್ತದೆ. ಮಿದುಳು, ಮೂಗು ಮತ್ತು ಕಣ್ಣಿನ ಮೇಲೂ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಪ್ರತ್ಯೇಕ ಕ್ಯಾನ್ಸರ್ ಘಟಕ ಸ್ಥಾಪನೆ
ತಂಬಾಕು, ಗುಟ್ಖಾ ಸೇವನೆಯಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆಗಳ ಸ್ಥಾಪನೆ ಜತೆಯಲ್ಲೇ ರಾಜ್ಯಾದ್ಯಂತ ಇರುವ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಕ್ಯಾನ್ಸರ್ ಚಿಕಿತ್ಸೆಗಾಗಿಯೇ ಪ್ರತ್ಯೇಕ ವಿಭಾಗ ತೆರೆಯಲಾಗುತ್ತಿದೆ.
ಗುಡಿ ಕೈಗಾರಿಕೆ
ರಾಜ್ಯದಲ್ಲಿ ದಿನಕ್ಕೆ ಅಂದಾಜು 100 ಕೋಟಿ ರೂ. ಗುಟ್ಖಾ ವಹಿವಾಟು ನಡೆಯುತ್ತಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬೆಂಗಳೂರು, ಮಂಗಳೂರು, ತುಮಕೂರು, ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ಗುಟ್ಖಾ ತಯಾರಿಕೆ, ಮಾರಾಟ ಹಾಗೂ ಸೇವನೆ ನಡೆಯುತ್ತದೆ. ಗುಟ್ಖಾ ತಯಾರಿಕೆ ಬಹುತೇಕ ಗುಡಿ ಕೈಗಾರಿಕೆಯಲ್ಲಿ ನಡೆಯುವುದರಿಂದ ಪತ್ತೆಹಚ್ಚಲು ಕಷ್ಟವಾಗುತ್ತಿದೆ. ದೊಡ್ಡ ಕಂಪನಿಗಳ ಉದ್ಯಮಿಗಳು ಕಾನೂನಿನ ಸಣ್ಣ ಲೋಪ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ತಂಬಾಕು ನಿಷೇಧ ಏಕಿಲ್ಲ?
ತಂಬಾಕು ಉತ್ಪನ್ನಗಳ ಕಂಪನಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಸುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತಂಬಾಕು ನಿಷೇಧಿಸುವ ಬಗ್ಗೆ ಚರ್ಚೆ ಬಂದಾಗ ಅಮೆರಿಕ ಹೊರತುಪಡಿಸಿ ಭಾರತ ಸೇರಿ ಉಳಿದೆಲ್ಲ ದೇಶಗಳು ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಒಪ್ಪಿ ಸಹಿ ಮಾಡಿವೆ. ಇದೀಗ ಏಕಾಏಕಿ ನಿರ್ಬಂಧಿಸಲು ಸಾಧ್ಯವಿಲ್ಲ. ಅಲ್ಲದೆ, ಎಲ್​ಐಸಿ ಸೇರಿ ಸಾರ್ವಜನಿಕ ಉದ್ಯಮಗಳ ಶೇ.25 ಬಂಡವಾಳ ತಂಬಾಕು ಉತ್ಪನ್ನಗಳ ಮೇಲೆ ಹೂಡಿಕೆಯಾಗಿದೆ. ಹಾಗಾಗಿ ತಂಬಾಕು ಉತ್ಪನ್ನ ನಿಷೇಧಿಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮವಾಗುತ್ತದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ನಾಮ್​ಕೇ ವಾಸ್ತೆಗೆ ಸಮಿತಿ
ಗುಟ್ಖಾ ಉತ್ಪಾದನೆ ಮತ್ತು ಮಾರಾಟಕ್ಕೆ ನಿಯಂತ್ರಣ ಹಾಕಲು ಆಯಾ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅನುಷ್ಠಾನ,  ಸಮಿತಿ ರಚಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ, ಎಸ್​ಪಿ, ಪಾಲಿಕೆ-ನಗರಸಭೆ ಆಯುಕ್ತರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಆರ್​ಟಿಒ, ಆದಾಯ ತೆರಿಗೆ ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ವಾರ್ತಾ ಇಲಾಖೆ, ಕೃಷಿ ಮಾರಾಟ ಇಲಾಖೆಗಳ ಉಪ ನಿರ್ದೇಶಕರು ಸಮಿತಿಯಲ್ಲಿರುತ್ತಾರೆ. ಆದರೆ, ಅಕ್ರಮ ಗುಟ್ಕಾ ದಂಧೆಯನ್ನು ಮಟ್ಟ ಹಾಕಲು ಸಾಧ್ಯವಾಗಿಲ್ಲ.
ಬಿಗಿ ಇಲ್ಲದ ನಿಯಮ
ಉತ್ಪನ್ನಗಳ ಜಾಹೀರಾತು ನೀಡಬಾರದು, ಪ್ಯಾಕ್ ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂದು (ಶೇ.85) ಮುದ್ರಿಸಬೇಕು, 18 ವರ್ಷ ಒಳಗಿನವರಿಗೆ ಮಾರಾಟ ಹಾಗೂ ಶಾಲಾ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ, ಸೇವನೆಯನ್ನು ನಿರ್ಬಂಧಿಸಿದೆ. ಈ ಕಾನೂನು ಅನುಷ್ಠಾನಕ್ಕೆ ಪೊಲೀಸರು ಮತ್ತು ವಿಚಕ್ಷಣ ದಳ ಅಧಿಕಾರಿಗಳು ಗಮನ ಹರಿಸಿದ್ದಾರೆ.
ತಂಬಾಕು ಆದಾಯ ತರಬಹುದು. ಆದರೆ, ಅದು ಜೀವ ತೆಗೆಯುತ್ತದೆ. ತಂಬಾಕು ಬೆಳೆಯುವ ರೈತರನ್ನು ಅನ್ನದಾತರು ಎಂಬ ಪಟ್ಟಿಯಿಂದ ಬೇರ್ಪಡಿಸಬೇಕು.
|ಎಸ್.ಎ.ಚಂದರ್, ಸಂಚಾಲಕ, ತಂಬಾಕು ರೈತರ ಕರ್ನಾಟಕ ಒಕ್ಕೂಟ
ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸಂಪೂರ್ಣ ಗುಟ್ಖಾ ನಿಷೇಧಿಸುವ ಕೆಲಸ ನಡೆಯುತ್ತಿದೆ. ಕೆಲ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ನಡೆಯುತ್ತಿದ್ದು, ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
|ಡಾ.ಚಂದ್ರ ಕಿರಣ್, ಜಿಲ್ಲಾ ಸಲಹೆಗಾರ, ಬೆಂಗಳೂರು ನಗರ ಜಿಲ್ಲಾ ತಂಬಾಕು ನಿಯಂತ್ರಣ ಕೋಶ
ಗುಟ್ಖಾ ಸೇವಿಸುವ ಶೇ. 60 ಜನರಿಗೆ ಬಾಯಿ ಕ್ಯಾನ್ಸರ್ ಬರುವುದು ಖಚಿತ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅರಿವಿದ್ದರೂ ಇದನ್ನು ಸೇವಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸವಾಗಬೇಕು.
| ಡಾ. ಪ್ರಸಾದ ಗುಣಾರಿ, ತಜ್ಞವೈದ್ಯರು, ಎಚ್​ಸಿಜಿ ಕ್ಯಾನ್ಸರ್ ಸೆಂಟರ್, ಹುಬ್ಬಳ್ಳಿ
ಉ. ಕರ್ನಾಟಕದಲ್ಲೇ ಹೆಚ್ಚು
ರಾಜ್ಯದ ಮುಕ್ಕಾಲು ಭಾಗ ಗುಟ್ಖಾ ಮಾರಾಟವಾಗುವುದು ಉತ್ತರ ಕರ್ನಾಟಕದಲ್ಲಿಯೇ! ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲೇ ನಿತ್ಯ 22 ರಿಂದ 25 ಲಕ್ಷ ರೂ.ಗಳವರೆಗೆ ಗುಟ್ಕಾ ವ್ಯವಹಾರ ನಡೆಯುತ್ತಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....