ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಕೊಹ್ಲಿ, ಮೀರಾಬಾಯಿಗೆ ಖೇಲ್​ರತ್ನ ಶಿಫಾರಸು,

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವಿಶ್ವ ಚಾಂಪಿಯನ್ ವೇಟ್​ಲಿಫ್ಟರ್ ಮೀರಾಬಾಯಿ ಚಾನು ಈ ವರ್ಷದ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್​ರತ್ನ ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ಈ ಕ್ರೀಡಾತಾರೆಯರ ಹೆಸರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಪ್ರಶಸ್ತಿ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಜತೆಗೆ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಮತ್ತು ಕರ್ನಾಟಕದ ಟೆನಿಸ್ ತಾರೆ ರೋಹನ್ ಬೋಪಣ್ಣ ಸಹಿತ 20 ಕ್ರೀಡಾಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಕ್ರೀಡಾ ಸಚಿವಾಲಯದ ಒಪ್ಪಿಗೆ ಸಿಕ್ಕ ಬಳಿಕ ಪ್ರಶಸ್ತಿ ವಿಜೇತರ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ.
 ಖೇಲ್​ರತ್ನಕ್ಕೆ ಕೊಹ್ಲಿ ಮತ್ತು ಮೀರಾಬಾಯಿ ಹೆಸರು ಶಿಫಾರಸು ಮಾಡಿರುವುದನ್ನು ನಿವೃತ್ತ ನ್ಯಾಯಾಧೀಶ ಐ.ಕೆ. ಕೋಚರ್ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿಯ ಮೂಲಗಳು ತಿಳಿಸಿವೆ. ಕೊಹ್ಲಿ ಹೆಸರು ಸತತ 3ನೇ ವರ್ಷ ಖೇಲ್​ರತ್ನಕ್ಕೆ ಶಿಫಾರಸುಗೊಂಡಿತ್ತು. 2016ರಲ್ಲಿ ಅವರು ರಿಯೋ ಒಲಿಂಪಿಕ್ಸ್ ಸಾಧಕರ ಎದುರು ನಿರಾಸೆ ಅನುಭವಿಸಿದ್ದರೆ, ಕಳೆದ ವರ್ಷ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಮತ್ತು ಪ್ಯಾರಾ ಅಥ್ಲೀಟ್ ದೇವೇಂದ್ರ ಜಜಾರಿಯಾ ಎದುರು ನಿರಾಸೆ ಅನುಭವಿಸಿದ್ದರು. ಈ ವರ್ಷ ಕೊನೆಗೂ ಕೊಹ್ಲಿಗೆ ಅದೃಷ್ಟ ಖುಲಾಯಿಸಿದೆ. -ಪಿಟಿಐ
ಶ್ರೀಕಾಂತ್ ಮೂರನೇ ಆಯ್ಕೆ
ಕಳೆದ ವರ್ಷ ಸೂಪರ್ ಸಿರೀಸ್ ಟೂರ್ನಿಗಳಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ ಷಟ್ಲರ್ ಕಿಡಂಬಿ ಶ್ರೀಕಾಂತ್ ಹೆಸರು ಖೇಲ್​ರತ್ನ ಪ್ರಶಸ್ತಿಯ ಪೈಪೋಟಿಯಲ್ಲಿತ್ತು. ಕೊನೆಕ್ಷಣದಲ್ಲಿ ಮೀರಾಬಾಯಿ ಎದುರು ಶ್ರೀಕಾಂತ್ ಹಿನ್ನಡೆ ಕಂಡರು. ಆದರೆ ಈ ವರ್ಷವೇ 3ನೇ ಖೇಲ್​ರತ್ನ ಪ್ರಶಸ್ತಿ ನೀಡಲು ಅವಕಾಶವಿದ್ದರೆ ಅದನ್ನು ಶ್ರೀಕಾಂತ್​ಗೆ ನೀಡಬೇಕೆಂದು ಕ್ರೀಡಾ ಸಚಿವಾಲಯಕ್ಕೆ ಪ್ರಶಸ್ತಿ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. 2016ರ ಒಲಿಂಪಿಕ್ಸ್ ವರ್ಷದಲ್ಲಿ ನಾಲ್ವರಿಗೆ ಖೇಲ್​ರತ್ನ ಪ್ರಶಸ್ತಿ ನೀಡಿದ ದೃಷ್ಟಾಂತವಿದೆ.
ಸೆಪ್ಟೆಂಬರ್ 25ಕ್ಕೆ ಪ್ರಶಸ್ತಿ ಪ್ರದಾನ
ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನವಾದ ಆ. 29ರಂದು ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಅದೇ ಸಮಯದಲ್ಲಿ ನಡೆಯುತ್ತಿದ್ದ ಏಷ್ಯಾಡ್​ನಿಂದಾಗಿ ಸೆ. 25ಕ್ಕೆ ಸಮಾರಂಭ ಮುಂದೂಡಲ್ಪಟ್ಟಿದೆ. ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕೊಹ್ಲಿ ವಿಶ್ವ ನಂ. 1 ಟೆಸ್ಟ್, ಏಕದಿನ ಬ್ಯಾಟ್ಸ್​ಮನ್
ಟೀಮ್ ಇಂಡಿಯಾ ನಾಯಕರಾಗಿ ವಿರಾಟ್ ಕೊಹ್ಲಿ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಪ್ರವಾಸಗಳ ಟೆಸ್ಟ್ ಸರಣಿಗಳಲ್ಲಿ ಹೆಚ್ಚಿನ ಯಶಸ್ಸು ಕಾಣದಿದ್ದರೂ, ಬ್ಯಾಟ್ಸ್ ಮನ್ ಆಗಿ ವೈಯಕ್ತಿಕ ಯಶ ಕಂಡಿದ್ದಾರೆ. ಐಸಿಸಿ ಟೆಸ್ಟ್ ಮತ್ತು ಏಕದಿನ ರ್ಯಾಂಕಿಂಗ್​ನಲ್ಲಿ ಅವರು ಹಾಲಿ ನಂ. 1 ಬ್ಯಾಟ್ಸ್ ಮನ್ ಆಗಿದ್ದಾರೆ. 29 ವರ್ಷದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 58 ಶತಕ ಸಿಡಿಸಿದ್ದಾರೆ. ಕೊಹ್ಲಿ ಖೇಲ್​ರತ್ನ ಪ್ರಶಸ್ತಿಗೆ ಭಾಜನರಾಗುತ್ತಿರುವ 3ನೇ ಕ್ರಿಕೆಟಿಗರಾಗಿದ್ದಾರೆ. ಸಚಿನ್ ತೆಂಡುಲ್ಕರ್ 1997 ಮತ್ತು ಮಹೇಂದ್ರ ಸಿಂಗ್ ಧೋನಿ 2007ರಲ್ಲಿ ಈ ಪ್ರಶಸ್ತಿ ಪಡೆದಿದ್ದರು.
ಮೀರಾಬಾಯಿ ಚಾನು ವಿಶ್ವ ಚಾಂಪಿಯನ್ ವೇಟ್​ಲಿಫ್ಟರ್
ಮಣಿಪುರದ 24 ವರ್ಷದ ಮೀರಾಬಾಯಿ ಚಾನು ವೇಟ್​ಲಿಫ್ಟಿಂಗ್​ನಲ್ಲಿ 48 ಕೆಜಿ ವಿಭಾಗದ ಹಾಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಕಳೆದ ವರ್ಷ ಚಿನ್ನದ ಪದಕ ಗೆಲ್ಲುವ ಮೂಲಕ ಅವರು ಕರ್ಣಂ ಮಲ್ಲೇಶ್ವರಿ (1995) ಬಳಿಕ ವಿಶ್ವ ಚಾಂಪಿಯನ್​ಷಿಪ್ ಸ್ವರ್ಣ ಗೆದ್ದ ಮೊದಲ ಭಾರತೀಯ ವೇಟ್​ಲಿಫ್ಟರ್ ಎನಿಸಿದ್ದರು. ಈ ವರ್ಷ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಚಿನ್ನ ಗೆದ್ದಿದ್ದ ಚಾನು, ಬೆನ್ನು ನೋವಿನ ಸಮಸ್ಯೆಯಿಂದಾಗಿ ಕಳೆದ ಏಷ್ಯನ್ ಗೇಮ್ಸ್​ನಿಂದ ಹೊರಗುಳಿದಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಪ್ರಮುಖ ಪದಕದ ಆಕಾಂಕ್ಷಿಯೂ ಅವರಾಗಿದ್ದಾರೆ.
ಬೋಪಣ್ಣ, ನೀರಜ್, ಹಿಮಾಗೆ ಅರ್ಜುನ
ಕನ್ನಡಿಗ ರೋಹನ್ ಬೋಪಣ್ಣ, ಅಥ್ಲೆಟಿಕ್ಸ್​ನ ಯುವ ತಾರೆಯರಾದ ನೀರಜ್ ಚೋಪ್ರಾ, ಹಿಮಾ ದಾಸ್, ಮಹಿಳಾ ಕ್ರಿಕೆಟರ್ ಸ್ಮೃತಿ ಮಂದನಾ, ಟೇಬಲ್ ಟೆನಿಸ್ ತಾರೆ ಮನಿಕಾ ಬಾತ್ರಾ, ಮಹಿಳಾ ಹಾಕಿ ತಂಡದ ಗೋಲ್ ಕೀಪರ್ ಸವಿತಾ ಸಹಿತ 20 ಕ್ರೀಡಾಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಏಷ್ಯಾಡ್ ಸ್ವರ್ಣ ವಿಜೇತ ಬಾಕ್ಸರ್ ಅಮಿತ್ ಪಾಂಗಲ್ ಹೆಸರು ಅರ್ಜುನಕ್ಕೆ ಶಿಫಾರಸುಗೊಂಡಿದ್ದರೂ, 2012ರಲ್ಲಿ ಅವರು ಉದ್ದೀಪನ ಪರೀಕ್ಷೆಯಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ತಿರಸ್ಕೃತಗೊಂಡಿದ್ದಾರೆ. ಕ್ರಿಕೆಟ್​ನಲ್ಲಿ ಎಡಗೈ ಬ್ಯಾಟ್ಸ್​ಮನ್ ಶಿಖರ್ ಧವನ್ ಹೆಸರು ಅರ್ಜುನಕ್ಕೆ ಶಿಫಾರಸುಗೊಂಡಿದ್ದರೂ, ಅವರು ನಿರಾಸೆ ಅನುಭವಿಸಿದ್ದಾರೆ.
ಪ್ರಶಸ್ತಿಯಲ್ಲಿ ಏನೇನಿದೆ?
1991-92ರಲ್ಲಿ ಆರಂಭಗೊಂಡ ಖೇಲ್​ರತ್ನ ಪ್ರಶಸ್ತಿ ಈಗ 7.5 ಲಕ್ಷ ರೂ. ಬಹುಮಾನ ಒಳಗೊಂಡಿದೆ. ಜತೆಗೆ ಒಂದು ಪದಕ, ಪ್ರಮಾಣಪತ್ರವನ್ನೂ ರಾಷ್ಟ್ರಪತಿ ವಿತರಿಸಲಿದ್ದಾರೆ. ಅರ್ಜುನ ಪ್ರಶಸ್ತಿ 5 ಲಕ್ಷ ರೂ. ನಗದು ಬಹುಮಾನ ಮತ್ತು ಅರ್ಜುನನ ಪ್ರತಿಮೆಯನ್ನು ಒಳಗೊಂಡಿದೆ.
# ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡವರು: ಸ್ಮೃತಿ ಮಂದನಾ (ಕ್ರಿಕೆಟ್), ರೋಹನ್ ಬೋಪಣ್ಣ (ಟೆನಿಸ್), ನೀರಜ್ ಚೋಪ್ರಾ, ಜಿನ್ಸನ್ ಜಾನ್ಸನ್, ಹಿಮಾ ದಾಸ್ (ಅಥ್ಲೆಟಿಕ್ಸ್), ಶುಭಾಂಕರ್ ಶರ್ಮ (ಗಾಲ್ಪ್), ಸತೀಶ್ ಕುಮಾರ್ (ಬಾಕ್ಸಿಂಗ್), ಸಿಕ್ಕಿ ರೆಡ್ಡಿ (ಬ್ಯಾಡ್ಮಿಂಟನ್), ಮನ್​ಪ್ರೀತ್ ಸಿಂಗ್, ಸವಿತಾ (ಹಾಕಿ), ರವಿ ರಾಥೋಡ್ (ಪೋಲೋ), ರಾಹಿ ಸನೋಬಾಟ್, ಅಂಕುರ್ ಮಿತ್ತಲ್, ಶ್ರೇಯಸಿ ಸಿಂಗ್ (ಶೂಟಿಂಗ್), ಮನಿಕಾ ಬಾತ್ರಾ, ಜಿ. ಸತ್ಯನ್ (ಟೇಬಲ್ ಟೆನಿಸ್), ಸುಮಿತ್ (ಕುಸ್ತಿ), ಪೂಜಾ ಕದಿಯನ್ (ವುಶು), ಅಂಕುರ್ ಧಾಮ (ಪ್ಯಾರಾ ಅಥ್ಲೆಟಿಕ್ಸ್), ಮನೋಜ್ ಸರ್ಕಾರ್ (ಪ್ಯಾರಾ ಬ್ಯಾಡ್ಮಿಂಟನ್).
# ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸುಗೊಂಡವರು: ಜೀವನ್​ಜೋತ್ ಸಿಂಗ್ ತೇಜಾ (ಆರ್ಚರಿ), ಎಸ್​ಎಸ್ ಪನ್ನು (ಅಥ್ಲೆಟಿಕ್ಸ್), ಸಿಎ ಕುಟ್ಟಪ್ಪ (ಬಾಕ್ಸಿಂಗ್), ವಿಜಯ್ ಶರ್ಮ (ವೇಟ್​ಲಿಫ್ಟಿಂಗ್), ಶ್ರೀನಿವಾಸ ರಾವ್ (ಟೇಬಲ್ ಟೆನಿಸ್); ಜೀವಮಾನ ಸಾಧನೆ ವಿಭಾಗದಲ್ಲಿ: ಕ್ಲಾರೆನ್ಸ್ ಲೋಬೋ (ಹಾಕಿ), ತಾರಕ್ ಸಿನ್ಹಾ (ಕ್ರಿಕೆಟ್), ಜೀವನ್​ಕುಮಾರ್ ಶರ್ಮ (ಜುಡೋ), ವಿಆರ್ ಬೀಡು (ಅಥ್ಲೆಟಿಕ್ಸ್).
# ಧ್ಯಾನ್​ಚಂದ್ ಪ್ರಶಸ್ತಿಗೆ ಶಿಫಾರಸುಗೊಂಡವರು: ಸತ್ಯದೇವ್ ಪ್ರಸಾದ್ (ಆರ್ಚರಿ), ಭರತ್ ಛೇಟ್ರಿ (ಹಾಕಿ), ಬಾಬಿ ಅಲೋಶಿಯಸ್, ಚೌಗಲೆ ದಾದು ದತ್ತಾತ್ರೇಯ (ಕುಸ್ತಿ).

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....