ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ರೂಪಾಯಿ ಅಪಮೌಲ್ಯಕ್ಕಿಂತ ಮನುಷ್ಯನ ಅಪಮೌಲ್ಯ ಆಘಾತಕಾರಿ,

ಮೊನ್ನೆಯಷ್ಟೆ ಶಿಕ್ಷಕರ ದಿನ ಆಚರಿಸಿದ್ದೇವೆ. ಇಂದಿನ ಸಂದರ್ಭದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯ ಹಾಗೂ ಅದರ ಅದ್ಭುತ ಸಂವಾಹಕರಾದ ಶಿಕ್ಷಕರ ಯಶಸ್ಸು ಹಾಗೂ ಸಾರ್ಥಕತೆ ಕುರಿತ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಯತ್ನ ಈ ಲೇಖನದಲ್ಲಿದೆ. ಮನುಷ್ಯನ ಅಪಮೌಲ್ಯವನ್ನು ಸರಿಪಡಿಸಬಹುದಾದ ಶಕ್ತಿಯಿರುವುದು ಶಿಕ್ಷಕರಲ್ಲಿ ಮಾತ್ರ.
| ಸ್ವಾಮಿ ವೀರೇಶಾನಂದ ಸರಸ್ವತೀ
ಸನಾತನ ಭಾರತೀಯ ಪರಂಪರೆಯು ಗುರುಶಿಷ್ಯರ ಪವಿತ್ರ ಸಂಬಂಧದ ಕುರಿತಾಗಿ ನೀಡಿದ ಚಿತ್ರಣ ಮನೋಜ್ಞವಾದುದು. ಈ ಸತ್ಯವನ್ನು ಯಥಾವತ್ತಾಗಿ ಪ್ರತಿಪಾದಿಸುವ ವೇದಮಂತ್ರಗಳ ಅರ್ಥ ಹೀಗಿದೆ: ‘ಭಗವಂತನು ಗುರುಶಿಷ್ಯರಾದ ನಮ್ಮಿಬ್ಬರನ್ನೂ ಒಟ್ಟಿಗೆ ಕಾಪಾಡಲಿ. ನಮ್ಮನ್ನು ಒಟ್ಟಿಗೆ ಪೋಷಿಸಲಿ. ನಾವೀರ್ವರೂ ಒಟ್ಟಿಗೆ ವೀರ್ಯವಂತರೂ ಶಕ್ತಿಸಂಪನ್ನರೂ ಆಗುವಂತಾಗಲಿ; ಅಂದರೆ ನಮ್ಮ ಎಲ್ಲ ಕಾರ್ಯಗಳೂ ವೀರ್ಯವತ್ತಾಗಲಿ. ನಾವು ಕೈಗೊಂಡ ಅಧ್ಯಯನವು ತೇಜಸ್ವಿಯಾಗಲಿ, ನಾವುಗಳು ಕೈಗೊಂಡ ಅಧ್ಯಯನವು ನಮ್ಮಲ್ಲಿ ಶಕ್ತಿ
ಪರಾಕ್ರಮಗಳಾಗಿ ಪರಿಣಮಿಸಲಿ, ವ್ಯಕ್ತಿತ್ವದಲ್ಲಿ ವರ್ಚಸ್ಸನ್ನು ಮೂಡಿಸಲಿ. ಗುರುಶಿಷ್ಯರಾದ ನಮ್ಮಗಳ ನಡುವೆ ದ್ವೇಷ ಸುಳಿಯದಿರಲಿ, ಭಗವಂತನ ಕೃಪೆಯಿಂದ ನಮ್ಮೀರ್ವರ ನಡುವೆ ಮಧುರವಾದ ಸ್ನೇಹ ಸೌಹಾರ್ದಗಳು ನೆಲೆಗೊಳ್ಳಲಿ. ನಮಗೆ ಶಾಂತಿ ದೊರೆಯಲಿ, ಶಾಂತಿ ದೊರೆಯಲಿ,
ಶಾಂತಿ ದೊರೆಯಲಿ!’
ಮೇಲಿನ ಸಂದೇಶದಲ್ಲಿ ನಿಖರತೆ ಇದೆ, ಸಾಮಾಜಿಕ ಬದ್ಧತೆ ಇದೆ, ಮಾನವೀಯ ಸಂಬಂಧಗಳ ಯೋಗ್ಯ, ಉತ್ತಮ ಸ್ವರೂಪದ ಚಿತ್ರಣವಿದೆ, ಶಾಂತಿ ಸ್ಥಾಪಿಸುವ ಸೂತ್ರವಿದೆ ಮತ್ತು ಭಗವಂತನ ಕೃಪೆಗೆ ಮೊರೆ ಇದೆ!
ಸ್ವಾಮಿ ವಿವೇಕಾನಂದರೆನ್ನುತ್ತಾರೆ- ‘ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು ಯೋಗ್ಯ ಶಿಕ್ಷಣದಿಂದ ಮಾತ್ರ!’. ಅವರು ಯೋಗ್ಯ ಶಿಕ್ಷಣದ ಬಗ್ಗೆ ನೀಡಿದ ವ್ಯಾಖ್ಯಾನವೂ ಆಲೋಚನೀಯ: ‘ಮಾನವನಲ್ಲಿ ಅದಾಗಲೇ ಸುಪ್ತವಾಗಿರುವ ಪರಿಪೂರ್ಣತೆಯ ಅಭಿವ್ಯಕ್ತತೆಯೇ ಶಿಕ್ಷಣ’. ಅಂದರೆ ವ್ಯಕ್ತಿಯಲ್ಲಿ ಪರಿಪೂರ್ಣತೆ ಇರುವುದಂತೂ ನಿಶ್ಚಿತ! ಆದರೆ ಅದರ ಅಭಿವ್ಯಕ್ತಿ ಕಾರ್ಯಕ್ಕೆ ಮುಂದಾಗಬೇಕಿದೆ. ಈ ಮಹತ್ ಕಾರ್ಯವನ್ನು ಸಮರ್ಪಕವಾಗಿ ಮಾಡುವ ದೈವಸ್ವರೂಪಿಯೇ ಗುರು. ತತ್ತ್ವಗಳ ಮೂರ್ತರೂಪ ಇಲ್ಲಿ ಶಿಕ್ಷಕನೇ ಆಗಿರುವುದರಿಂದ ನಮ್ಮ ಮುಂದಿರುವ ಭರವಸೆ, ಆಸರೆ, ಆದರ್ಶ, ಊರುಗೋಲು
ನಿಸ್ಸಂದೇಹವಾಗಿ ಶಿಕ್ಷಕನೇ!
ಶಿಕ್ಷಕನಲ್ಲಿ ಸಮಾಜಕ್ಕೆ ಅಪಾರವಾದ ನಂಬಿಕೆ ಇರುವುದರಿಂದ ಈ ನಂಬಿಕೆಯು ರಾಷ್ಟ್ರದ ಆಸ್ತಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎಂಬ ಮಾತಂತೂ ಉತ್ಪ್ರೇಕ್ಷೆಯಲ್ಲ.
ಕಠೋಪನಿಷತ್, ‘ಆತ್ಮನಾ ವಿಂದತೇ ವೀರ್ಯಂ’, ಅಂದರೆ ಆತ್ಮಜ್ಞಾನದಿಂದ ಮಾನವನು ಶಕ್ತಿಯ ಆಗರವಾಗುತ್ತಾನೆ ಎಂದಿದೆ. ಸ್ವಾಮಿ ವಿವೇಕಾನಂದರ ಶಿಕ್ಷಣ ಕುರಿತಾದ ವಿಶ್ಲೇಷಣೆಯ ಆಧಾರದ ಮೇಲೆ ಚಿಂತನೆ ನಡೆಸಿದಾಗ ಶಿಕ್ಷಣವು ‘ಆಧ್ಯಾತ್ಮಿಕತೆಯ ಅಭಿವ್ಯಕ್ತಿಯು ಮಾನವನ ಹಕ್ಕು’ ಎಂದು ಹೇಳುವುದಷ್ಟೇ ಅಲ್ಲದೆ ಇತರರಲ್ಲೂ ಈ ಶಕ್ತಿಯ ಅಭಿವ್ಯಕ್ತಿಗೆ ಮಾನವನು ಪ್ರೇರಣಾಶಕ್ತಿ ಆಗಬೇಕೆಂಬುದು ನಿಶ್ಚಿತ ಅಭಿಮತ.
ಮಾನವನ ವಿಕಾಸದ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಶಿಕ್ಷಣವು ಆತನನ್ನು ಜೈವಿಕ ವಿಕಾಸಕ್ಕೆ ಅತೀತವಾದ ಮಾನಸಿಕ ಹಾಗೂ ಸಾಮಾಜಿಕ ವಿಕಾಸದ ಹಂತದಲ್ಲಿ ವ್ಯವಹರಿಸಲು ಪ್ರೇರಣೆ ನೀಡುತ್ತದೆ!
ಅಂತರಂಗದ ಯಾತ್ರೆ: ವಿಕಾಸದ ಕುರಿತಾದ ಕಥೆ ನಿಜಕ್ಕೂ ರೋಚಕವಾದದ್ದು. ಪ್ರಾರಂಭಿಕ ಹಂತದಲ್ಲಿ ಮಾನವನು ಸಮಾಜದ ಸಹಮಾನವರ ಹಾಗೂ ಸನ್ನಿವೇಶಗಳ ನಿರ್ದೇಶನ ಹಾಗೂ ಮಾರ್ಗದರ್ಶನಕ್ಕೆ ಒಳಪಟ್ಟು ಒಂದು ರೀತಿಯಲ್ಲಿ ಬಹಿರಂಗ ಶಕ್ತಿಗಳ ‘ಕೈಗೊಂಬೆ’ಯೇ ಆಗಿರುತ್ತಾನೆ! ಆದರೆ ವಿಕಾಸದ ಪಯಣ ಆಂತರಿಕವಾಗಿ ಮುಂದುವರಿದಾಗ ಅವನು ಇಲ್ಲಿಯವರೆಗೆ ಎದುರಿಸುತ್ತ ಹೋದದ್ದು ಬಹಿರಂಗ ಜಗತ್ತಾದರೂ ಇದೀಗ ತನ್ನನ್ನು ತಾನೇ ಎದುರಿಸಬೇಕಾಗುತ್ತದೆ! ಅಲ್ಲದೆ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಬಹಿರಂಗ ಜಗತ್ತಿನಲ್ಲಿ ಅಡಿಯಾಳೆನಿಸಿದ್ದ ಅವನಿಗೆ ಅಂತರಂಗ ಜಗತ್ತು ‘ಎಚ್ಚರಿಕೆಯ ಯಜಮಾನಿಕೆ’ ನೀಡುತ್ತದೆ! ಅಂತರಂಗಕ್ಕಿಂತ ಮತ್ತೊಂದು ಉತ್ಕೃಷ್ಟ ನ್ಯಾಯಾಲಯವಿಲ್ಲ; ಆತ್ಮಸಾಕ್ಷಿಗಿಂತ ತೀರ್ಪು ಜಗತ್ತಿನಲ್ಲಿಲ್ಲ!
ಭೌತಿಕ ಆಯಾಮದಲ್ಲಿ ಬಂಧಿಸಲ್ಪಟ್ಟಿದ್ದ ಮಾನವ ಕುಬ್ಜನಾಗಿ ವ್ಯವಹರಿಸಿದ್ದು ನಿಜವಾದರೂ ಆಧ್ಯಾತ್ಮಿಕ ಶಿಕ್ಷಣವು ಅವನಲ್ಲಿ ನೈತಿಕ ಶಿಸ್ತು, ಸ್ವನಿಯಂತ್ರಣ ಹಾಗೂ ಸಾಮಾಜಿಕರಲ್ಲಿ ಅನುಕಂಪ ಮೂಡಿಸುತ್ತದೆ! ಅಂದರೆ ಮಾನವನು ಅಂತರಂಗದಲ್ಲಿ ಭಗವಂತನ ಕಡೆಗೆ ಚಲಿಸಿದಷ್ಟೂ ಬಹಿರಂಗದಲ್ಲಿ ಸಹಮಾನವರತ್ತ ಧಾವಿಸಲು ಸಾಧ್ಯವಾಗುತ್ತದೆ!
ಇದೇ ಸಂದರ್ಭದಲ್ಲಿ ವಸ್ತುಸ್ಥಿತಿಯನ್ನು ಗಮನಿಸಿದರೆ ನಾಗರಿಕ ಜೀವನವು ಮನುಷ್ಯನನ್ನು ದುಃಖ, ಸಂಕಷ್ಟಗಳ ಮಡುವಿನಲ್ಲಿ ಮುಳುಗಿಸಿರುವ ಚಿತ್ರಣ ಕಣ್ಣಮುಂದೆ ಬರುತ್ತದೆ. ಆಧುನಿಕ ಶಿಕ್ಷಣ ಮಾನವನನ್ನು ಪಾಂಡಿತ್ಯದ ದೃಷ್ಟಿಯಲ್ಲಿ ಗರಿಷ್ಠ ಮಟ್ಟದಲ್ಲಿ ಬೆಳೆಸಿದರೆ ನೈತಿಕತೆಯ ವಿಚಾರದಲ್ಲಿ ಅವನನ್ನು ಕನಿಷ್ಠ ಮಟ್ಟದಲ್ಲಿಟ್ಟಿದೆ! ಅಂದರೆ ಮಾನವನ ಮಾನಸಿಕ ಶಕ್ತಿಯ ವಿಕಾಸವು ಸ್ಥಗಿತಗೊಂಡಿದೆ, ತತ್ಪರಿಣಾಮವಾಗಿ ಮಾನವ ಸ್ವಾರ್ಥಿಯಾಗಿದ್ದಾನೆ! ಅವನ ಅಪಕ್ವ ಅಹಂಕಾರದ ಪೋಷಣೆಗೆ ಹಾಗೂ ಭೌತಿಕ ತೃಷೆಯನ್ನು ತೃಪ್ತಿಗೊಳಿಸುವ ಕಾರ್ಯದಲ್ಲೇ ಅವನೆಲ್ಲ ಶಕ್ತಿಗಳು ವ್ಯಯವಾಗುತ್ತಿವೆ.
‘ಆಧ್ಯಾತ್ಮಿಕ ವಿಕಾಸದಿಂದ ಮಾತ್ರವೇ ನಾಗರಿಕತೆಗಳ ಉಳಿವು’ ಎಂಬ ಸತ್ಯವನ್ನು ನಾವಿಂದು ಅರಿಯಬೇಕಿದೆ.
ಸ್ವಾಮಿ ವಿವೇಕಾನಂದರು, ‘ಯಾವ ಶಿಕ್ಷಣವು ಪ್ರಾರಂಭದಲ್ಲಿಯೇ ಹೆಚ್ಚಿನ ಪ್ರಮಾಣದ ಆಹಾರ ಹಾಗೂ ಸುಖಭೋಗಗಳನ್ನು ದೊರಕಿಸಿಕೊಡುತ್ತದೆಯೋ ಅದು ಮೊದಲು ಅದ್ಭುತವಾಗಿ ಗೋಚರಿಸಿದರೂ ಕಾಲಕ್ರಮೇಣ ಕಳಪೆಗೊಳ್ಳುತ್ತ ಅವಸಾನದ ಹಾದಿ ಹಿಡಿಯುತ್ತದೆ. ಕೇವಲ ಭೌತಿಕ ಸಮೃದ್ಧಿಯನ್ನೇ ನಿರೀಕ್ಷಿಸಿ ಮುಂದುವರಿದರೆ ಸಮಾಜದಲ್ಲಿ ದ್ವೇಷಾಸೂಯೆಗಳು ತೀಕ್ಷ್ಣಗೊಳ್ಳುತ್ತವೆ. ಇಂತಹ ಬೆಳವಣಿಗೆಯಿಂದ ಸಮಾಜವು ಸ್ಪರ್ಧೆ ಮತ್ತು ನಿರ್ದಾಕ್ಷಿಣ್ಯವಾದ ಕ್ರೌರ್ಯದತ್ತ ಮುನ್ನಡೆಯುತ್ತದೆ, ಎಚ್ಚರ!’ ಎಂದಿದ್ದಾರೆ. ಮುಂದುವರಿದು ಹೇಳುತ್ತಾರೆ, ‘ಅಪವಿತ್ರತೆಯಿಂದ ಒಡಮೂಡಿದ,  ಅತಿಯಾದ ಜ್ಞಾನ ಮತ್ತು ಶಕ್ತಿಗಳು ಮಾನವನನ್ನು ದಾನವನನ್ನಾಗಿಸುತ್ತವೆ’.
ನೊಬೆಲ್ ಪುರಸ್ಕೃತ ವಿಜ್ಞಾನಿ ಆಲ್ಬರ್ಟ್ ಐನ್​ಸ್ಟೀನ್ ಅಭಿಪ್ರಾಯವೂ ಉಲ್ಲೇಖಯೋಗ್ಯ. ‘ಸ್ಪರ್ಧಾತ್ಮಕ ವ್ಯವಸ್ಥೆಯ ಅತಿಯಾದ ಬಳಕೆ ಮಾನವನ ಸಾಂಸ್ಕೃತಿಕ ಜೀವನಕ್ಕೆ ಅಡಿಪಾಯ ಎನಿಸಿರುವ ಮನೋಧರ್ಮಗಳನ್ನೇ ನಾಶಮಾಡುತ್ತದೆ!’ ‘ವ್ಯಕ್ತಿತ್ವ ನಿರ್ವಣದ ಮೂಲಕ ಮಾತ್ರವೇ ರಾಷ್ಟ್ರನಿರ್ವಣ ಸಾಧ್ಯ’ ಎಂದ ಸ್ವಾಮಿ ವಿವೇಕಾನಂದರು ಮಾನವಜನ್ಮದ ಸಾರ್ಥಕ್ಯಕ್ಕೆ ರಾಜಕಾರಣ, ಅರ್ಥಶಾಸ್ತ್ರ, ವಿಜ್ಞಾನ, ಧರ್ಮ- ಇವೇ ಮೊದಲಾದ ವಿಚಾರಗಳ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ‘ನಾವು ರಾಜಕೀಯ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಸಾಧಿಸುವುದು ಗಮನೀಯ ವಿಚಾರವಾದರೂ ಮಾನವನಿಗೆ ನಿಜವಾದ ಸ್ವಾತಂತ್ರ್ಯ ಮತ್ತು ಆನಂದಗಳು ಪ್ರಾಪ್ತವಾಗುವುದು ಅವನು ತನ್ನ ಬಯಕೆಗಳು ಮತ್ತು ಮನೋವಿಕಾರಗಳಿಂದ ಮುಕ್ತನಾದಾಗ ಮಾತ್ರ’ ಎಂದಿದ್ದಾರೆ.
ಬರ್ನಾರ್ಡ್ ಷಾ ‘ಸಂತೋಷ’ಕ್ಕೆ ನೀಡಿದ ವ್ಯಾಖ್ಯಾನ ಮನೋಜ್ಞವಾದದ್ದು: ‘ಮಹೋನ್ನತ ಉದ್ದೇಶಕ್ಕಾಗಿ ನನ್ನನ್ನು ಸರಿಪಡಿಸಿಕೊಳ್ಳುವುದು ಹಾಗೂ ಪ್ರಕೃತಿಯ ಶಕ್ತಿಯಾಗುವುದು ಜೀವನದ ಸಂತೋಷವೇ ಹೊರತು ಕೇವಲ ದುಃಖ ಸಂಕಟಗಳ ಮುದ್ದೆಯಾಗಿ ಪ್ರಪಂಚವೇ ನನ್ನನ್ನು ಸುಖವಾಗಿಡಲು ಸರಿಯಾಗಿ ಸಮರ್ಪಿಸಿಕೊಳ್ಳಲಿಲ್ಲ’ ಎಂದು ಗೊಣಗುವುದಲ್ಲ.
ಮಹಾಭಾರತದಲ್ಲಿ ರಾಣಿ ವಿದುಲಾ ತನ್ನ ಮಗ ಸಂಜಯನಿಗೆ ಹೇಳುತ್ತಾಳೆ: ‘ಮುಹೂರ್ತಂ ಜ್ವಲಿತಂ ಶ್ರೇಯೋ ನ ತು ಧೂಮಾಯಿತಂ ಚಿರಮ್. ಅಂದರೆ ಯುಗಯುಗಗಳವರೆಗೆ ಹೊಗೆಯಾಡುವುದಕ್ಕಿಂತ ಕ್ಷಣಮಾತ್ರ ಜ್ವಲಿಸುವುದು ಲೇಸು! ಶ್ರೀ ರಾಮಕೃಷ್ಣರೆನ್ನುತ್ತಾರೆ- ‘ತನ್ನವರಿಗೆ ಅಂಟಿಕೊಳ್ಳುವುದೇ ಮಾಯೆ; ಸಕಲರನ್ನು ಪ್ರೀತಿಸುವುದೇ ದಯೆ’.
ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಿಸಿದ ಶಿಕ್ಷಣವು ಅತ್ಯಂತ ದುರ್ಬಲವಾಗಿದೆ. ಸಮಾಜವು ದೈನ್ಯತೆಯಲ್ಲಿ ಸಾಗಿದೆ. ನಾವಿಂದು ರಾಷ್ಟ್ರವನ್ನು ಪ್ರೀತಿಸಿ, ಗೌರವಿಸುವ ಜೀವನ ವಿಧಾನವನ್ನು, ಮಾತೃಭೂಮಿಯ ಬಗ್ಗೆ ಬದ್ಧತೆಯನ್ನು ಮೂಡಿಸಬಹುದಾದ ಶಿಕ್ಷಣದಿಂದ ನಮ್ಮ ಮಕ್ಕಳನ್ನು ವಂಚಿತರನ್ನಾಗಿಸಿದ್ದೇವೆ. ಅಕ್ಷರಗಳಲ್ಲಿ ಶಕ್ತಿ ಕ್ಷೀಣಿಸುತ್ತಿದೆ, ಅಕ್ಷರಸ್ಥರು ಅನಕ್ಷರಸ್ಥರ ದೃಷ್ಟಿಯಲ್ಲಿ ಅನುಮಾನದ ವ್ಯಕ್ತಿಗಳಾಗಿದ್ದಾರೆ! ಸಾಕ್ಷರತೆಯ ರಾಕ್ಷಸರ ನಿರ್ಮಾಣ ಕಾರ್ಯ ವಿಶ್ವವಿದ್ಯಾಲಯಗಳಿಂದ ಯಥೇಚ್ಛವಾಗಿ ಸಾಗಿದೆ. ಅಕ್ಷರಸ್ಥರು ತಮ್ಮನ್ನು ‘ವಿದ್ಯಾವಂತ’ರೆಂಬ ಭ್ರಮೆಯಲ್ಲಿ ಬಂಧಿಸಿಕೊಂಡಿದ್ದಾರೆ!
ಕೇವಲ ವಯೋಮಾನದ ಪೌರತ್ವ ನಮಗೆ ದೊರೆತಿದೆ. ಗಛಿ ಚ್ಟಛಿ ಞಟ್ಟಛಿ ಛಟಞಜ್ಞಿಚ್ಞಠಿ ಜ್ಞಿ ಡಟಠಿಛ್ಟಿಠ ್ಝಠಠಿ ಚ್ಞಛ ್ಟಠಿಜಿಟ್ಞ ್ಚ್ಟಠ! ಈ ಪೌರತ್ವವು ಮಾನವನನ್ನು ಹತಾಶಗೊಳಿಸುತ್ತ ಸಾಗಿದೆ, ತತ್ಪರಿಣಾಮವಾಗಿ ರಾಷ್ಟ್ರವು ದುರ್ಬಲವಾಗುತ್ತ ನಡೆದಿದೆ! ಇದರ ದುಷ್ಪರಿಣಾಮ ಮತ್ತೂ ಭೀಕರವಾಗಿ ಸಾಗಿದೆ! ಅರ್ಹರಾದ ಮಾನವ ಸಂಪನ್ಮೂಲ ಒಂದೆಡೆಯಾದರೆ ಅರ್ಹತೆಯಿಲ್ಲದ ರಕ್ತಸಂಬಂಧಗಳು ಮತ್ತೊಂದೆಡೆ! ಎರಡನೇ ಗುಂಪೇ ವಿಕೃತ ಗೆಲುವನ್ನು ಸಾಧಿಸುತ್ತಾ ನಡೆದಿದೆ. ಇದರ ಪರಿಣಾಮವಾಗಿ ಸ್ವಜನ ಪಕ್ಷಪಾತ, ಲಂಚಕೋರತನ, ಅಧರ್ಮ ಹಾಗೂ ಅನಿಷ್ಠ ವ್ಯವಹಾರಗಳು ರಾಜಾರೋಷವಾಗಿ ಸಾಗುತ್ತಲಿವೆ. ಇಂದು ನಿರ್ಣಯವನ್ನು ನ್ಯಾಯಸಮ್ಮತವಾಗಿ ನೀಡದ ಪ್ರಜೆಗಳು ನೈತಿಕತೆಯನ್ನು ಕಳೆದುಕೊಂಡಿದ್ದಾರೆ!
ಖ್ಯಾತ ಉದ್ಯಮಿ ಜೆ.ಆರ್.ಡಿ.ಟಾಟಾ ಹೇಳುವಂತೆ, ‘ಯೋಜನೆಯೊಂದನ್ನು ಕಾಗದದ ಮೇಲೆ ಮುದ್ರಿಸಿದಾಕ್ಷಣ ಅದು ಪರಿಣಾಮಕಾರಿ ಅನುಷ್ಠಾನವನ್ನು ಸಾಧಿಸಿದಂತಾಗದು. ತಟ್ಟೆಯ ಮೇಲಿರುವ ಆಹಾರ ಎಷ್ಟೇ ಪೌಷ್ಟಿಕವಾಗಿದ್ದರೂ ಅದು ಶಕ್ತಿ ನೀಡುವುದು ನಾವದನ್ನು ಸಮರ್ಪಕವಾಗಿ ಜೀರ್ಣಿಸಿಕೊಂಡಾಗ ಮಾತ್ರ! ಆದ್ದರಿಂದ ಆಳವಾದ ಚಿಂತನೆ ಹಾಗೂ ಆಲೋಚನೆಗಳಷ್ಟೇ ನಮ್ಮಿಂದ ಶ್ರೇಷ್ಠವಾದುದನ್ನು ಸಾಧಿಸಲು ಅನುವು ಮಾಡಿಕೊಡುತ್ತವೆ’.
ಶಿಕ್ಷಣದ ಉದಾತ್ತೀಕರಣ ಹಾಗೂ ಪವಿತ್ರೀಕರಣದ ಬಗ್ಗೆ ಶಿಕ್ಷಕರು ಆತ್ಮಸಾಕ್ಷಿಪೂರ್ವಕವಾಗಿ ಚಿಂತಿಸಬೇಕಿದೆ! ಸಮಾಜದಲ್ಲಿ ಆತ್ಮಘಾತುಕ ಕಾರ್ಯಗಳಿಗೆ ಯಾವ ಅಂಶಗಳು ಪ್ರೇರಣೆಯಾಗಿವೆ ಎಂಬುದನ್ನು ಪತ್ತೆಹಚ್ಚಲೇಬೇಕಿದೆ. ಪರೀಕ್ಷೆಯಲ್ಲಿ ಸಿ.ಸಿ. ಕ್ಯಾಮರಾಗಳು ನಮ್ಮ ಮಕ್ಕಳ ಪ್ರಾಮಾಣಿಕತೆಯನ್ನು ಮತ್ತು ಕಚೇರಿಗಳಲ್ಲಿ ಬಯೋಮೆಟ್ರಿಕ್ ಯಂತ್ರವು ಸಿಬ್ಬಂದಿಯ ಸಮಯಪಾಲನೆಯನ್ನು ನಿರ್ಧರಿಸುವುದಾದರೆ ನಮ್ಮ ವ್ಯಕ್ತಿತ್ವದ ಅಪರಿಪೂರ್ಣತೆ ನಮಗೆ ಅರ್ಥವಾಗಲೇಬೇಕು! ‘ಎಲ್ಲ ಸುಂದರ ವಸ್ತುಗಳೂ ಶ್ರೇಷ್ಠಗುಣದವಾಗಿರಬೇಕು ಎಂದೇನಿಲ್ಲ; ಆದರೆ ಎಲ್ಲ ಉತ್ತಮ ಸಂಗತಿಗಳೂ ಸುಂದರ’ ಎಂಬ ವಿದುರನೀತಿಯ ಮಾತು
ಮನವರಿಕೆ ಆಗಬೇಕಿದೆ!
ಶಿಕ್ಷಕನು ಎಂದೆಂದಿಗೂ ಪ್ರಾತಃಸ್ಮರಣೀಯನೇ ಹೌದು. ಅವನು ಹಾಲಲ್ಲೋ ಹಾಲಾಹಲದಲ್ಲೋ ಸಮಾಜವನ್ನು ದೂಡಿದರೂ ಸರಿಯೇ, ಸಮಾಜವಂತೂ ಅವನನ್ನು ನೆಚ್ಚಿದೆ! ಕೆಲವು ದಶಕಗಳ
ಹಿಂದೆ ಶಿಕ್ಷಕನ ಬತ್ತಳಿಕೆಯಲ್ಲಿ ಒಂದೇ ಬಾಣವಿತ್ತು. ಅದು ತಾನೂ ಕಲಿತು ಇತರರನ್ನೂ ಮಾನವ ಸಂಪನ್ಮೂಲವಾಗಿ ಪರಿವರ್ತಿಸುವ
ಸಾಮರ್ಥ್ಯವಿದ್ದ ಬಾಣ! ಇಂದು ಆತನ ಬತ್ತಳಿಕೆಯಲ್ಲಿ ಹಲವಾರು ಬಾಣಗಳಿವೆ. ಆದರೆ ಅವುಗಳಲ್ಲಿ ಪಾಠಪ್ರವಚನ ಮಾಡುವುದೂ
ಒಂದು ಬಾಣ ಅಷ್ಟೇ!
ರೂಪಾಯಿಯ ಅಪಮೌಲ್ಯಕ್ಕೆ ಇಂದು ದೇಶ ಕಕ್ಕಾಬಿಕ್ಕಿ ಆಗಿದೆ. ಆದರೆ ಮನುಷ್ಯನೇ ಅಪಮೌಲ್ಯವಾಗಿರುವುದು ದೊಡ್ಡ ದುರಂತವಲ್ಲವೇ? ಇದನ್ನು ಸರಿಪಡಿಸಬಹುದಾದವನು ಶಿಕ್ಷಕ, ಶಿಕ್ಷಕ ಮಾತ್ರ! ಆದ್ದರಿಂದ ‘ಕಲಿಯಲು ಆಸಕ್ತಿಯುಳ್ಳವನು ಮಾತ್ರವೇ ಕಲಿಸಲು ಯೋಗ್ಯ’ ಎಂಬ ಧ್ಯೇಯವಾಕ್ಯವು ನಮ್ಮ ಶಿಕ್ಷಕರ ಉಸಿರಾಗಲಿ. ‘ಹರ ಮುನಿದರೆ ಗುರು ಕಾಯ್ವನು; ಗುರು ಮುನಿದರೆ ಗತಿ ಯಾರು?’
(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....